ತೀವ್ರಗೊಳ್ಳುತ್ತಿದೆ ಉಳ್ಳಾಲ, ಸೋಮೇಶ್ವರ ಕಡಲಬ್ಬರ: ಮುಂದುವರಿದಿದೆ ಕಲ್ಲು ಹಾಕುವ ಕಾರ್ಯ !

ಮಂಗಳೂರು, ಜೂ. 9: ದ.ಕ. ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಮುಂಗಾರು ಮಳೆ ಬಿರುಸುಗೊಂಡಿರುವಂತೆಯೇ ಕಡಲ ನಗರಿಯಾದ ಮಂಗಳೂರಿನಲ್ಲಿ ಕಡಲುಗಳು ಪ್ರಕ್ಷುಬ್ಧಗೊಳ್ಳಲಾರಂಭಿಸಿದೆ. ಉಳ್ಳಾಲ, ಸೋಮೇಶ್ವರದ ಕಡಲ ಕಿನಾರೆಯಲ್ಲಿ ಭಾರೀ ಗಾತ್ರದ ಕಡಲ ಅಲೆಗಳು ತಡೆಗೋಡೆಯಾಗಿ ಹಾಕಲ್ಪಟ್ಟಿರುವ ಬೃಹತ್ ಗಾತ್ರದ ಕಲ್ಲುಗಳನ್ನು ಅಪ್ಪಳಿಸಿ ಸಮೀಪದ ಮನೆಗಳತ್ತ ನುಗ್ಗಲಾರಂಭಿಸಿವೆ.
ಈ ನಡುವೆಯೇ ಉಳ್ಳಾಲದ ಕೈಕೋ, ಕೋಟೆಪುರ ಪ್ರದೇಶಗಳಲ್ಲಿ ಮನೆಗಳ ಸಮೀಪ ಕಡಲ ತಡಿಗೆ ಬೃಹತ್ ಗಾತ್ರದ ಕಲ್ಲುಗಳನ್ನು ಜೆಸಿಬಿ, ಹಿತಾಚಿ, ಕ್ರೇನ್ ಮೂಲಕ ಹಾಕುವ ಕಾರ್ಯವೂ ಮುಂದುವರಿದಿದೆ.
ಮತ್ತೆ ಹೊಸ ಮನೆ ನಿರ್ಮಾಣವಾಗಿದೆ
ಕಳೆದ ಬಾರಿ (ಜೂ. 7ರಂದು) ಭಾರೀ ಕಡಲ್ಕೊರೆತದಿಂದಾಗಿ ಕೈಕೋ ಇಂದಿರಾ ನಗರದ ನೆಫಿಸಾ ಎಂಬವರ ಮನೆ ಭಾಗಶ: ಸಮುದ್ರದ ನೀರು ಪಾಲಾಗಿತ್ತು. ಇದೀಗ ಜಾಗದಲ್ಲಿ ಮತ್ತೆ ಹೊಸ ಮನೆ ನಿರ್ಮಾಣವಾಗಿದೆ.
‘‘ಕಳೆದ ವರ್ಷ ಸಮುದ್ರದ ನೀರು ಪಾಲಾಗಿದ್ದ ಮನೆ ನಿರ್ಮಾಣಕ್ಕೆ ಜಿಲ್ಲಾಡಳಿತದ ವತಿಯಿಂದ 1 ಲಕ್ಷ ರೂ. ಪರಿಹಾರ ದೊರಕಿತ್ತು. ಮತ್ತದಕ್ಕೆ ಸುಮಾರು 3 ಲಕ್ಷ ರೂ. ಹಣ ಸೇರಿಸಿ ಮನೆ ನಿರ್ಮಾಣ ಮಾಡಲಾಗಿದೆ’’ ಎಂದು ನೆಫಿಸಾ ‘ವಾರ್ತಾಭಾರತಿ’ಗೆ ತಿಳಿಸಿದರು.
ತಡೆಗೋಡೆಯಾದರೂ ಅಪಾಯ ತಪ್ಪಿದ್ದಲ್ಲ
ಉಳ್ಳಾಲದ ಕೈಕೋ ಪ್ರದೇಶದುದ್ದಕ್ಕೂ ಮನೆಗಳಿರುವ ಕಡೆ ಕಡಲ ಕಿನಾರೆಗೆ ಬೃಹತ್ ಗಾತ್ರದ ಕಲ್ಲುಗಳನ್ನು ಹಾಕಿ ತಡೆಗೋಡೆ ನಿರ್ಮಿಸಲಾಗಿದೆ. ಹಾಗಾಗಿ ಈ ಬಾರಿ ಸದ್ಯಕ್ಕೆ ಸ್ಥಳೀಯರು ಕೊಂಚ ನಿರಾಳವಾಗುವಂತಾಗಿದೆ. ಹಾಗಿದ್ದರೂ ಕಡಲೆಗಳು ಕಲ್ಲಿನ ತಡೆಗೋಡೆಯನ್ನು ಏರಿ ಮನೆಗಳತ್ತ ಅಪ್ಪಳಿಸುತ್ತಿವೆ. ಮಳೆ ಇನ್ನಷ್ಟು ಬಿರುಸುಗೊಂಡಾಗ ಕಡಲು ಇನ್ನಷ್ಟು ಪ್ರಕ್ಷುಬ್ಧವಾದಾಗ ಇಲ್ಲಿ ಅಪಾಯ ಸಂಭವಿಸುವುದನ್ನು ಅಲ್ಲಗಳೆಯಲಾಗದು. ಇದೇ ರೀತಿಯಲ್ಲಿ ಕೋಟೆಪುರದಲ್ಲಿ ಬೃಹತ್ ಗಾತ್ರದ ಕಲ್ಲುಗಳನ್ನು ಹಾಕುವ ಕಾರ್ಯ ಇಂದು ಕೂಡಾ ಮುಂದುವರಿದಿದೆ.
ತೀವ್ರಗೊಂಡ ಬಿರುಗಾಳಿ, ನೀರು ಅಪ್ಪಳಿಸಲಾರಂಭಿಸಿದೆ
ಸಮುದ್ರ ಕಿನಾರೆಯುದ್ದಕ್ಕೂ ಬಿರುಗಾಳಿ ತೀವ್ರಗೊಂಡಿದ್ದು, ಭೋರ್ಗರೆಯುವ ಬೃಹತ್ ಅಲೆಗಳು ಸಮುದ್ರ ದಡವನ್ನು ಅಪ್ಪಳಿಸಿ ಸಾಗುತ್ತಿವೆ. ಕಡಲ ಕಿನಾರೆಯಲ್ಲಿ ಅಲೆಗಳ ಅಬ್ಬರ ರುದ್ರ ಮನೋಹರವಾಗಿದೆ. ಇದೇ ವೇಳೆ ಕೋಟೆಪುರ ಹಾಗೂ ಕೈಕೋ ಪ್ರದೇಶಗಳಲ್ಲಿ ಹಾಕಲಾಗಿರುವ ತಡೆಗೋಡೆಗಳನ್ನು ಅಪ್ಪಳಿಸಿ ಮುನ್ನುಗ್ಗುತ್ತಿರುವ ಕಡಲ ನೀರಿನ ಅಲೆಗು ಮನೆಗಳಿಗೆ ಅಪ್ಪಳಿಸಲಾರಂಭಿಸಿದೆ.
‘‘ಕೆಲ ದಿನಗಳಿಂದೀಚೆಗೆ ಸಮುದ್ರ ತೀವ್ರವಾಗಿ ಪ್ರಕ್ಷುಬ್ಧಗೊಂಡಿದ್ದು, ಸಮುದ್ರ ನೀರು ಕಲ್ಲಿಗೆ ಅಪ್ಪಳಿಸಿ ಮೇಲೆರಿ ಮನೆಗಳತ್ತ ಚಿಮ್ಮುತ್ತಿದೆ. ಕಲ್ಲು ಹಾಕಿ ತಡೆಗೋಡೆಯನ್ನೇನೋ ನಿರ್ಮಿಸಲಾಗಿದೆ. ಆದರೆ ಯಾವುದೇ ಸಂದರ್ಭದಲ್ಲಿ ಅಪಾಯವನ್ನು ಮಾತ್ರ ಊಹಿಸಲು ಸಾಧ್ಯವಿಲ್ಲ’’ ಎನ್ನುತ್ತಾರೆ ಕೈಕೋದ ಇಂದಿರಾನಗರದ ಮಸೀದಿ ಸಮೀಪದ ಮನೆಯೊಂದರ ಮಹಿಳೆ.
ಸುಮಾರು 25 ವರ್ಷಗಳಿಂದ ಕಲ್ಲು ಹಾಕುವುದನ್ನು ನೋಡುತ್ತಿದ್ದೇನೆ !
‘‘ನಾನು ಈ ಕುಟುಂಬ ಸಮೇತ ಈ ಪ್ರದೇಶಕ್ಕೆ ಬಂದು ಸುಮಾರು 27 ವರ್ಷಗಳಾಗಿವೆ. ಇಲ್ಲೇ ಚರುಮುರಿ ಅಂಗಡಿಯನ್ನು ನಡೆಸುತ್ತಿದ್ದೇನೆ. ನಾನು ಇಲ್ಲಿಗೆ ಬಂದ ಆರಂಭದಲ್ಲಿ ಬಂಡೆ ಕಲ್ಲುಗಳನ್ನು ಅಟ್ಟಿಯಾಗಿಟ್ಟು ಸಮುದ್ರಕ್ಕೆ ಹಾಕಲಾಗುತ್ತಿತ್ತು. ಬಳಿಕ ಕಬ್ಬಿಣದ ಬಲೆಗಳಲ್ಲಿ ಕಲ್ಲುಗಳನ್ನು ಹಾಕಿ ಕಡಲಿಗೆ ಹಾಕಲಾಗುತ್ತಿತ್ತು. ಆ ಕಬ್ಬಿಣದ ಬಲೆ ಸಮುದ್ರ ದಡ ಸೇರಿ ಅದನ್ನು ಗುಜುರಿಗೆ ಮಾರುವ ಪ್ರಸಂಗವೂ ಇಲ್ಲಿ ನಡೆಯುತ್ತಿತ್ತು. ಅದಾಗಿ ಬೃಹತ್ತಾದ ಚೀಲಗಳಲ್ಲಿ ಮರಳನ್ನು ತುಂಬಿಸಿ ಅದನ್ನು ತಡೆಗೋಡೆಯಾಗಿ ನಿರ್ಮಿಸಲಾಯಿತು. ಬಳಿಕ ಉಳ್ಳಾಲದ ಸಮುದ್ರದುದ್ದಕ್ಕೂ ಬ್ರೇಕ್ ವಾಟರ್ ನಿರ್ಮಾಣವಾಯಿತು. ಬಳಿಕ ಮತ್ತೆ ಇದೀಗ ಬೃಹತ್ ಕಲ್ಲಿನ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಈ ಬಾರಿ ಕೋಟೆಪುರ, ಕೈಕೋ ಪ್ರದೇಶದಲ್ಲಿ ಕಡಲ ಅಲೆಗಳ ಅಬ್ಬರ ಬಿರುಸು ಕೊಂಚ ಕಡಿಮೆಯಾದಂತೆ ಕಾಣಿಸುತ್ತಿದೆ. ಆದರೆ ಸೋಮೇಶ್ವರ ಪ್ರದೇಶದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಈ ಬಾರಿ ಸೋಮೇಶ್ವರದ ಸ್ಮಶಾನಕ್ಕೆ ಅಪಾಯವಿರುವಂತೆ ಗೋಚರವಾಗುತ್ತಿದೆ’’ ಎಂದು ಸಮ್ಮರ್ ಸ್ಯಾಂಡ್ ಬೀಚ್ ಬಳಿಯಲ್ಲಿ ಚರುಮುರಿ ಅಂಗಡಿಯನ್ನು ನಡೆಸುತ್ತಿರುವವರೊಬ್ಬರು ಅಭಿಪ್ರಾಯ ಹಂಚಿಕೊಂಡರು.
ಒಂದು ವರ್ಷ ಕಳೆದರೂ ಬಾರ್ಜ್ ಮೇಲೆತ್ತಲಾಗಿಲ್ಲ- ಮುಳುಗಿಯೂ ಇಲ್ಲ !
ಉಳ್ಳಾಲದಲ್ಲಿ ಕಡಲು ಪ್ರಕ್ಷುಬ್ಧಗೊಂಡಿರುವ ನಡುವೆಯೇ 2017ರ ಮಾರ್ಚ್ 3ರಂದು ಸಮುದ್ರದ ಅಲೆಗಳ ಅಬ್ಬರಕ್ಕೆ ದುರಂತಕ್ಕೀಡಾಗಿದ್ದ ಬಾರ್ಜ್ ಸಮುದ್ರದ ನುಡವೆ ಇನ್ನೂ ಬ್ರೇಕ್ ವಾಟರ್ ಬಳಿಯೇ ಕಣ್ಣಿಗೆ ಗೋಚರಿಸುವಂತಿದೆ. ಬಾರ್ಜ್ ಮುಳುಗಿ ಒಂದು ವರ್ಷವಾದರೂ ಅದನ್ನು ಸಮುದ್ರದಿಂದ ಮೇಲಕ್ಕೆತ್ತುವ ಕೆಲಸ ಆಗಿಲ್ಲ, ಬಾರ್ಜ್ ಸಮುದ್ರದ ನೀರಿನಲ್ಲಿಯೂ ಮುಳುಗಿಲ್ಲ.
ಬಾರ್ಜ್ನ ಅರ್ಧಕ್ಕೂ ಅಧಿಕ ಭಾಗ ಸಮುದ್ರ ನೀರಿನಲ್ಲಿ ಮುಳುಗಿರುವುದರಿಂದ ಅದನ್ನು ತೆರೆವುಗೊಳಿಸುವ ಕಾರ್ಯವನ್ನೂ ಕೈಬಿಡಲಾಗಿದೆ. ಬಾರ್ಜ್ ಈಗಾಗಲೇ ಸಮುದ್ರದಲ್ಲಿ ಅರ್ಧ ಭಾಗ ಮುಳುಗಡೆಯಾಗಿರುವುದರಿಂದ ಕೋಟ್ಯಂತರ ರೂ. ನಷ್ಟವಾಗಿದೆ. ಸಂಪೂರ್ಣವಾಗಿ ಮುಳುಗಿದ್ದಲ್ಲಿ ಬಾರ್ಜ್ನ ಅವಶೇಷಗಳಿಂದ ಜಲಚರಗಳಿಗೆ ಹಾನಿಯಾಗುವ ಜತೆಯಲ್ಲೇ, ಮೀನುಗಾರಿಕೆಗೆ ತೆರಳುವ ದೋಣಿಗಳಿಗೂ ಬಾಧಕವಾಗಿ ಪರಿಣಮಿಸುವ ಭೀತಿ ಸ್ಥಳೀಯ ಮೀನುಗಾರರಿಂದ ದೂರವಾಗಿಲ್ಲ.
ಧರೆಗುರುಳಿದ ವಿದ್ಯುತ್ ಕಂಬ, ಬೀಚ್ ದಾರಿಯಲ್ಲೇ ವಿದ್ಯುತ್ ತಂತಿಗಳು !
ಎಡೆಬಿಡದೆ ಸುರಿದ ಮಳೆಯಿಂದಾಗಿ ಇಂದು ಉಳ್ಳಾಲ ಬೀಚ್ (ಸಮ್ಮರ್ ಸ್ಯಾಂಡ್) ಪ್ರವೇಶಿಸುವ ದಾರಿಯಲ್ಲಿದ್ದ ವಿದ್ಯುತ್ ಕಂಬವೊಂದು ಧರೆಗುರುಳಿದೆ. ಜತೆಯಲ್ಲೇ ಕಂಬದಲ್ಲಿರುವ ತಂತಿಗಳೂ ನೆಲದ ಮೇಲೆ ದಾರಿಯಲ್ಲೇ ಬಿದ್ದುಕೊಂಡಿದೆ.
ಈ ನಡುವೆ, ವಿದ್ಯುತ್ ಕಂಬದ ದುರಸ್ತಿಗೆಂದು ಬಂದಿದ್ದ ಲೈನ್ಮ್ಯಾನ್ ಒಬ್ಬರು ವಿದ್ಯುತ್ ಕಂಬ ಹತ್ತುತ್ತಿದ್ದಂತೆಯೇ ಕಂಬ ಬೀಳಲಾರಂಭಿಸಿದ ವೇಳೆ ಅವರು ಅರ್ಧದಲ್ಲೇ ಕಂಬದಿಂದ ಹಾರಿದ ಪರಿಣಾಮವಾಗಿ ಕಾಲಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾದ ಘಟನೆ ನಡೆದಿರುವುದಾಗಿ ಸ್ಥಳೀಯ ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದ್ದಾರೆ.