ಪ್ಲಾಸ್ಟಿಕ್ ಮಿತವಾಗಿ ಬಳಸುವುದರಿಂದ ಪೃಥ್ವಿಗೆ ಹಿತ: ಡಾ.ಪದ್ಮಕಿರಣ್

ಉಡುಪಿ, ಜೂ.11: ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಮಿತಿಯಲ್ಲಿರಿಸಿ ಪೃಥ್ವಿಯ ಹಿತವನ್ನು ಕಾಪಾಡುವುದು ಪ್ರತಿಯೋರ್ವರ ಹೊಣೆ ಪಂಚಕರ್ಮ ವಿಭಾಗದ ತಜ್ಞರಾದ ಡಾ.ಪದ್ಮಕಿರಣ ಸಿ. ಹೇಳಿದ್ದಾರೆ.
ಉಡುಪಿಯ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಆಯುರ್ವೇದ ಕಾಲೇಜಿನ ದ್ರವ್ಯಗುಣ ವಿಭಾಗದ ವತಿಯಿಂದ ಇತ್ತೀಚೆಗೆ ಕಾಲೇಜಿನ ಆವರಣದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಸಂಸ್ಥೆಯ ಸ್ನಾತಕೋತ್ತರ ವಿಭಾಗದ ಅಸೋಸಿಯೇಟ್ ಡೀನ್ ಡಾ.ನಾಗ ರಾಜ್ ಮಾತನಾಡಿ, ಪರಿಸರಕ್ಕೆ ನಮ್ಮಿಂದ ಆದ ಹಾನಿ ನಮಗೇ ತಿರುಗು ಬಾಣವಾದೀತು ಎಂದು ಎಚ್ಚರಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ ವಹಿಸಿದ್ದರು. ದ್ರವ್ಯಗುಣ ವಿಭಾಗದ ವತಿಯಿಂದ ಪ್ರಕಾಶನಗೊಂಡ ‘ಇನ್ಸೈಟ್- ಅ ಗ್ಲಾನ್ಸ್ ಟುವರ್ಡಸ್ ದ ನೇಚರ್’ ಎಂಬ ತ್ರೈಮಾಸಿಕ ವೈಜ್ಞಾನಿಕ ಪತ್ರಿಕೆಯನ್ನು ಬಿಡು ಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಔಷಧೀಯ ಸಸ್ಯಗಳ ಬೀಜ ಚೆಂಡುಗಳನ್ನು ತಯಾರಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ‘ಅಗಸ್ತ್ಯ’ ಸ್ನಾತಕ ವೈದ್ಯಕೀಯ ವಿದ್ಯಾಥಿಗರ್ಳಿಗೆ ಮಾಹಿತಿಯನ್ನು ನೀಡಲಾಯಿತು.
ನೇತ್ರಾವತಿ ವಿದ್ಯಾರ್ಥಿನಿ ನಿಲಯದ ಆವರಣದ ಕೈತೋಟದಲ್ಲಿ ತರಕಾರಿ ಬೀಜಗಳು ಹಾಗೂ ಹಣ್ಣುಗಳ ಸಸ್ಯಗಳನ್ನು ನೆಡಲಾಯಿತು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ.ಸುಚೇತಾ, ಡಾ.ವೀರಕುಮಾರ, ಡಾ.ರಾಜ ಲಕ್ಷ್ಮೀ, ಡಾ.ಪೃಥ್ವಿರಾಜ್ ಪುರಾಣಿಕ್, ಡಾ.ರಜನೀಶ್, ಡಾ. ಪ್ರಶಾಂತ್, ಡಾ.ಅಮಲಜ್ಯೋತಿ, ಡಾ.ಧನೇಶ್ವರಿ ಉಪಸ್ಥಿತರಿದ್ದರು.
ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕವಿತಾ ಸ್ವಾಗತಿಸಿದರು. ಡಾ.ನಿರಂಜನ್ ಪ್ರಭು ಬಿ.ಜಿ. ವಂದಿಸಿದರು. ಡಾ.ಸ್ವಾತಿ ಬಿ.ಎಚ್. ಕಾರ್ಯಕ್ರಮ ನಿರೂಪಿಸಿದರು.