ಬೆಲೆಯೇರಿಕೆಯಿಂದ ಬಂಡವಾಳ ಶಾಹಿಗಳಿಗೆ ಲಾಭ, ಜನ ಸಾಮಾನ್ಯರಿಗೆ ಹೊರೆ: ರಮಾನಾಥ ರೈ
ಬಿ.ಸಿ.ರೋಡ್: ಕೇಂದ್ರ ಸರಕಾರದ ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಬಂಟ್ವಾಳ, ಜೂ. 11: ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರೋಧಿಸಿ ಹಾಗೂ ಪೆಟ್ರೋಲ್, ಡಿಸೆಲ್, ಗ್ಯಾಸ್ ಮುಂತಾದವುಗಳ ಬೆಲೆ ಏರಿಕೆಯ ವಿರುದ್ಧ ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಬಿ.ಸಿ.ರೋಡ್ ಜಂಕ್ಷನ್ನಲ್ಲಿ ಪ್ರತಿಭಟನಾ ಸಭಾ ನಡೆಯಿತು.
ಮಾಜಿ ಸಚಿವ ರಮಾನಾಥ ರೈ ಅವರು ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ದೇಶದ ಜನರ ಕಲ್ಯಾಣಕ್ಕಾಗಿ ಬೆಲೆಯೇರಿಕೆ ಮಾಡುತ್ತಿದ್ದೇವೆ ಎಂದು ಹೇಳುತ್ತರುವ ಬಿಜೆಪಿಗೆ, ಇದರಿಂದ ಸಾಮಾನ್ಯ ಜನರಿಗೆ ಕಷ್ಟವಾಗುತ್ತಿದೆ ಎಂಬ ದುಖಃ ಅವರಿಗಿಲ್ಲ ಎಂದ ಅವರು, ಅಂದು ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರವು ದೇಶದ ಆರ್ಥಿಕ ಸ್ಥಿರತೆ ಹಾಗೂ ಬದ್ಧತೆಯನ್ನು ಕಾಪಾಡುವ ಮೂಲಕ ಜನರಿಗೆ ಸ್ವಾಭಿಮಾನ ಜೀವನವನ್ನು ನೀಡಿದೆ. ಆದರೆ, ಇಂದು ಎನ್ಡಿಎ ಸರಕಾರವು ನಿರಂತರವಾಗಿ ಜನರ ಮೂಲಭೂತ ವಸ್ತುಗಳ ಬೆಲೆ ಏರಿಕೆ ಮಾಡುವ ಈ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿವೆ ಎಂದು ಆರೋಪಿಸಿದರು.
ಜನರಪರ ಕಾಳಜಿಯಿಂದ ಕಾಂಗ್ರೆಸ್ ಕೆಲಸ ಮಾಡಿದರೆ ಅದು ತಪ್ಪು, ಜನವಿರೋಧಿಯಾಗಿ ಕೆಲಸ ಮಾಡುವ ಬಿಜೆಪಿಯ ನಡೆ ಸರಿ ಎನ್ನುವ ಮೂಲಕ, ಜನರಿಗೆ ಸುಳ್ಳು ಹೇಳಿಕೊಂಡು ಮೋದಿ ಸರಕಾರ ಮೋಸದ ರಾಜಕಾರಣ ಮಾಡುತ್ತಿದೆ. ದಿಲ್ಲಿಯಿಂದ ಹಳ್ಳಿಯವರೆಗೂ ಸುಳ್ಳನ್ನೇ ಬಂಡವಾಳವಾಗಿಸಿಕೊಂಡು ಆಡಳಿತ ಮಾಡುತ್ತಿರುವ ಬಿಜೆಪಿ ಸರಕಾರದ ವಿರುದ್ಧ ಜನರು ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಇದೀಗ ಬಿಜೆಪಿಯವರು ರೈತರ ಸಾಲಮನ್ನ ಮಾಡುವ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರದಲ್ಲಿರುವ ಎಎನ್ಡಿಎ ಸರಕಾರವು 10 ಲಕ್ಷ ಸಾವಿರ ಕೋಟಿ ರೂ. ಬಂಡವಾಳ, ಬೃಹತ್ ಉದ್ದಿಮೆದಾರರ ಸಾಲ ಮನ್ನಾ ಮಾಡಿದೆಯೇ ಹೊರತು ದೇಶದ ಬೆನ್ನೆಲುಬಾಗಿರುವ ರೈತರ ನಯಾಪೈಸೆ ಸಾಲ ಮನ್ನಾ ಮಾಡಿಲ್ಲ ಎಂದು ಅವರು, ಪೆಟ್ರೋಲ್ ಹಾಗೂ ಡಿಸೆಲ್ ಬೆಲೆ ಹೆಚ್ಚು ಮಾಡುವ ಮೂಲಕ ಜನರ ಕೀಸೆಗೆ ಕತ್ತರಿ ಹಾಕಿ, ರಿಲೆಯನ್ಸ್ ಕಂಪನಿಯ ಅಂಬಾನಿ ಹಾಗೂ ಅದಾನಿಯಂತಹ ಉದ್ದಿಮೆದಾರರಿಗೆ ಲಾಭ ಮಾಡು ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವಿರುವಾಗ ಅವರ ಪೆಟ್ರೋಲ್ ಬಂಕ್ ಬಂದ್ ಆಗಿದ್ದವು, ಆದರೆ, ಇದೀಗ ಪುನರಾಂಭಗೊಂಡಿವೆ. ಇದರಿಂದ ಕೇಂದ್ರ ಸರಕಾರ ಯಾರ ಪರವಾಗಿ ಕೆಲಸ ಮಾಡುತ್ತಿದೆ ಎಂಬುವುದು ತಿಳಿಯುತ್ತದೆ. ಬಿಜೆಪಿ ಪಕ್ಷ ಎಂದರೆ ಬಲಿಷ್ಟ ಜಾತಿ ಪಕ್ಷ ಹಾಗೂ ಬಂಡವಾಳ ಶಾಹಿ ಜನತಾ ಪಕ್ಷವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಕೇಂದ್ರ ಸರಕಾರ ಜನರ ಹಿತವನ್ನು ಬಯಸದೇ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡುತ್ತಿದ್ದು, ಈ ಬಗ್ಗೆ ಬಿಜೆಪಿಯ ಯಾವನೇ ನಾಯಕ ಚಕಾರ ಎತ್ತುವುದಿಲ್ಲ. ಅಂದು ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರವಿರುವಾಗ ಬಿಜೆಪಿಯವರು ಮಾರ್ಗದಲ್ಲಿ ಮಲಗಿ, ಸೈಕಲ್ ತುಳಿಯುವ ಮೂಲಕ ಪ್ರತಿಭಟನೆ ಮಾಡಿದವರು ಈಗ ಎಲ್ಲಿ ಹೋಗಿದ್ದಾರೆ? ಎಂದು ಪ್ರಶ್ನಿಸಿದರು.
ಜಿಪಂ ಸದಸ್ಯೆ ಮಂಜುಳಾ ಮಾವೆ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಟೀಕಿಸಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಜಿಪಂ ಸದಸ್ಯ ಪದ್ಮಶೇಖರ ಜೈನ್, ಸ್ಥಾಯಿ ಸಮಿತಿ ಅಧ್ಯಕ್ಷ ವಾಸುಪೂಜಾರಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಪಕ್ಷದ ಪ್ರಮುಖ ಮುಖರಾದ ಚಂದ್ರಶೇಖರ ಪೂಜಾರಿ, ಜನಾರ್ದನ ಚಂಡ್ತಿಮಾರ್, ಮದುಸೂಧನ ಶೆಣೈ, ಚಿತ್ತರಂಜನ್, ವೆಂಕಪ್ಪ ಪೂಜಾರಿ ಬಂಟ್ವಾಳ, ಬಿ.ಕೆ.ಇದ್ದಿನಬ್ಬ,ಪರಮೇಶ್ವರ ಮೂಲ್ಯ, ಸಂಜೀವ ಪೂಜಾರಿ ಮೊದಲಾದವರಿದ್ದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ಸ್ವಾಗತಿಸಿ, ಜಿಲ್ಲಾ ಉಪಾಧ್ಯಕ್ಷ ಬೇಬಿಕುಂದರ್ ವಂದಿಸಿದರು.
ಮೋದಿ ನೇತೃತ್ವದ ಸರಕಾರ ನಿರೀಕ್ಷಿತ ಮಟ್ಟದಲ್ಲಿ ಜನರ ಅಭಿವೃದ್ಧಿಯನ್ನು ಮಾಡಿಲ್ಲ ಎಂದು ಸ್ವತಃ ಪೇಜಾವರ ಶ್ರೀ ಅವರೇ ಸರ್ಟಿಫಿಕೇಟ್ ನೀಡಿದ್ದಾರೆ. ಅಲ್ಲದೆ, ಮೋದಿಯ ಶೂನ್ಯ ಸಾಧನೆಯ ಬಗ್ಗೆ ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೂಪಾಯಿಗಳಲ್ಲಿ ಬೆಲೆಯೇರಿಕೆಯಾದರೆ, ಪೈಸೆ ಲೆಕ್ಕದಲ್ಲಿ ಬೆಲೆ ಇಳಿಕೆಯಾಗುತ್ತಿದೆ.
ಎಂ.ಎಸ್.ಮಹಮ್ಮದ್, ಜಿಪಂ ಸದಸ್ಯ