ರಾಮಕೃಷ್ಣ ಮಿಷನ್ನಿಂದ ಬಸ್ ಪ್ರಯಾಣಿಕರ ತಂಗುದಾಣ

ಮಂಗಳೂರು, ಜೂ.11: ರಾಮಕೃಷ್ಣ ಮಿಷನ್ ವತಿಯಿಂದ ಎಕ್ಕೂರಿನಲ್ಲಿ ರವಿವಾರ ನಡೆದ 35ನೆ ಸ್ವಚ್ಛತಾ ಶ್ರಮದಾನದ ಹಿನ್ನೆಲೆಯಲ್ಲಿ ಸ್ಥಳಿಯರ ಸಹಕಾರದಿಂದ ನಿರ್ಮಿಸಲಾದ ಬಸ್ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಲಾಯಿತು.
ಸಾರ್ವಜನಿಕರ ಬಹುದಿನಗಳಿಂದ ಬಸ್ ತಂಗುದಾಣಕ್ಕೆ ಸಂಬಂದಪಟ್ಟ ಸರಕಾರಿ ಇಲಾಖೆಗಳಿಗೆ ಬೇಡಿಕೆಯಿಟ್ಟಿದ್ದರೂ ಇಲ್ಲಿಯತನಕ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ‘ಸ್ವಚ್ಛ ಎಕ್ಕೂರ ತಂಡ’ದ ವತಿಯಿಂದ ರಾಮಕೃಷ್ಣ ಮಿಷನ್ ಸಹಕಾರದೊಂದಿಗೆ ಬಸ್ ತಂಗುದಾಣವನ್ನು ಕೇವಲ 5 ದಿನದಲ್ಲಿ ನಿರ್ಮಿಸಲಾಯಿತು. ಮೇಲ್ಚಾವಣಿ, ಸ್ವತಂತ್ರ ಆಸನ ವ್ಯವಸ್ಥೆ, ಕಾಂಕ್ರಿಟ್ ನೆಲಹಾಸು, ಸಾಮಾಜಿಕ ಸಂದೇಶವುಳ್ಳ ಫಲಕಗಳನ್ನು ಈ ತಂಗುದಾಣವು ಒಳಗೊಂಡಿದೆ.
ಈ ಸಂದರ್ಭ ಸ್ವಾಮಿ ಜಿತಕಾಮಾನಂದಜಿ ಮಹರಾಜ್, ಆರ್ಬಿಐ ಮಾಜಿ ನಿರ್ದೇಶಕಿ ದೇವಕಿ ಮುತ್ತುಕೃಷ್ಣನ್, ಗಣೇಶ್ ಕಾರ್ಣಿಕ್, ಮೋಹನ್ ಭಟ್, ಕಮಲಾಕ್ಷ ಪೈ, ಭಾಸ್ಕರ್ ಶೆಟ್ಟಿ, ವಸಂತಿ ನಾಯಕ್, ಯಶೋಧರ ಚೌಟ, ಕಿರಣ್ ಫೆರ್ನಾಂಡಿಸ್ ಮತ್ತಿತರರು ಪಾಲ್ಗೊಂಡಿದ್ದರು.
Next Story