ಕೊಡಗಿನಲ್ಲಿ ಮಳೆಯ ತೀವ್ರತೆ ಕೊಂಚ ಇಳಿಮುಖ
ದಕ್ಷಿಣ ಕೊಡಗು, ನಾಪೋಕ್ಲು ವ್ಯಾಪ್ತಿಯಲ್ಲಿ ನದಿ ನೀರಿನ ಮಟ್ಟ ಏರಿಕೆ

ಮಡಿಕೇರಿ,ಜೂ.11:ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯ ತೀವ್ರತೆ ಕೊಂಚ ಇಳಿಮುಖಗೊಂಡಿದ್ದು, ಕಾವೇರಿಯ ಕ್ಷೇತ್ರ ಭಾಗಮಂಡಲದಲ್ಲಿ ಕಾವೇರಿ ನದಿ ನೀರಿನ ಮಟ್ಟ ಗಣನೀಯವಾಗಿ ಇಳಿದಿದೆ. ಆದರೆ ನಾಪೋಕ್ಲು ವ್ಯಾಪ್ತಿಯಲ್ಲಿ ಪ್ರವಾಹದ ಪರಿಸ್ಥಿತಿ ಮುಂದುವರೆದಿದೆ.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಭಾರೀ ಮಳೆಯಿಂದ ಕಾವೇರಿ ಉಕ್ಕಿ ಹರಿದ ಪರಿಣಾಮ ಅಯ್ಯಂಗೇರಿ ರಸ್ತೆಯ ಮೇಲೆ ಭಾರೀ ಪ್ರಮಾಣದ ನೀರು ಬಂದು ಸ್ಥಗಿತಗೊಂಡಿದ್ದ ವಾಹನ ಸಂಚಾರ ಮರಳಿ ಆರಂಭವಾಗಿದ್ದರೆ, ಮಡಿಕೇರಿ ರಸ್ತೆಯ ಮೇಲೆ ಹರಿಯುತ್ತಿದ್ದ ಪ್ರವಾಹದ ನೀರು ಇಳಿಮುಖವಾಗಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಗಾಳಿ ಸಹಿತವಾಗಿ ರವಿವಾರ ಧಾರಾಕಾರ ಮಳೆಯಾಗಿದ್ದರು, ರಾತ್ರಿಯ ಅವಧಿಯಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿದ್ದರಿಂದ ಕಿರು ತೊರೆ, ನದಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಆದರೆ, ಕೆಲ ದಿನಗಳಿಂದ ಸುರಿದ ವರ್ಷಾಧಾರೆಯ ಪರಿಣಾಮ ಜಿಲ್ಲೆಯ ಹಲವೆಡೆಗಳಲ್ಲಿ ಮನೆಗಳ ಗೋಡೆ ಕುಸಿತ, ಮರಗಳು ಧರೆಗೆ ಉರುಳಿರುವ ಘಟನೆಗಳು, ವಿದ್ಯುತ್ ಕಂಬಗಳು ಮೊಗುಚಿರುವ ವಿದ್ಯಮಾನಗಳು ವರದಿಯಾಗುತ್ತಲೆ ಇವೆ.
ಸುಂಟಿಕೊಪ್ಪ ಬಳಿಯ ಕೆದಕಲ್ನಲ್ಲಿ ಹೋಂಸ್ಟೇಯೊಂದರ ಮೇಲೆ ಭಾರೀ ಗಾತ್ರದ ಮರವುರುಳಿ ಬಿದ್ದು ಸಾಕಷ್ಟು ಹಾನಿ ಸಂಭವಿಸಿರುವ ಘಟನೆ ನಡೆದಿದೆ.
ಕಾರ್ಗತ್ತಲೆಯಲ್ಲಿ ಭಾಗಮಂಡಲ- ಎಡೆಬಿಡದೆ ಗಾಳಿ ಮಳೆಯಾದ ಪರಿಣಾಮ ಬೆಟ್ಟಗೇರಿ ವ್ಯಾಪ್ತಿಯಲ್ಲಿ ಹಲ ಸಂಖ್ಯೆಯಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರಿಂದ ಭಾಗಮಂಡಲ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕ್ಷೇತ್ರ ವ್ಯಾಪ್ತಿ ಕಾರ್ಗತ್ತಲೆಯಲ್ಲಿ ಮುಳುಗಿದೆ.
ನಾಪೋಕ್ಲುವಿನಲ್ಲಿ ಪ್ರವಾಹದ ಪರಿಸ್ಥಿತಿ
ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು ಹಳ್ಳಕೊಳ್ಳ, ತೋಡು, ಹೊಳೆ, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕಾವೇರಿ ನದಿ ಹರಿಯುತ್ತಿರುವ ಚೆರಿಯಪರಂಬು, ಕೊಟ್ಟಮುಡಿ ಹಾಗೂ ಬೊಳಿಬಾಣೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ರಸ್ತೆಯ ಮೇಲೆ ಉಕ್ಕಿ ಹರಿಯುತ್ತಿದೆ. ಚೆರಿಯಪರಂಬು, ನಾಪೋಕ್ಲು – ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿಯೂ ಕಾವೇರಿ ನದಿ ಪ್ರವಾಹ ರಸ್ತೆಯ ಮೇಲಿದ್ದು ವಾಹನಗಳು ನೀರಿನಲ್ಲಿಯೇ ಸಾಗುತ್ತಿವೆ. ಇದೇ ರೀತಿ ಮಳೆ ಮುಂದುವರಿದರೆ ನಾಪೋಕ್ಲು – ಮೂರ್ನಾಡು ರಸ್ತೆಯ ಸಂಪರ್ಕ ಕಡಿತಗೊಳ್ಳಲಿದೆ.
ಹೋಬಳಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಕಳೆಯುವಂತಾಗಿದೆ. ಇದಕ್ಕೆ ವಿದ್ಯುತ್ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇಲ್ಲಿನ ಬೇತು ಗ್ರಾಮದಲ್ಲಿ ದೊಡ್ಡ ಮರವೊಂದು ಮುರಿದುಬಿದ್ದಿದ್ದು ವಿದ್ಯುತ್ ತಂತಿಗಳು ತುಂಡಾಗಿವೆ. ಬೇಸಿಗೆಯಲ್ಲಿ ವಿದ್ಯುತ್ ತಂತಿಗಳ ಬಳಿಯಿರುವ ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯ ಕೈಗೊಳ್ಳದೇ ಸಮಸ್ಯೆಯುಂಟಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮನೆಗೆ ಹಾನಿ
ಮಡಿಕೇರಿಯ ಇಂದಿರಾನಗರದಲ್ಲಿ ಮುಹಮ್ಮದ್ ಎಂಬವರ ಮನೆಯ ಅರ್ಧಭಾಗ ಗಾಳಿ ಮಳೆಯ ತೀವ್ರತೆಗೆ ಕುಸಿದು ಬಿದ್ದಿದ್ದು, ನಷ್ಟ ಸಂಭವಿಸಿದೆ.
ಬಾಳೆಲೆ, ಕೊಟ್ಟಗೇರಿ, ದೋಣಿಕಾಡು ಸಂಪರ್ಕ ರಸ್ತೆ ಹಾಗೂ ಲಕ್ಷ್ಮಣ ತೀರ್ಥ ಸೇತುವೆಗೆ ಹಾನಿಯಾಗಿದ್ದು, ವಾಹನಗಳ ಓಡಾಟ ಕಷ್ಟ ಸಾಧ್ಯವಾಗಿದೆ.
ಕೊಡಗು ಜಿಲ್ಲೆಯ ಮಳೆ ವಿವರ
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ ಮಳೆ 104.56 ಮಿ.ಮೀ. ಕಳೆದ ವರ್ಷ ಇದೇ ದಿನ 22.60 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 761.49 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 369.68 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 116.65 ಮಿ.ಮೀ. ಕಳೆದ ವರ್ಷ ಇದೇ ದಿನ 26.60 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1056.94 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 453.60 ಮಿ.ಮೀ. ಮಳೆಯಾಗಿತ್ತು.
ವೀರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 92.90 ಮಿ.ಮೀ. ಕಳೆದ ವರ್ಷ ಇದೇ ದಿನ 16.67 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 598.07 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 344.44 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 104.12 ಮಿ.ಮೀ. ಕಳೆದ ವರ್ಷ ಇದೇ ದಿನ 24.53 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 629.46 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 311 ಮಿ.ಮೀ. ಮಳೆಯಾಗಿತ್ತು.
ಹೋಬಳಿವಾರು ಮಳೆ- ಮಡಿಕೇರಿ 71.20, ನಾಪೋಕ್ಲು 131.20, ಸಂಪಾಜೆ 90.20, ಭಾಗಮಂಡಲ 174, ವೀರಾಜಪೇಟೆ 104, ಹುದಿಕೇರಿ 124, ಶ್ರೀಮಂಗಲ 118.20, ಪೊನ್ನಂಪೇಟೆ 82.20, ಅಮ್ಮತಿ 71, ಬಾಳೆಲೆ 58, ಸೋಮವಾರಪೇಟೆ 138.80, ಶನಿವಾರಸಂತೆ 101.40, ಶಾಂತಳ್ಳಿ 196, ಕೊಡ್ಲಿಪೇಟೆ 135.50, ಸುಂಟಿಕೊಪ್ಪ 42, ಕುಶಾಲನಗರ 11 ಮಿ.ಮೀ. ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ - ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2806.80 ಅಡಿಗಳು. ಕಳೆದ ವರ್ಷ ಇದೇ ದಿನ 2808.07 ಅಡಿ. ಇಂದಿನ ನೀರಿನ ಒಳ ಹರಿವು 4780 ಕ್ಯುಸೆಕ್.







