ದಲಿತ ಮಹಿಳೆಯ ಜಮೀನಿಗೆ ಬೇಲಿ ಆರೋಪ: ಮುಂಡೂರು ಪಂಚಾಯತ್ ವಿರುದ್ಧ ಪ್ರತಿಭಟನೆ

ಪುತ್ತೂರು, ಜೂ. 11: ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯರಿಬ್ಬರಿಗೆ 94ಸಿ ಅಡಿಯಲ್ಲಿ ಮಂಜೂರುಗೊಂಡ 5ಸೆಂಟ್ಸ್ ಜಾಗದ ಮನೆಯ ಅಂಗಳದಲ್ಲಿಯೇ ತಂತಿ ಬೇಲಿ ಅಳವಡಿಸಿ ಶೌಚಾಲಯಕ್ಕೆ ಹೋಗದಂತೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಪುತ್ತೂರು ಶಾಖೆಯ ನೇತೃತ್ವದಲ್ಲಿ ಸೋಮವಾರ ದಲಿತರು ಪುತ್ತೂರು ತಾಲೂಕಿನ ಮುಂಡೂರು ಗ್ರಾಮ ಪಂಚಾಯತ್ ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಬಯಲು ಶೌಚವನ್ನು ಸರ್ಕಾರ ನಿಷೇಧಿಸಿದ್ದರೂ ಇಲ್ಲಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಯಾವುದೇ ನೋಟೀಸು ನೀಡದೆ, ದಲಿತರಾದ ನಳಿನಿ ಮತ್ತು ರೂಪಾ ಎಂಬವರ ಮನೆಯ ಅಂಗಳಕ್ಕೆ ತಂತಿ ಬೇಲಿ ಹಾಕುವ ಮೂಲಕ ದಲಿತರು ಬಯಲಿನಲ್ಲೇ ಶೌಚ ಮಾಡಬೇಕೆಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ದಲಿತ್ ಸೇವಾ ಸಮಿತಿಯ ತಾಲೂಕು ಶಾಖೆಯ ಅಧ್ಯಕ್ಷ ರಾಜು ಹೊಸ್ಮಠ,ಭ್ರಷ್ಟಾಚಾರ ನಿಗ್ರಹ ದಳ-ಅಪರಾಧ ಪತ್ತೆ ದಳ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಶಾಂತ್ ರೈ ಮಾತನಾಡಿ ನೊಂದ ದಲಿತ ಕುಟುಂಬಕ್ಕೆ ಗ್ರಾಪಂ ಸೂಕ್ತ ಪರಿಹಾರ ಸೂಚಿಸಬೇಕು. ಮನೆ ಸಮೀಪವೇ ಹಾಕಿರುವ ಬೇಲಿಯನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ರಾಜು ಹೊಸ್ಮಠ ಮಾತನಾಡಿ ಕೇವಲ ದಲಿತರಿಗೆ ಸೇರಿದ ಜಾಗದ ಸುತ್ತ ಮಾತ್ರ ಬೇಲಿ ಹಾಕಿದ್ದು ಸರಿಯಲ್ಲ ವಶಕ್ಕೆ ಪಡೆಯುವುದಾದರೆ ಎಲ್ಲಾ ಜಾಗದ ಸುತ್ತಲೂ ಬೇಲಿ ಹಾಕಲಿ ಎಂದು ಹೇಳಿದರು
ಪ್ರತಿಭಟನಾ ನಿರತರ ಬಳಿಗೆ ಬಂದ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್.ಡಿ.ವಸಂತ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ ಅವರು ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ತನಕ ಯಾವ ದಲಿತರಿಗೂ ಅನ್ಯಾಯ ಮಾಡಿಲ್ಲ. ತಹಶೀಲ್ದಾರ್ ಸೂಚನೆಯಂತೆ 5ಸೆಂಟ್ಸ್ ಮನೆ ನಿವೇಶನಗಳ ಗಡಿಗುರುತು ಮಾಡಿ ಬೇಲಿ ಅಳವಡಿಸಲಾಗಿದೆ. ಪಂಚಾಯತ್ ಸಭೆಯಲ್ಲಿ ಈ ಬಗ್ಗೆ ಮೂರು ಬಾರಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಆಗ್ರಹ ಮತ್ತು ಪಂಚಾಯಿತ್ ವಾದವನ್ನು ಆಲಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ರಾಜಕೀಯ ಮಾಡಲು ಹೋಗಬೇಡಿ, ಕಾಲಾವಕಾಶ ನೀಡಿ ಕಾನೂನು ಪ್ರಕಾರ ಕ್ರಮಕೈಗೊಳ್ಳಿ ಎಂದು ತಿಳಿದರು.
ಪ್ರತಿಭಟನಾ ನಿರತರ ಬೇಡಿಕೆಯಂತೆ ಪಂಚಾಯತ್ ಅಧ್ಯಕ್ಷರು ಹಾಗೂ ದಲಿತ ಮುಖಂಡರು ಸಮಸ್ಯೆಗೊಳಗಾದ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಪಂಚಾಯತ್ ಅಧ್ಯಕ್ಷರ ಸಮ್ಮುಖದಲ್ಲಿ ಮತ್ತು ದಲಿತ ಮುಖಂಡರ ಉಪಸ್ಥಿತಿಯಲ್ಲಿ ಪಂಚಾಯತ್ ಸಿಬ್ಬಂದಿ ತಂತಿ ಬೇಲಿ ತೆರವುಗೊಳಿಸಿ ಶೌಚಾಲಯ ಬಳಕೆಗೆ ಅವಕಾಶ ಮಾಡಿಕೊಟ್ಟರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ದಲಿತ್ ಸೇವಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಅಣ್ಣಿ ಏಳ್ತಿಮಾರ್, ಪ್ರಸಾದ್ ಬೊಳ್ಮಾರು, ಮುಖಂಡರಾದ ಅಣ್ಣು ಸಾಧನಾ, ಮನೋಹರ್ ಕೋಡಿಜಾಲು,ಕೇಶವ ಪಡೀಲು ಮತ್ತಿತರರು ಉಪಸ್ಥಿತರಿದ್ದರು.