ಗಿಡ ನೆಡುವಾಗ ಜಾಗ್ರತೆ ವಹಿಸಿ
ಮಾನ್ಯರೇ,
ಪ್ರಕೃತಿಯ ಮಡಿಲಿಗೆ ಹಸಿರು ಶೋಭೆ ನೀಡಲು ಪರಿಸರ ಪ್ರೇಮದಿಂದ ಅರಣ್ಯ ಇಲಾಖೆ, ಸಂಘ ಸಂಸ್ಥೆಗಳು ಸಾರ್ವಜನಿಕ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ಸಾಲು ಮರಗಳಾಗಲು ಗಿಡಗಳ ನಾಟಿ ಮಾಡುತ್ತಾರೆ. ಇದೊಂದು ಅಭಿನಂದನಾರ್ಹ ಕೆಲಸವು ಹೌದು. ಆದರೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಒಂದಿಷ್ಟು ಯೋಚಿಸಿ ಕಾರ್ಯಕ್ಕಿಳಿದರೆ ಮಾತ್ರ ಯಶಸ್ವಿಯಾದೀತು. ಕೆಲವು ಕಡೆ ನೆಟ್ಟಿರುವ ಗಿಡದ ಮೇಲೆ ಕಣ್ಣು ಹಾಯಿಸಿದರೆ ಕಂಬದಿಂದ ವಿದ್ಯುತ್ ತಂತಿಗಳು ಹಾದು ಹೋಗಿರುವುದನ್ನು ಕಾಣುತ್ತೇವೆ. ಹೆಚ್ಚಿನವರು ಮುಂದಿನ ಸಾಧಕ ಬಾಧಕಗಳ ಬಗ್ಗೆ ಯೋಚಿಸದೆ ತಂತಿಗಳ ಅಡಿಯಲ್ಲಿಯೇ ಗಿಡಗಳನ್ನು ನೆಟ್ಟು ಬಿಡುತ್ತಾರೆ. ಕೆಲವು ವರ್ಷಗಳಲ್ಲಿ ಗಿಡ ಮರವಾಗಿ ಬೆಳೆಯುವಾಗ ಅದರ ರೆಂಬೆಕೊಂಬೆಗಳು ವಿದ್ಯುತ್ ತಂತಿಗಳಿಗೆ ಸ್ಪರ್ಶಗೊಳ್ಳುತ್ತದೆ.
ಮುಂದೊದಗುವ ವಿದ್ಯುತ್ ಸೋರಿಕೆ ಮತ್ತು ದುರಂತಗಳ ಹೆದರಿಕೆಯ ಕಾರಣದಿಂದಾಗಿ ವಿದ್ಯುತ್ ಇಲಾಖೆಯವರು ಬೆಳೆದಮರಗಳ ರೆಂಬೆಕೊಂಬೆಗಳನ್ನು ಕಡಿಯಬೇಕಾಗುತ್ತದೆ. ಪರಿಣಾಮ ಮರಗಳು ಹಿಂಸೆ ಅನುಭವಿಸುತ್ತವೆ. ಕೆಲವೊಮ್ಮೆ ಮರಗಳು ಮತ್ತೆ ಚಿಗುರದೆ ಸತ್ತು ಹೋಗುತ್ತವೆ.
ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸುವವರು ಬೇರೆ ಕಡೆ ವಿಶಾಲವಾಗಿ ಬೆಳೆಯುವ ಮರಗಳ ಗಿಡಗಳನ್ನು ನೆಟ್ಟರೆ, ವಿದ್ಯುತ್ ತಂತಿಗಳು ಇರುವ ಸ್ಥಳಗಳಲ್ಲಿ ಎತ್ತರವಾಗಿ ಬೆಳೆಯುವ ಸಸ್ಯ ಪ್ರಭೇದಗಳ ನಾಟಿ ಮಾಡದೆ, ತಳ ಮಟ್ಟದಲ್ಲಿ ಬೆಳೆಯುವ ವೃಕ್ಷ ಸಂತತಿ ಬೆಳೆಸುವುದು ಉತ್ತಮ. ಇಂತಹ ಇಕ್ಕಟ್ಟಿನ ಸ್ಥಳಗಳಲ್ಲಿ ನೆಡಲು ಚೆರ್ರಿ ಗಿಡ ಸೂಕ್ತವಾಗಿದೆ. ಚೆರ್ರಿ ಜಾತಿಯ ಗಿಡಗಳು ಬಹಳ ಎತ್ತರ ಬೆಳೆಯದೆ, ಚಪ್ಪರ ಹಾಸಿನಂತೆ ಬೆಳೆಯುತ್ತದೆ. ಇದೊಂದು ಸಿಹಿಒಗರು ಹಣ್ಣು ಬೀಡುವ ಸಸ್ಯವಾಗಿದೆ. ಪಕ್ಷಿಗಳಿಗೆ ಆಹಾರ ಒದಗಿಸಿದಂತೆಯೂ ಆಗುತ್ತದೆ. ಅಲ್ಲದೆ ನೆರಳಿನಾಶ್ರಯವನ್ನೂ ನೀಡುತ್ತದೆ.
-ತಾರಾನಾಥ್ ಮೇಸ್ತ, ಶಿರೂರು