ಅನಿಯಮಿತ ವಿದ್ಯುತ್ ಕಡಿತ: ಪಡುಬಿದ್ರೆ ಮೆಸ್ಕಾಂ ಕಚೇರಿಗೆ ಮುತ್ತಿಗೆ

ಪಡುಬಿದ್ರೆ, ಜೂ. 12: ಮಳೆಗಾಲದಲ್ಲಿ ಅನಿಯಮಿತ ವಿದ್ಯುತ್ ಕಡಿತವನ್ನು ವಿರೋಧಿಸಿ ಪಡುಬಿದ್ರೆ ಮೆಸ್ಕಾಂಗೆ ಶಾಖಾ ಕಚೇರಿಗೆ ಮಂಗಳವಾರ ಸಾರ್ವಜನಿಕರು ಮುತ್ತಿಗೆ ಹಾಕಿದರು.
ಕಳೆದ ಕೆಲವು ದಿನಗಳಿಂದ ಪಡುಬಿದ್ರೆ ಮೆಸ್ಕಾಂ ವ್ಯಾಪ್ತಿಯಲ್ಲಿ ಅನಿಯಮಿತ ವಿದ್ಯುತ್ ಕಡಿತಗೊಳ್ಳುತಿದ್ದು, ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಸ್ಪಂಧಿಸುತಿರಲಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಡುಬಿದ್ರೆ , ಪಾದೆಬೆಟ್ಟು, ಹೆಜಮಾಡಿ, ಎರ್ಮಾಳು, ಎಲ್ಲೂರು, ಬಡಾ ಗ್ರಾಮಗಳ ಗ್ರಾಮಸ್ಥರು ಮೆಸ್ಕಾಂ ಕಚೇರಿ ಎದುರು ಜಮಾಯಿಸಿ ಮೆಸ್ಕಾಂ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಮಳೆಗಾಲದಲ್ಲಿ ವಿದ್ಯುತ್ ಅನಿಯಮಿತವಾಗಿ ಕಡಿತಗೊಳ್ಳುತಿದ್ದು, ಇದರಿಂದ ಸಮಸ್ಯೆ ಅನುಭವಿಸುತಿದ್ದೇವೆ. ಅಲ್ಲಲ್ಲಿ ವಿದ್ಯುತ್ ಲೈನ್ಗಳು ಹದಗೆಟ್ಟಿದ್ದರೂ ಮಳೆಗಾಲದ ಮುಂಚಿತವಾಗಿ ಸರಿಪಡಿಸಲಿಲ್ಲ. ಶಾಖಾ ಅಧಿಕಾರಿಗಳು ಗ್ರಾಹಕರ ದೂರಿಗೆ ಸರಿಯಾಗಿ ಸ್ಪಂದಿಸುತಿಲ್ಲ. ಪಡುಬಿದ್ರೆ ಶಾಖೆಯಲ್ಲಿ ರಾತ್ರಿ ಪಾಳಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಸ್ಥಳಕ್ಕೆ ಬಂದ ಎಇ ಸುಧೀರ್ ಪಟೇಲ್, ಎಇಇ ಎ.ಪಿ.ರಾಮ್, ತಾಂತ್ರಿಕ ವಿಭಾಗದ ಎಇ ಜಯಶ್ಮಿತಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.