ಬಾಲಕನ ನಕಲಿ ಮತದಾನ ಯತ್ನ ಪ್ರಕರಣ: ಪಂಚಾಯತ್ ಸದಸ್ಯ ಸಹಿತ ಇಬ್ಬರ ಬಂಧನ
ಪುತ್ತೂರು, ಜೂ. 13: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆಟ್ಟಣಿಗೆ ಮುಡ್ನೂರು ಗ್ರಾಮದ ಆಲಂತಡ್ಕ ಶಾಲೆಯ ಮತಗಟ್ಟೆಯಲ್ಲಿ ನಡೆದಿದ್ದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನ ನಕಲಿ ಮತದಾನ ಯತ್ನ ಪ್ರಕರಣಕ್ಕೆ ಸಂಬಂಧಿಸಿ, ಬಾಲಕನನ್ನು ನಕಲಿ ಮತದಾನಕ್ಕೆ ಪ್ರೇರೇಪಿಸಿದ ಆರೋಪದಲ್ಲಿ ಸಂಪ್ಯ ಪೊಲೀಸರು ಇದೀಗ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಸಹಿತ ಇಬ್ಬರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಪಳ್ಳತ್ತೂರು ನಿವಾಸಿ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂ. ಸದಸ್ಯ ಇಬ್ರಾಹೀಂ ಯಾನೆ ಉಂಬಿ ಹಾಗೂ ಪಳ್ಳತ್ತೂರು ನಿವಾಸಿ ಅಬ್ಬಾಸ್ ಬಂಧಿತ ಆರೋಪಿಗಳು.
ಕಳೆದ ವಿಧಾನಸಭಾ ಚುನಾವಣೆಯಂದು ನೆಟ್ಟಣಿಗೆ ಮುಡ್ನೂರು ಗ್ರಾಮದ ಪಳ್ಳತ್ತಾರು ನಿವಾಸಿಯಾಗಿದ್ದ ಹದಿನೇಳರ ಹರೆಯದ ಬಾಲಕ ವಿದೇಶದಲ್ಲಿರುವ ವ್ಯಕ್ತಿಯ ಮತವನ್ನು ಚಲಾಯಿಸಲು ನೆಟ್ಟಣಿಗೆ ಮುಡ್ನೂರು ಗ್ರಾಮದ ಆಲಂತಡ್ಕ ಶಾಲೆಯ 208ನೇ ಮತಗಟ್ಟೆಗೆ ಹೋಗಿದ್ದು, ಮತಗಟ್ಟೆಯೊಳಗಿದ್ದ ಬಿಜೆಪಿ ಪಕ್ಷದ ಏಜೆಂಟ್ ಆತನ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಮತದಾನ ಕೆಂದ್ರದಲ್ಲಿ ಕರ್ತವ್ಯದಲ್ಲಿದ್ದ ಚುನಾವಣಾ ಅಧಿಕಾರಿಗಳು ಶಾಕೀರ್ನ ಗುರುತು ಚೀಟಿಗಳನ್ನು ಪರಿಶೀಲಿಸಿದಾಗ ನಕಲಿ ಮತದಾನಕ್ಕೆ ಬಂದಿರುವುದು ದೃಢಪಟ್ಟಿತ್ತು. ಬಳಿಕ ಅಧಿಕಾರಿಗಳು ಆತನನ್ನು ಪೊಲೀಸರಿಗೊಪ್ಪಿಸಿದ್ದರು.
ನಕಲಿ ಮತದಾನ ಮಾಡಲು ಬಂದು ಸಿಕ್ಕಿಬಿದ್ದಿದ್ದ ಶಾಕೀರ್ನನ್ನು ವಶಕ್ಕೆ ತೆಗೆದುಕೊಂಡಿದ್ದ ಸಂಪ್ಯ ಪೊಲೀಸರು ಆತನ ವಿರುದ್ಧ 171ಎಫ್, 419,511 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಬಳಿಕ ಆತ ಬಾಲಾಪರಾಧಿಯಾದ ಹಿನ್ನೆಲೆಯಲ್ಲಿ ಹೆತ್ತವರ ವಶಕ್ಕೆ ಒಪ್ಪಿಸಿದ್ದರು. ಇದೀಗ ಪೊಲೀಸರು ಆತನಿಗೆ ಗುರುತು ಚೀಟಿ ನೀಡಿ, ನಕಲಿ ಮತದಾನ ಮಾಡಲು ಪ್ರೇರೇಪಿಸಿದ್ದ ಇಬ್ರಾಹಿಂ ಯಾನೆ ಉಂಬಿ ಮತ್ತು ಅಬ್ಬಾಸ್ ಎಂಬವರನ್ನು ಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.