ಹಸ್ತಲಾಘವ ಮಾಡುವಾಗ ಸಿಗುವ ಸಂತಸ ಅಪಾರ
ಈದುಲ್ ಫಿತ್ರ್ ಸವಿ ನೆನಪುಗಳು!
ರಮಝಾನ್ನ ಉಪವಾಸ ಆಚರಿಸಿದ ಬಳಿಕ ಸಂಭ್ರಮಿಸುವ ಪೆರ್ನಾಳ್ನಂದು ಪರಸ್ಪರ ಹಸ್ತಲಾಘವ ಮಾಡುವಾಗ ಸಿಗುವ ಸಂತಸ ಅಪಾರ. ಅದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಂದು ಬಡವ, ಶ್ರೀಮಂತ, ಮಧ್ಯಮ ವರ್ಗದ ಹಿರಿಯ-ಕಿರಿಯರು ಎಲ್ಲಾ ದ್ವೇಷ, ಅಸೂಯೆಯನ್ನು ಮರೆತು ಮಕ್ಕಳ ಮನಸ್ಸಿನಂತವರಾಗುತ್ತಾರೆ.
ಅಂದು ಮುಂಜಾನೆ ಎದ್ದೊಡನೆ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯ ಹೆಸರಿನಲ್ಲಿ ಬಡವರಿಗೆ ನೀಡಬೇಕಾದ ಫಿತ್ರ್ ಝಕಾತನ್ನು ತಲುಪಿಸಿ, ಬಿಸಿನೀರಿನಲ್ಲಿ ಸ್ನಾನ ಮಾಡಿ ‘ಸುಬಹ್’ ನಮಾಝ್ ಮುಗಿಸಿ, ಹಬ್ಬಕ್ಕಾಗಿ ಖರೀದಿಸಿದ ಹೊಸ ವಸ್ತ್ರವನ್ನು ಧರಿಸಿ, ಸಿಹಿ ತಿಂಡಿ ತಿಂದು ಮಸೀದಿಗೆ ಸಾಲಾಗಿ ಹೋಗಿ ಅಲ್ಲೆಲ್ಲಾ ಪರಿಯಚಯಸ್ಥರನ್ನು ಕಂಡು ಮಾತನಾಡಿ, ಆರೋಗ್ಯ ವಿಚಾರಿಸಿದಾಗ ಮನಸ್ಸಿಗೆ ನೆಮ್ಮದಿಯಾಗುತ್ತದೆ.
ಅದೊಂದು ಪೆರ್ನಾಳ್ನಂದು ಮಸೀದಿಗೆ ತೆರಳಿ ನಮಾಝ್ ಮುಗಿಸಿ ಖುಷಿಯಿಂದ ಮನೆಗೆ ಮರಳುವಾಗ ತಾಯಿಯೊಬ್ಬರು ತನ್ನ ಮಗುವನ್ನು ಕಂಕುಳಲ್ಲಿಟ್ಟುಕೊಂಡು ಭಿಕ್ಷೆಗಾಗಿ ಕೈ ಚಾಚಿದಾಗ ಫಿತ್ರ್ ಝಕಾತ್ ಆಗಿ ಕೊಡುವ ದಾನವು ಅರ್ಹರಿಗೆ ತಲುಪಿಸುವಲ್ಲಿ ನಾನು ಸೋತು ಹೋದೆನೇ? ಅಲ್ಲಾ ದುರಾಸೆಯಿಂದ ಈ ತಾಯಿ ಕೈ ಚಾಚಿದರೇ? ಎಂದು ಮನಸ್ಸು ಪ್ರಶ್ನಿಸಿತ್ತು. ಆ ಪ್ರಶ್ನೆ ಇನ್ನೂ ಮನಸ್ಸಿನಿಂದ ದೂರವಾಗಿಲ್ಲ. ಈಗಲೂ ಅಲ್ಲಲ್ಲಿ ಭಿಕ್ಷೆಗಾಗಿ ಕೈ ಚಾಚುವಾಗ ಝಕಾತ್ ಯಾರ ಒಡಲು ಸೇರುತ್ತಿದೆ ಎಂಬ ಪ್ರಶ್ನೆ ಸದಾ ಕಾಡುತ್ತಿದೆ.
ಶೇಖ್ ಇಸಾಕ್, ನ್ಯಾಯವಾದಿ ಮಂಗಳೂರು