ಗ್ರಾಮೀಣ ವಸತಿ ಯೋಜನೆಯ ಫಲಾನುಭವಿಗಳಿಗೆ ಸಹಕಾರಿ ಸಂಘಗಳಲ್ಲೂ ಖಾತೆ ತೆರೆಯುವ ಅವಕಾಶ ಕಲ್ಪಿಸಲು ಚಿಂತನೆ: ಖಾದರ್
ಉಡುಪಿಗೂ ಖಾದರ್ ಉಸ್ತುವಾರಿ ?

ಮಂಗಳೂರು, ಜೂ. 15: ಗ್ರಾಮೀಣ ವಸತಿ ಯೋಜನೆಯ ಫಲಾನುಭವಿಗಳಿಗೆ ಸಹಕಾರಿ ಸಂಘಗಳಲ್ಲೂ ಖಾತೆ ತೆರೆಯುವ ಅವಕಾಶ ಕಲ್ಪಿಸಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ವಸತಿ ಯೋಜನೆಯ ಸವಲತ್ತು ಪಡೆಯಬೇಕಾದರೆ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕ್ ಅಥವಾ ಇತರೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾತೆ ಇರಬೇಕು ಎಂಬ ನಿಯಮ ಇದೆ. ಆದರೆ ಗ್ರಾಮೀಣ ಪ್ರದೇಶದ ಬಡವರಿಗೆ ಬ್ಯಾಂಕ್ ಇರುವಲ್ಲಿಗೆ ತೆರಳಿ ಖಾತೆ ತೆರೆಯಲು ಕಷ್ಟವಾಗುತ್ತಿದೆ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಇರುವ ಸಹಕಾರಿ ಸಂಘಗಳಲ್ಲಿ ವಸತಿ ಫಲಾನುಭವಿಗಳು ಖಾತೆ ತೆರೆಯಲು ಅವಕಾಶ ನೀಡುವ ಬಗ್ಗೆ ಪರಿಶೀಲನೆ ನಡೆಸಿ, ವರದಿ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ವಾರದೊಳಗೆ ಲೆಟರ್: ಸರ್ಕಾರದ ಯಾವುದೇ ವಸತಿ ಯೋಜನೆಯ ಅರ್ಜಿ ಇಲಾಖೆಗೆ ರವಾನೆಯಾದ ಒಂದು ವಾರದೊಳಗೆ ಪಟ್ಟಿಗೆ ಅನುಮೋದನೆ ನೀಡಬೇಕು. ಕೂಡಲೇ ಹಂಚಿಕೆಯ ಪತ್ರವನ್ನು ಕಳುಹಿಸಬೇಕು. ಈ ವೇಳೆ ಮನೆ ನಿರ್ಮಿಸಲು ಖಾತೆ ತೆರೆಯಲು ಕಷ್ಟ ಪಡುವವರಿದ್ದಾರೆ. ಇದರಿಂದಾಗಿಯೇ ಲಕ್ಷದಷ್ಟು ಮನೆಗಳು ನಿರ್ಮಾಣಕ್ಕೆ ಬಾಕಿ ಇರುವುದು ಪತ್ತೆಯಾಗಿದೆ. ಈ ವಿಳಂಬವನ್ನು ಹೋಗಲಾಡಿಸಲು ಸಹಕಾರಿ ಸಂಘಗಳಲ್ಲೂ ಖಾತೆ ತೆರೆದು ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ವಸತಿ ಯೋಜನೆಗೆ ನಗರ ಪ್ರದೇಶದಲ್ಲಿ ಆದಾಯ ಮಿತಿ 87 ಸಾವಿರ ರೂ. ಆದರೆ, ಗ್ರಾಮೀಣದಲ್ಲಿ 32 ಸಾವಿರ ರೂ. ಎಂದು ನಿಗದಿಪಡಿಸಲಾಗಿದೆ. ಗ್ರಾಮೀಣ ಪ್ರದೇಶ ಮೊತ್ತವನ್ನು ಹೆಚ್ಚಳಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಉಡುಪಿಗೂ ಖಾದರ್ ಉಸ್ತುವಾರಿ ?
ನಗರಾಭಿವೃದ್ಧಿ ಮತ್ತು ವಸತಿ ಖಾತೆಯನ್ನು ಹೊಂದಿರುವ ದ.ಕ. ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿರುವ ಸಚಿವ ಯು.ಟಿ.ಖಾದರ್ ಅವರಿಗೆ ನಿರೀಕ್ಷೆಯಂತೆ ಉಸ್ತುವಾರಿ ಸಚಿವ ಸ್ಥಾನ ಲಭಿಸಿದೆ. ಯು.ಟಿ.ಖಾದರ್ ಅವರು ಜಿಲ್ಲೆಯ ಏಕೈಕ ಸಚಿವರಾದ ಹಿನ್ನೆಲೆಯಲ್ಲಿ ಸಹಜವಾಗಿಯೇ ಉಸ್ತುವಾರಿ ಸಚಿವ ಸ್ಥಾನ ಸಿಕ್ಕಿದೆ. ಅದೇ ರೀತಿ ಉಡುಪಿ ಜಿಲ್ಲೆಗೂ ಸಚಿವ ಖಾದರ್ ಅವರಿಗೆ ಹೆಚ್ಚುವರಿಯಾಗಿ ಉಸ್ತುವಾರಿ ಸಚಿವ ಸ್ಥಾನ ಸಿಗುವ ಸಂಭವ ಇದೆ ಎಂದು ತಿಳಿದುಬಂದಿದೆ.
ಖಾದರ್ ಅವರು ಹಿಂದಿನ ಸರ್ಕಾರದಲ್ಲಿ ಕೋಲಾರ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.







