ಗೌರಿ ಲಂಕೇಶ್ ಹತ್ಯೆ ಪ್ರಕರಣ : ಪರಶುರಾಮ ವಾಗ್ಮೋರೆ ಮುಖ ಗುರುತಿಸಿದ ಸಾಕ್ಷಿಗಳು
ಬೆಂಗಳೂರು, ಜೂ.16: ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ ವಾಗ್ಮೋರೆಯೆ ಗೌರಿ ಲಂಕೇಶ್ಗೆ ಗುಂಡು ಹೊಡೆದಿದ್ದು ಎಂದು ಪ್ರತ್ಯಕ್ಷದರ್ಶಿಗಳಾದ ಪತ್ರಿಕೋದ್ಯಮ ವಿದ್ಯಾರ್ಥಿ ಹಾಗೂ ಕೂಲಿ ಕಾರ್ಮಿಕನೊಬ್ಬ ಎಸ್ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ.
ಗೌರಿ ಮನೆಯ ಹತ್ತಿರದಲ್ಲಿಯೇ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ದಿನಗೂಲಿ ಕಾರ್ಮಿಕ ಕಾರ್ಯನಿರ್ವಹಿಸುತ್ತಿದ್ದ. ಸೆ.5ರಂದು ರಾತ್ರಿ ಕಾರ್ಮಿಕ ಮೂತ್ರ ವಿಸರ್ಜನೆಗೆಂದು ಕಟ್ಟಡದಿಂದ ಹೊರ ಬಂದಾಗ ಗೌರಿಲಂಕೇಶ್ ಹತ್ಯೆಯಾದ ಕೆಲವೆ ನಿಮಿಷಗಳಲ್ಲಿ ಹಂತಕರು ಪರಾರಿಯಾಗುತ್ತಿುವುದನ್ನು ಕಾರ್ಮಿಕ ನೋಡಿದ್ದಾನೆ.
ಹಾಗೆಯೆ ಅದೇ ರಸ್ತೆಯ ಪೇಯಿಂಗ್ಗೆಸ್ಟ್ ಕಟ್ಟಡವೊಂದರಲ್ಲಿ ನೆಲೆಸಿದ್ದ ರಾಯಚೂರಿನ ವಿದ್ಯಾರ್ಥಿ ಕೂಡ ಹತ್ಯೆ ಆರೋಪಿಯನ್ನು ನೋಡಿದ್ದ. ಈ ಸಂಬಂಧ ಅವರಿಬ್ಬರೂ ನೀಡಿದ ಮಾಹಿತಿ ಆಧರಿಸಿಯೆ ಎಸ್ಐಟಿ ಅಧಿಕಾರಿಗಳು ಶಂಕಿತನ ರೇಖಾಚಿತ್ರ ತಯಾರಿಸಿದ್ದರು. ಈಗ ಆರೋಪಿ ವಾಗ್ಮೋರೆ ಬಂಧನದ ಬೆನ್ನಲ್ಲೆ ಪುನಃ ಅವರನ್ನು ಕರೆಸಿ ಗುರುತು ಪತ್ತೆ ಮಾಡಿಸಿದ್ದಾರೆ.
ಎಸ್ಐಟಿ ಅಧಿಕಾರಿಗಳು ಸಾಕ್ಷಿಗಳಿಗೆ ಒಬ್ಬೊಬ್ಬರೆ ಆರೋಪಿಗಳನ್ನು ತೋರಿಸಲಾಗಿದೆ. ಈ ವೇಳೆ ಪರಶುರಾಮ ವಾಗ್ಮೋರೆಯನ್ನು ತೋರಿಸಿದಾಗ ಈತನೆ ಗುಂಡು ಹೊಡೆದು, ಬೈಕ್ ಹತ್ತಿಕೊಂಡು ಸ್ವಲ್ಪ ದೂರು ಹೋಗಿ, ತಿರುಗಿ ನಮ್ಮನ್ನು ದುರುಗುಟ್ಟಿ ನೋಡಿದ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಕಾರ್ಮಿಕ ಸಹ ವಾಗ್ಮೋರೆ ಕಡೆಗೆ ಬೊಟ್ಟು ತೋರಿಸಿದ ಎನ್ನಲಾಗಿದೆ.