ಮಂಗಳೂರು: 7.87 ಲಕ್ಷ ರೂ. ಮೌಲ್ಯದ 175 ಲೋಡು ಮರಳು ವಶ
ಮಂಗಳೂರು, ಜೂ.16: ನಗರದ ಹೊರವಲಯದ ತಿರುವೈಲು ಗ್ರಾಮದ ದೇವಿಪ್ರಸಾದ್ ಕಾಂಪೌಂಡ್, ನರಸಿಂಹ ರಾವ್ ಕಾಂಪೌಂಡ್, ಅಮೃತನಗರ ಮತ್ತಿತರ ಕಡೆಗಳಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 7.87 ಲಕ್ಷ ರೂ. ವೌಲ್ಯದ 175 ಲೋಡು ಮರಳನ್ನು ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.
1048 ಕ್ಯೂಬಿಕ್ ಮೀಟರ್ ಅಂದರೆ 175 ಲೋಡು ಮರಳು ವಶಕ್ಕೆ ಪಡೆಯಲಾಗಿದೆ. ಇದರ ವೌಲ್ಯ 7,87,500 ರೂ. ಎಂದು ಅಂದಾಜಿಸಲಾಗಿದೆ. ವಶಕ್ಕೆ ಪಡೆಯಲಾದ ಮರಳನ್ನು ಗ್ರಾಮಾಂತರ ಠಾಣೆ ಪೊಲೀಸರ ಮೂಲಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ರ ಸಲಹೆಯಂತೆ ಸಿಸಿಬಿ ಇನ್ಸ್ಪೆಕ್ಟರ್ ಕೆ.ಶ್ರೀನಿವಾಸ್ ಮತ್ತು ಸಿಸಿಪಿಎಸ್ ಘಟಕದ ಇನ್ಸ್ಪೆಕ್ಟರ್ ರಾಜಶೇಖರ್, ಸಿಸಿಬಿ ಎಸ್ಸೈ ಎಚ್.ಡಿ.ಕಬ್ಬಾಳ್ರಾಜ್ ಹಾಗೂ ಸಿಬ್ಬಂದಿ ವರ್ಗ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Next Story