ಕಾಲೇಜು ವಿದ್ಯಾರ್ಥಿನಿಯ ಜೊತೆ ಕ್ಯಾಬ್ ಚಾಲಕನ ಅನುಮಾಸ್ಪದ ನಡೆ
ಸ್ಪಂದಿಸದ ಬರ್ಕೆ ಠಾಣೆ ಪೊಲೀಸರ ವಿರುದ್ಧ ರಿಕ್ಷಾ ಚಾಲಕರ ಸಂಘದಿಂದ ಆಯುಕ್ತರಿಗೆ ಮನವಿ

ಮಂಗಳೂರು, ಜೂ.16: ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಬೆಂಗಳೂರು ಮೂಲದ ಕಾಲೇಜು ವಿದ್ಯಾರ್ಥಿನಿಯ ಜೊತೆ ಕ್ಯಾಬ್ ಚಾಲಕನೊಬ್ಬನ ಅನುಮಾಸ್ಪದ ನಡೆಯ ಬಗ್ಗೆ ಬರ್ಕೆ ಪೊಲೀಸರ ಗಮನಕ್ಕೆ ತಂದರೂ ಪೊಲೀಸರು ಸೂಕ್ತ ರೀತಿಯಲ್ಲಿ ಸ್ಪಂದಿಸದೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ವಿದ್ಯಾಗಣಪತಿ ರಿಕ್ಷಾ ಚಾಲಕರ ಸಂಘ ಆರೋಪಿಸಿದೆಯಲ್ಲದೆ, ಕ್ಯಾಬ್ ಚಾಲಕನನ್ನು ತನಿಖೆಗೆ ಒಳಪಡಿಸಬೇಕು ಮತ್ತು ನಿರ್ಲಕ್ಷ್ಯ ತಾಳಿದ ಪೊಲೀಸರ ವಿರುದ್ಧ ಕ್ರಮ ಜರಗಿಸಬೇಕು ಎಂದು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಜೂ.15ರ ರಾತ್ರಿ ಬಾಲಕಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ನಿಂತಿದ್ದಳು. ಈಕೆಯೊಂದಿಗೆ ಕೆಲವು ಮಂದಿ ಮಾತನಾಡುತಿದ್ದುದನ್ನು ಗಮನಿಸಿದ ನಾವು ಬಾಲಕಿಯನ್ನು ಪ್ರಶ್ನಿಸಿದರೂ ಸಮರ್ಪಕ ಉತ್ತರ ನೀಡಲಿಲ್ಲ. ಈ ಮಧ್ಯೆ ರಾತ್ರಿ ಸುಮಾರು 2:30ರ ವೇಳೆಗೆ ಓಲಾ ಕ್ಯಾಬ್ನ ಚಾಲಕನೊಬ್ಬ ಈಕೆಯನ್ನು ಕರೆದೊಯ್ಯಲು ಮುಂದಾದ. ಈ ಕ್ಯಾಬ್ನಲ್ಲಿ ಇನ್ನೊಬ್ಬನೂ ಇದ್ದ. ಸಂಶಯಗೊಂಡ ನಾವು ಕ್ಯಾಬನ್ನು ತಡೆದು ನಿಲ್ಲಿಸಿ ವಿಚಾರಿಸಿದೆವು. ತಾನು ಈಕೆಯನ್ನು ರೈಲ್ವೆ ನಿಲ್ದಾಣಕ್ಕೆ ಬಿಡುವುದಾಗಿ ಚಾಲಕ ತಿಳಿಸಿದಾಗ ತಡರಾತ್ರಿ ಯಾವ ರೈಲು ಇದೆ ಎಂದು ಪ್ರಶ್ನಿಸಿದೆವು. ಕೊನೆಗೆ ತಾನು ಈಕೆಯನ್ನು ಮನೆಗೆ ಕರೆದೊಯ್ಯುವುದಾಗಿ ಹೇಳಿದ. ಆಕೆಯನ್ನು ನಾನೇ ಕ್ಯಾಬ್ನಲ್ಲಿ ಕರೆದು ತಂದಿರುವುದಾಗಿಯೂ ಹೇಳಿದ. ಸಂಶಯ ಬಲಗೊಂಡ ತಕ್ಷಣ ನಾವು ಬರ್ಕೆ ಠಾಣೆಯ ಗಮನ ಸೆಳೆದೆವು. ಪೊಲೀಸರು ಕರೆದುಕೊಂಡು ಬರುವಂತೆ ಸೂಚಿಸಿದ ಮೇರೆಗೆ ಕ್ಯಾಬ್ ಚಾಲಕನು ಮತ್ತು ಆಕೆಯನ್ನು ಠಾಣೆಗೆ ಕರೆದೊಯ್ದಿದ್ದು, ಆದರೆ ಬರ್ಕೆ ಠಾಣೆಯ ಪೊಲೀಸರು ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಕ್ಯಾಬ್ ಚಾಲಕನನ್ನೂ ತನಿಖೆಗೆ ಒಳಪಡಿಸಲಿಲ್ಲ. ಹಾಗಾಗಿ ಪ್ರಕರಣದಲ್ಲಿ ನಿರ್ಲಕ್ಷ್ಯ ತಾಳಿದ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಕ್ಯಾಬ್ ಚಾಲಕನ ನಡೆಯ ಬಗ್ಗೆ ವಿಚಾರಿಸಬೇಕು ಎಂದು ಸಂಘದ ಕಾರ್ಯದರ್ಶಿ ಸಂತೋಷ್ ಆಗ್ರಹಿಸಿದ್ದಾರೆ.
ಬಾಲಕಿಯು ವಾರದ ಹಿಂದೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಪೊಲೀಸರು ಆಕೆಯ ಹೆತ್ತವರನ್ನು ಸಂಪರ್ಕಿಸಿ ವಶಕ್ಕೆ ಒಪ್ಪಿಸುವ ಪ್ರಯತ್ನ ನಡೆಸಿದ್ದರೂ ಕೂಡ ಪೊಲೀಸರ ನಡೆಯೂ ಅನುಮಾನ ಹುಟ್ಟಿಸಿದೆ. ಒಂದು ವೇಳೆ ಈ ಬಾಲಕಿಯ ಮೇಲೆ ನಗರದ ಎಲ್ಲೇ ಆದರೂ ದೌರ್ಜನ್ಯ ನಡೆದರೆ ಅದರಿಂದ ಮಂಗಳೂರು ನಗರಕ್ಕೆ ಕಪ್ಪು ಚುಕ್ಕೆಯಾಗದೇ ? ಪೊಲೀಸರು ಪ್ರಕರಣವನ್ನು ನಿರ್ಲಕ್ಷಿಸಿದ್ದು ಯಾಕೆ ? ಕ್ಯಾಬ್ ಚಾಲಕನೊಂದಿಗೆ ಪೊಲೀಸರೂ ಶಾಮೀಲಾಗಿದ್ದಾರಾ ಎಂದು ಸಂಘದ ಸದಸ್ಯ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಜಟಿಲ ಪ್ರಕರಣವೊಂದನ್ನು ಪೊಲೀಸರು ಸಮರ್ಪಕವಾಗಿ ನಿಭಾಯಿಸದೆ ನಿರ್ಲಕ್ಷ್ಯ ತಾಳಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಮ್ಮ ಬೈದರೆಂಬ ಕಾರಣಕ್ಕೆ ಮನೆ ಬಿಟ್ಟಿದ್ದಳು...
ಶುಕ್ರವಾರ ರಾತ್ರಿ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಂದ ಈ ಬಾಲಕಿಯು ತನ್ನ ಮನೆಯಲ್ಲಿ ಅಮ್ಮ ಬೈದರು ಎಂಬ ಕಾರಣಕ್ಕೆ ಮನೆ ಬಿಟ್ಟಿದ್ದಳು ಎನ್ನಲಾಗಿದೆ. ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಈಕೆಗೆ ಪ್ರೀತಿ-ಪ್ರೇಮ ವಿಷಯಕ್ಕೆ ಸಂಬಂಧಿಸಿ ಅಮ್ಮ ಬೈದಿದ್ದರು ಎಂದು ತಿಳಿದು ಬಂದಿದೆ. ಈ ಸಿಟ್ಟಿನಿಂದ ಜೂ.11ರಂದು ಮನೆಯಿಂದ ಹೊರಟವಳು ಮರಳಿ ಹೋಗದೆ ನಾಪತ್ತೆಯಾಗಿದ್ದಳು.
ಈ ಬಗ್ಗೆ ಆ ದಿನವೇ ರಾತ್ರಿ ಹೆಗ್ಗನಹಳ್ಳಿ ಪೊಲೀಸ್ ಠಾಣೆಗೆ ವಿದ್ಯಾರ್ಥಿನಿಯ ಮನೆಯವರು ದೂರು ನೀಡಿದ್ದು, ಅಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.
ಈ ವಿದ್ಯಾರ್ಥಿನಿ ಕೆಎಸ್ಸಾರ್ಟಿಸಿ ಬಸ್ನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೋಗಿದ್ದಳು. ಅಲ್ಲಿ ಸ್ವಲ್ಪ ಹೊತ್ತು ಕಳೆದು ಊಟ ಮಾಡಿ ರಾತ್ರಿ ರೂಟಿನ ಬಸ್ನಲ್ಲಿ ಹಾಸನಕ್ಕೆ ತೆರಳಿದ್ದಳು. ಅಲ್ಲೂ ಅದೇ ರೀತಿ ಬಸ್ಗಳಲ್ಲಿ ಊರೂರು ಸುತ್ತಾಡಿ ಚಿಕ್ಕಮಗಳೂರಿಗೆ ಹೋಗಿದ್ದಳು.
ಹೀಗೆ ಜೂ.15ರಂದು ಮಂಗಳೂರು ತಲುಪಿದ್ದಳು. ರಾತ್ರಿ 11:30ಕ್ಕೆ ನಗರದ ಕೆಎಸ್ಸಾರ್ಟಿಸಿ ಬಸ್ ತಂಗುದಾಣದಲ್ಲಿ ಒಂಟಿಯಾಗಿ ನಿಂತಿದ್ದನ್ನು ಗಮನಿಸಿದ ಸ್ಥಳೀಯ ರಿಕ್ಷಾ ಚಾಲಕರು ವಿಚಾರಿಸಿ ಸಹಾಯ ಹಸ್ತ ನೀಡುವ ಪ್ರಯತ್ನ ಮಾಡಿದರೂ ಆಕೆ ಸರಿಯಾಗಿ ಸ್ಪಂದಿಸಲಿಲ್ಲ. ಈ ಮಧ್ಯೆ ಕ್ಯಾಬ್ನ ಚಾಲಕನೊಬ್ಬ ಬಂದು ಆಕೆಯ ಜತೆ ಮಾತನಾಡುವುದನ್ನು ಗಮನಿಸಿದ ರಿಕ್ಷಾ ಚಾಲಕರು ಮತ್ತಷ್ಟು ಸಂಶಯಗೊಂಡು ತಡೆದು ನಿಲ್ಲಿಸಿ ಪ್ರಶ್ನಿಸಿದ್ದಾರಲ್ಲದೆ ಬರ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಅಲ್ಲೂ ವಿದ್ಯಾರ್ಥಿನಿ ಅಸ್ಪಷ್ಟವಾಗಿ ಮಾಹಿತಿ ನೀಡಿದ್ದರೂ ಬಳಿಕ ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ಷ್ಮವಾಗಿ ವಿಚಾರಣೆ ನಡೆಸಿದಾಗ ಅಮ್ಮ ಬೈದದ್ದಕ್ಕೆ ಮನೆಯಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಹೇಳಿದ್ದಾಳೆ. ಬರ್ಕೆ ಪೊಲೀಸರು ವಿದ್ಯಾರ್ಥಿನಿಯು ಪತ್ತೆಯಾದ ಬಗ್ಗೆ ಹೆಗ್ಗನಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಅದರಂತೆ ಶನಿವಾರ ರಾತ್ರಿ ಪೊಲೀಸರು ಪೋಷಕರ ಜತೆ ನಗರಕ್ಕೆ ಬಂದು ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸ್ಥಳೀಯ ರಿಕ್ಷಾ ಚಾಲಕರ ಸಮಯ ಪ್ರಜ್ಞೆಯಿಂದ ವಿದ್ಯಾರ್ಥಿನಿ ಹೆತ್ತವರ ಮಡಿಲು ಸೇರಿದ್ದರೂ ಕ್ಯಾಬ್ ಚಾಲಕನ ನಡೆ ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ.