ಬೆಂಗಳೂರು : ಸಂಚಾರ ದಟ್ಟಣೆಯಿಂದ ಬೇಸತ್ತು ಕುದುರೆ ಸವಾರಿ
ಬೆಂಗಳೂರು,ಜೂ.16: ನಗರದ ಸಂಚಾರ ದಟ್ಟಣೆಯಿಂದ ಬೇಸತ್ತ ಖಾಸಗಿ ಕಂಪೆನಿಯ ಟೆಕ್ಕಿಯೊಬ್ಬರು ಕುದುರೆ ಸವಾರಿ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರೂಪೇಶ್ ಕುಮಾರ್ ವರ್ಮಾ ಕುದುರೆ ಸವಾರಿ ಮಾಡಿದ ಟೆಕ್ಕಿ. ತಮ್ಮ ಒಡೆತನದಲ್ಲಿ ಸಂಸ್ಥೆ ಸ್ಥಾಪಿಸುವ ಉದ್ದೇಶ ಹೊಂದಿರುವ ವರ್ಮಾ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದು , ಉದ್ಯೋಗದ ಕೊನೆ ದಿನ ಕೆಲಸಕ್ಕೆ ಹಾಜರಾಗಿ ನಗರದ ಸಂಚಾರ ದಟ್ಟಣೆಯಿಂದ ಬೇಸತ್ತು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಂಚಾರ ದಟ್ಟಣೆ ಸಮಸ್ಯೆಗೆ ನಾನು ಕುದುರೆ ಸವಾರಿ ಕಲಿತಿರುವುದಾಗಿ ತಿಳಿಸಿದ್ದಾರೆ.
ಕುದುರೆ ಸವಾರಿ ಮಾಡಿಕೊಂಡು ಬಂದ ಅವರು, ‘ತನ್ನ ಸಾಫ್ಟ್ ವೇರ್ ಕೆಲಸಕ್ಕೆ ಕೊನೆ ದಿನ’ ಎಂದು ಬರೆದಿದ್ದ ಬೋರ್ಡ್ ಹಾಕಿ ಕಚೇರಿಗೆ ಬಳಿ ತೆರಳಿದ ಅವರು ತನ್ನ ಕುದುರೆಯನ್ನು ಪಾರ್ಕಿಂಗ್ನಲ್ಲಿ ಕಟ್ಟಿಹಾಕಿದ್ದರು. ಕುದುರೆ ಸವಾರಿಗೆ ಸಮರ್ಥನೆಯನ್ನು ನೀಡಿರುವ ಅವರು ದೇಶದಲ್ಲಿ ಹಲವು ಸಮಸ್ಯೆಗಳಿದ್ದು, ಪ್ರತಿಯೊಬ್ಬರು ಒಂದು ಸಮಸ್ಯೆ ಕುರಿತಾದರೂ ಗಮನಹರಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.
ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಇತರೇ ಉದ್ಯೋಗಿಗಳು ಕೇವಲ ಕೆಲಸಕ್ಕೆ ಸೀಮಿತವಾಗದೆ ತಮ್ಮದೇ ಕಂಪೆನಿ ನಿರ್ಮಾಣ ಮಾಡಲು ಮುಂದಾಗಿ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ. ಈ ಕುರಿತ ಫೋಟೋ ಹಾಗೂ ವಿಡಿಯೋವನ್ನು ಸತೀಶ್ ಸರ್ವೋದಯ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.