ಪರಿಸರ ಸ್ನೇಹಿ ಕಟ್ಟಡಕ್ಕಾಗಿ ಸರ್ಕಾರದಿಂದ ಮಾರ್ಗದರ್ಶಿ ಸೂತ್ರ : ಸಚಿವ ಖಾದರ್
ಕೋಟೇಶ್ವರದ ‘ಬ್ಯಾರೀಸ್ ಗ್ರೀನ್ ಅವೆನ್ಯೂ’ ವಸತಿ ಸಮುಚ್ಚಯ ಉದ್ಘಾಟನೆ

ಕುಂದಾಪುರ, ಜೂ.17: ವಸತಿ ಇಲಾಖೆ ಮಾತ್ರವಲ್ಲ ಎಲ್ಲ ಸಂಸ್ಥೆಗಳು ಪರಿಸರ ಸ್ನೇಹಿ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಮಾರ್ಗದರ್ಶಿ ಸೂತ್ರ ರೂಪಿಸಲು ಸರಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಸಲಾಗುವುದು ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಕೋಟೇಶ್ವರದಲ್ಲಿ ನಿರ್ಮಾಣಗೊಂಡಿರುವ ಬ್ಯಾರೀಸ್ ಗ್ರೂಪ್ನ ಪ್ರತಿಷ್ಠಿತ ಐಜಿಬಿಸಿ ಪ್ಲಾಟಿನಂ ದೃಢೀಕರಣದ ಗೌರವಕ್ಕೆ ಪಾತ್ರವಾದ ಪರಿಸರ ಸ್ನೇಹಿ ನೂತನ ವಸತಿ ಸಮುಚ್ಚಯ ‘ಬ್ಯಾರೀಸ್ ಗ್ರೀನ್ ಅವೆನ್ಯೂ’ ಅನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಖಾಸಗಿ ಸಂಸ್ಥೆಗಳ ಜೊತೆಯಲ್ಲಿ ಸರಕಾರ ಸಭೆಯನ್ನು ಕರೆಸಿ ಈ ಕುರಿತು ಚರ್ಚಿಸಲಾಗುವುದು. ಇದು ತುಂಬಾ ಅಗತ್ಯ. ವಿದ್ಯುತ್, ನೀರು ಉಳಿತಾಯ ಮಾಡಿದರೆ ಅದು ಮುಂದಿನ ಜನಾಂಗಕ್ಕೆ ನಾವು ನೀಡುವ ದೊಡ್ಡ ಆಸ್ತಿ ಆಗು ತ್ತದೆ. ಇದರಿಂದ ಆರೋಗ್ಯಕ್ಕೂ ಪೂರಕವಾದ ವಾತಾವರಣ ನಿರ್ಮಾಣ ಆಗು ತ್ತದೆ ಎಂದರು.
ಇಂದು ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಹೆಚ್ಚು ಕಟ್ಟಡಗಳು ನಿರ್ಮಾಣ ಆಗುತ್ತದೆ. ಇದರಿಂದ ಹೊರ ಬರುವ ಕೊಳಚೆ ನೀರಿನಿಂದ ಸುತ್ತಲಿನ ಪ್ರದೇಶ ಗಳಿಗೆ ತೊಂದರೆ ಆಗುತ್ತದೆ. ಆದುದರಿಂದ ಇಂತಹ ಕಟ್ಟಡಗಳಿಗೆ ಎಸ್ಟಿಪಿ ಇಲ್ಲದೆ ಅನುಮತಿ ನೀಡಲೇ ಬಾರದು. ಈ ವಿಚಾರದಲ್ಲಿ ಗ್ರಾಪಂಗಳು ಪ್ರಾಮಾಣಿಕತೆ ಯಿಂದ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.ಗ್ರಾಮೀಣ ವಸತಿ ಯೋಜನೆಯಲ್ಲೂ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಖಾದರ್ ಭರವಸೆ ನೀಡಿದರು.
ಬ್ಯಾರೀಸ್ ಗ್ರೂಪ್ನ ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಕಟ್ಟಡಗಳು ದೇಶ ಹಾಗೂ ಸಮಾಜಕ್ಕೆ ಪೂರಕವಾಗಿದೆ. ಈ ರೀತಿಯ ಪರಿಸರ ಸ್ನೇಹಿ ಪರಿಕಲ್ಪನೆಯಿಂದ ಸಂಸ್ಥೆಯು ಸಮಾಜ ಸ್ನೇಹಿಯಾಗಿ ಮೂಡಿಬರುತ್ತಿದೆ. ಗ್ರಾಮೀಣ ಪ್ರದೇಶವಾಗಿ ರುವ ಕೋಟೇಶ್ವರದಲ್ಲಿ ಬೆಂಗಳೂರು ನಗರದಲ್ಲಿರುವಂತಹ ಕಟ್ಟಡ ನಿರ್ಮಿಸುವ ಮೂಲಕ ಬ್ಯಾರೀಸ್ ಗ್ರೀನ್ ಅವೆನ್ಯೂ ಕೋಟೇಶ್ವರದ ಕಿರೀಟಕ್ಕೆ ಒಂದು ಗರಿ ಯಾಗಿ ಮೂಡಿಬಂದಿದೆ ಎಂದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಬ್ಯಾರೀಸ್ ಗ್ರೂಪ್ನ ಕಟ್ಟಡಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಪರಿಸರ ಸ್ನೇಹಿ ಕಟ್ಟಡ, ಸಸಿಗಳನ್ನು ನೆಡುವ ಕಾರ್ಯಕ್ರಮಗಳು ಸೇರಿದಂತೆ ಇವರ ಪ್ರಕೃತಿ ಕುರಿತ ಕಾಳಜಿ ಶ್ಲಾಘನೀಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್ ಪ್ರತಿಷ್ಠಿತ ಐಜಿಬಿಸಿ ಪ್ಲಾಟಿನಂ ದೃಢೀಕರಣವನ್ನು ಸೈಯದ್ ಮುಹಮ್ಮದ್ ಬ್ಯಾರಿ ಅವರಿಗೆ ಹಸ್ತಾಂತರಿಸಿದರು. ಇದೇ ವೇಳೆ ಐಜಿಬಿಸಿಯ ಚಂದ್ರ ಶೇಖರ್ ಹರಿಹರನ್ ಹಾಜರಿದ್ದರು.
ಮುಖ್ಯ ಅತಿಥಿಗಳಾಗಿ ಕೋಟ ಜನತಾ ಫಿಶರೀಸ್ನ ಅಧ್ಯಕ್ಷ ಆನಂದ ಕುಂದರ್, ಕುಂದಾಪುರ ಪ್ರಭಾಕರ ಟೈಲ್ ವರ್ಕ್ಸ್ನ ಆಡಳಿತ ಪಾಲುದಾರ ಪ್ರಕಾಶ್ ಟಿ.ಸೋನ್ಸ್, ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ಜಾನಕಿ ಬಿಲ್ಲವ, ಭೂ ಮಾಲಕ ಸುಲೈಮಾನ್ ಉಪಸ್ಥಿತರಿದ್ದರು.
ಇದೇ ವೇಳೆ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದವರಿಗೆ ಸ್ಮರಣಿಕೆ ನೀಡಲಾಯಿತು. ಗ್ರೂಪ್ನ ನಿರ್ದೇಶಕ ಸಿದ್ದೀಕ್ ಬ್ಯಾರಿ ವಂದಿಸಿದರು. ವೀಣಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಸೈಯದ್ ಬ್ಯಾರಿ ಮನವಿಗೆ ಸ್ಪಂದಿಸಿದ ಸಚಿವರು
ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆ ಗಳಲ್ಲಿ ಪರಿಸರ ಸ್ನೇಹಿ ಕಟ್ಟಡಗಳು ನಿರ್ಮಾಣ ಆಗಬೇಕು. ಇದಕ್ಕೆ ಸ್ವಲ್ಪ ಹೆಚ್ಚು ಹಣ ಖರ್ಚಾಗಬಹುದು. ಆದರೆ ಹಣಕ್ಕಿಂತ ನೀರು, ವಿದ್ಯುತ್ ಉಳಿತಾಯ ತುಂಬಾ ಆಗುತ್ತದೆ ಎಂದು ಸಚಿವ ಖಾದರ್ ಅವರಲ್ಲಿ ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಇಲಾಖೆ ಮಾತ್ರವಲ್ಲ ಸರಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲೂ ಇದನ್ನು ಅಳವಡಿಸುವ ಕುರಿತು ಚರ್ಚಿಸಲಾಗುವುದು. ಈ ಬಗ್ಗೆ ಸಲಹಾ ಸಭೆಗೆ ನಿಮ್ಮನ್ನು ಆಹ್ವಾನಿಸುತ್ತೇನೆ ಎಂದು ಭರವಸೆ ನೀಡಿದರು.