ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ.ನರಸಿಂಹಮೂರ್ತಿ ನಿಧನ

ಕುಂದಾಪುರ, ಜೂ.17: ಸಾಹಿತಿ, ಸಂಸ್ಕೃತ ವಿದ್ವಾಂಸ, ಶ್ರೀಕುಂದೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ ಡಾ.ಎಚ್.ವಿ. ನರಸಿಂಹಮೂರ್ತಿ (72) ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ರವಿವಾರ ನಿಧನರಾದರು.
ಚಿಕ್ಕಮಗಳೂರು ಜಿಲ್ಲೆಯ ತೋಟದೂರು ಗ್ರಾಮದ ಮಾವಿನಕುಡಿಯಲ್ಲಿ ಜನಿಸಿದ ನರಸಿಂಹಮೂರ್ತಿ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಕೃತ ಉಪ ನ್ಯಾಸಕರಾಗಿ ಬಳಿಕ ಕುಂದಾಪುರದಲ್ಲೇ ನೆಲೆಸಿದ್ದರು. ಶೃಂಗೇರಿ ಶಾರದಾ ಪೀಠದ ಈ ಭಾಗದ ಧರ್ಮಾಧಿಕಾರಿಯಾಗಿದ್ದ ಅವರು, ಕನ್ನಡ ಸಾಹಿತ್ಯ ಪರಿಷತ್, ಜೇಸಿಸ್ ಅಧ್ಯಕ್ಷರಾಗಿ, ಎನ್ನೆಸ್ಸೆಸ್ ಯೋಜನಾಧಿಕಾರಿ, ಅಖಿಲ ಕರ್ನಾಟಕ ಸಂಸ್ಕೃತ ಪರಿಷತ್ ರಾಜ್ಯಾಧ್ಯಕ್ಷರಾಗಿ ಹಲವು ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.
ಇವರು 70ಕ್ಕೂ ಅಧಿಕ ಪುಸ್ತಕ, 15ಕ್ಕೂ ಹೆಚ್ಚಿನ ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ. ಉಪನಯನ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನನು ಇವರು ಪಡೆದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರ ರವಿವಾರ ಕುಂದಾಪುರದ ಕೋಟೇಶ್ವರದ ಅವರ ನಿವಾಸಕ್ಕೆ ತಂದಿದ್ದು, ಅವರ ನಿವಾಸಕ್ಕೆ ಸೋದರ ಸಂಬಂಧಿ, ಕರ್ನಾಟಕ ಬ್ಯಾಂಕಿನ ಆಡಳಿತ ನಿದೇರ್ಶಕ, ಸಿಇಒ ಮಹಾಬಲೇಶ್ವರ ಎಂ.ಎಸ್., ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಭೇಟಿ ನೀಡಿ ಸಂತಾಪ ಸೂಚಿಸಿದರು.