ಬೆಳ್ತಂಗಡಿ : ಮಕ್ಕಳ ಸಂರಕ್ಷಣಾ ಅಭಿಯಾನ-2018

ಬೆಳ್ತಂಗಡಿ,ಜೂ.18: ಮಕ್ಕಳ ಸುರಕ್ಷತಾ ಕಾಯಿದೆಯನ್ನು ಎಲ್ಲಾ ಶಾಲಾ, ಕಾಲೇಜುಗಳ ಮುಖ್ಯಸ್ಥರು ಅರಿತು ವ್ಯವಹರಿಸಿದರೆ ಶಿಕ್ಷಣ ಸಂಸ್ಥೆಗಳಿಗೆ, ಮಕ್ಕಳಿಗೆ ಅನುಕೂಲ ಎಂದು ಬೆಳ್ತಂಗಡಿ ಪೋಲಿಸ್ ವೃತ್ತ ನಿರೀಕ್ಷಕ ಸಂದೇಶ್ಪಿ.ಜಿ. ಸ್ಪಷ್ಟಪಡಿಸಿದರು.
ಶಿಕ್ಷಣ ಸಂಪನ್ಮೂಲ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೋಲಿಸ್ ಠಾಣೆ, ರಾಜ್ಯ ಸರಕಾರಿ ನೌಕರರ ವಿವಿದೋದ್ದೇಶ ಸಹಕಾರಿ ಸಂಘ ಬೆಳ್ತಂಗಡಿ ಇವುಗಳ ವತಿಯಿಂದ ಶಾಲಾ ಮುಖ್ಯಸ್ಥರುಗಳಿಗೆ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಮಕ್ಕಳ ಸಂರಕ್ಷಣಾ ಅಭಿಯಾನ-2018ನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಅವರು ಮಾತನಾಡುತ್ತಾ, ಶಾಲಾ ವಾಹನವನ್ನು ಗುತ್ತಿಗೆಕೊಟ್ಟರಷ್ಟೇ ಶಾಲಾ ಮುಖ್ಯಸ್ಥರ ಕೆಲಸ ಮುಗಿಯುವುದಿಲ್ಲ. ಆ ಬಗ್ಗೆ ಹೆಚ್ಚಿನಜವಾಬ್ದಾರಿ ಇರುತ್ತದೆ. ಶಾಲಾ ವಾಹನವನ್ನು ಬಳಸುವವರ ಸಮಿತಿ ಮಾಡುವುದು, ಮಕ್ಕಳ, ಪೋಷಕರ ವಿಳಾಸ, ದೂರವಾಣಿ ಸಂಖ್ಯೆಗಳನ್ನಿಟ್ಟುಕೊಳ್ಳುವುದು, ಚಾಲಕರ ಪೂರ್ವಾಪರ ಇಟ್ಟುಕೊಳ್ಳುವುದು, ವಾಹನದಕಿಟಕಿ, ಬಾಗಿಲು ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳುವುದಲ್ಲದೆ ಚಾಲಕನಿಗೆ ತಿಳಿ ನೀಲಿ ಬಣ್ಣದ ಸಮವಸ್ತ್ರ, ಆರ್.ಟಿ.ಓಅನುಮತಿ ಪಡೆದಿರುವುದು ಮತ್ತು ವಾಹನದ ಮಾಲಕರೊಂದಿಗೆಕರಾರು ಮಾಡಿಕೊಂಡಿರುವುದು ಎಲ್ಲಕ್ಕಿಂತ ಮುಖ್ಯವಾಗುತ್ತದೆ. ಇದಕ್ಕೆ ಸಂಬಂಧಪಟ್ಟ ವಾಹನ ಸುರಕ್ಷತಾ ಕಾನೂನು ಶಾಲಾ ಮುಖ್ಯಸ್ಥರು ಅಧ್ಯಯನಮಾಡಬೇಕು ಎಂದು ಸಲಹೆ ನೀಡಿದರು.
ಫೋಕ್ಸೋ ಕಾಯಿದೆಯ ಬಗ್ಗೆ ವಿವರಿಸುತ್ತಾ, ಹದಿನೆಂಟು ವರ್ಷದ ಕೆಳಗಿನ ಶಾಲಾ ಬಾಲಕಿಗೆ ಶಾಲಾ ಸಮಯದಲ್ಲಿ ಲೈಂಗಿಕ ಕಿರುಕುಳವಾದರೆ ಒಂದನೇ ಆರೋಪಿ ಶಾಲಾ ಮುಖ್ಯಸ್ಥರೇ ಆಗಿರುತ್ತಾರೆ ಎಂಬ ಬಗ್ಗೆ ಹೆಚ್ಚಿನವರಿಗೆ ಅರಿವು ಇರುವುದಿಲ್ಲ. ಆದರೆ ಮಾನವೀಯತೆಯ ಆಧಾರದ ಮೇಲೆ ಪೋಲಿಸರು ಆ ರೀತಿ ಪ್ರಕರಣದಾಖಲಿಸದೆ ಅಪರಾಧಿಯನ್ನು ಜೈಲಿಗೆ ಕಳುಹಿಸಿದ್ದೂ ಇದೆ. ಆದರೆ ಮತ್ತೆ ಮರುಕಳಿಸಿದರೆ ಕಾನೂನು ತನ್ನ ಕೆಲಸ ಮಾಡುತ್ತದೆ. ಶಾಲಾ ಬಸ್ ಚಾಲಕರ ವರ್ತನೆ ಬಗ್ಗೆಯೂ ನಿಗಾವಹಿಸಬೇಕು. ನಾಲ್ಕು ವರ್ಷ ಅನುಭವವಿರುವ ಚಾಲಕರನ್ನೇ ನೇಮಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಿಕ್ಷಣ ಸಂಪನ್ಮೂಲ ಅಧ್ಯಕ್ಷ ಕೆ. ಶ್ರೀಧರ ರಾವ್ ವಹಿಸಿದ್ದರು. ಪಡಿ ಸಂಸ್ಥೆ ಜಿಲ್ಲಾ ಸಂಯೋಜಕಿ ಜಯಂತಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಶಿಕ್ಷಣ ಸಂಪನ್ಮೂಲ ಕೇಂದ್ರ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಕೃಷಿ ಇಲಾಖೆಯ ಚಿದಾನಂದ ಹೂಗಾರ್, ಶಿಕ್ಷಣ ಸಂಯೋಜಕ ಸುಭಾಸ್ಜಾಧವ್ ಉಪಸ್ಥಿತರಿದ್ದರು.
ಸಿ.ಕೆ. ಚಂದ್ರಕಲಾ ಸ್ವಾಗತಿಸಿದರು. ಜಾಕೀರ್ ಹುಸೇನ್ ಪ್ರಸ್ತಾವಿಸಿದರು. ನೀಲಕಂಠ ಶೆಟ್ಟಿ ವಂದಿಸಿದರು. ರಾಜಾರಾಮ ಕಾರ್ಯಕ್ರಮ ನಿರ್ವಹಿಸಿದರು.







