ತಾಪಂ ಅನುದಾನ ಹೆಚ್ಚಿಸುವ ಬಗ್ಗೆ ಸದನದಲ್ಲಿ ಪ್ರಸ್ತಾಪ: ರಘುಪತಿ ಭಟ್

ಉಡುಪಿ, ಜೂ.18: ತಾಲೂಕು ಪಂಚಾಯತ್ ಅನುದಾನ ಹೆಚ್ಚಿಸುವ ನಿಟ್ಟಿನಲ್ಲಿ ವಿಧಾನ ಸಭೆಯಲ್ಲಿ ಸದಸ್ಯರುಗಳ ಪರವಾಗಿ ಧ್ವನಿ ಎತ್ತಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ಆಯ್ಕೆ ಕುರಿತು ಇಂದು ತಾಪಂ ಸಭಾಂಗಣದಲ್ಲಿ ನಡೆದ ವಿಶೇಷ ಸೆಯಲ್ಲಿ ಅವರು ಮಾತನಾಡುತಿದ್ದರು.
ಜನರ ಸಮಸ್ಯೆಯನ್ನು ಬಗೆಹರಿಸುವ ಬಹಳ ದೊಡ್ಡ ಜವಾಬ್ದಾರಿ ಜನಪ್ರತಿ ನಿಧಿಗಳಾದ ನಮ್ಮ ಮೇಲೆ ಇದೆ. ಅದನ್ನು ಸಮರ್ಪಕವಾಗಿ ನಿರ್ವಹಿಸಬೇಕು. ತಾಪಂ ಸದಸ್ಯರು ನನ್ನೊಂದಿಗೆ ಕೈಜೋಡಿಸಿದರೆ ಮಾತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ 2016-17ನೆ ಸಾಲಿನಲ್ಲಿ ಸಾಧಿಸಿದ ಸಮಗ್ರ ಪ್ರಗತಿಗಾಗಿ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಪಂಚಾಯತ್ ಸಶಕ್ತೀಕರಣ ಪ್ರಶಸ್ತಿ ಪಡೆದ ಉಡುಪಿ ತಾಪಂ ತಂಡವನ್ನು ಶಾಸಕರು ಅಭಿನಂದಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ನಳಿನ್ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಕಾರ್ಯನಿರ್ವಹಣಾಧಿಕಾರಿ ಮೋಹನ್ರಾಜ್, ಸ್ಥಾಯಿ ಸಮಿತಿ ನಿರ್ಗಮನ ಅಧ್ಯಕ್ಷೆ ನೀತಾ ಗುರುರಾಜ್, ತರಬೇತುದಾರ ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು.