ಮೈಸೂರು: ಶೀಘ್ರ ಸಾಲಮನ್ನಾಗೆ ಆಗ್ರಹಿಸಿ ರೈತರಿಂದ ಧರಣಿ

ಮೈಸೂರು,ಜೂ.18: ರೈತರ ಸಾಲಮನ್ನಾ ಬಗ್ಗೆ ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ರೈತರು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಮೇ 30ರಂದು ರೈತರ ಸಾಲಮನ್ನಾ ವಿಚಾರವಾಗಿ ಸಭೆಯನ್ನು ಕರೆದು ರೈತ ಸಂಘಟನೆಯ ಅಭಿಪ್ರಾಯ ಕೇಳಿದ ನಂತರ 15 ದಿನಗಳ ಕಾಲಾವಕಾಶವನ್ನು ಕೋರಿದ್ದರು. ಆದರೆ ಈ ಗಡುವು ಮುಗಿದಿದ್ದರೂ ಇಲ್ಲಿಯವರೆಗೆ ಸಾಲಮನ್ನಾ ಬಗ್ಗೆ ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ರೈತ ಸಂಘದ ಸಂಚಾಲಕ ಹೊಸಕೋಟೆ ಬಸವರಾಜು ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಮುಖ್ಯಮಂತ್ರಿಗಳು ರೈತರಿಗೆ ಸಾಲ ಮನ್ನಾ ಭರವಸೆ ನೀಡಿ ಸಾಲ ಮನ್ನಾ ಮಾಡದೆ ವಚನ ಭ್ರಷ್ಟರಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದರು.
ರೈತ ಕುಟುಂಬದವರು ಆಭರಣಗಳ ಮೇಲೆ ಪಡೆದಿರುವ ಸಾಲವನ್ನು ಸಹ ಮನ್ನಾ ವ್ಯಾಪ್ತಿಗೆ ತರಬೇಕು. ಕೃಷಿ ಅಭಿವೃದ್ಧಿಗೆ ಪೂರಕವಾಗಿರುವ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಮಧ್ಯಮ ಮತ್ತು ದೀರ್ಘಾವಧಿ ಸಾಲಗಳನ್ನು ಕೂಡ ಮನ್ನಾ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೆಚ್.ಸಿ.ಲೋಕೇಶ್ ರಾಜೇ ಅರಸ್, ಹೊಸೂರ್ ಕುಮಾರ್, ಸರಗೂರು ನಟರಾಜು, ಪಿ.ಮರಂಕಯ್ಯ, ವಿದ್ಯಾಸಾಗರ್, ಬೆಂಕಿಪುರ ಚಿಕ್ಕಣ್ಣ, ಶಿವಣ್ಣ ಶೆಟ್ಟರು, ಕುಮಾರಸ್ವಾಮಿ, ನೇತ್ರಾವತಿ ಅವರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







