ಮಂಗಳೂರು: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಧರಣಿ
ಮಂಗಳೂರು, ಜೂ.18: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ರೈತರ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿಧರಣಿ ನಡೆಸಿದರು.
ರಾಜ್ಯದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಬಗ್ಗೆ ತಕ್ಷಣ ಯೋಜನೆಯನ್ನು ಪ್ರಕಟಿಸಬೇಕು ಯಾವೂದೇ ರೀತಿಯ ಕಟ್ ಆಫ್ ದಿನಾಂಕಗಳನ್ನು ಷರತ್ತಿನಲ್ಲಿ ಹಾಕದೆ ತಾವು ಯೋಜನೆ ಪ್ರಕಟಿಸುವ ದಿನಾಂಕದೊಳಗೆ ಇರುವ ರೈತರ ಸಾಲ ಮನ್ನಾ ಮಾಡಬೇಕು.ಈ ಯೋಜನೆಯ ಅನುಷ್ಠಾನದಲ್ಲಿ ಸ್ಥಿತಿವಂತ ರೈತರು ಹಾಗೂ ಕೃಷಿಕರ ಹೆಸರಿನಲ್ಲಿ ಸಾಲ ಮಾಡಿ ಹೆಚ್ಚುವರಿ ಬಡ್ಡಿಗಾಗಿ ಸಂಸ್ಥೆಗಳಲ್ಲಿ ಹಣ ಹೂಡುವವರಿಗೆ ಹಾಗೂ ಲಾಭದಾಯಕ ವ್ಯವಹಾರಗಳಿಗೆ ಹೂಡಿಕೆ ಮಾಡಿದ ರೈತರನ್ನು ಹೊರಗಿಡಲು ದಾಖಲಾತಿ ಅಥವಾ ಆಧಾರದಲ್ಲಿ ಹೊರಗಿಡಲು ನಾವು ಸರಕಾರಕ್ಕೆ ಸಲಹೆ ನೀಡುವುದಾಗಿ ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ರವಿಕಿರಣ್ ಪುಣಚ ತಿಳಿಸಿದ್ದಾರೆ.
ಪ್ರಸ್ತುತ ಬೆಳೆ ಸಾಲ ಹಾಗೂ ಕೃಷಿನ ಅಭಿವೃದ್ಧಿ ಸಾಲದ ಮೊತ್ತ 1,14,000 ಕೋಟಿ ರೂ ಆಗಿದ್ದು ಸಂಪೂರ್ಣ ಜವಾಬ್ದಾರಿ ರಾಜ್ಯ ಸರಕಾರಕ್ಕೆ ಬರದಂತೆ ಆರ್ಥಿಕವಾಗಿ ವಾಗಿ ಸೋತಿರುವ ರೈತ ಕುಟುಂಬಗಳಿಗೆ ಸಾಲಮನ್ನಾ ಮಾಡುವ ಕ್ರಮ ಕೈಗೊಂಡರೆ ಸರಕಾರಕ್ಕೆ ಶೇ 60ರಷ್ಟು ಮಾತ್ರ ಹೊರೆ ಬೀಳಬಹುದು.ಈ ಬಗ್ಗೆ ತಕ್ಷಣ ತೀರ್ಮಾನ ತೆಗೆದುಕೊಳ್ಳಬೇಕು.ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಡಿಕೆಗೆ ಹಳದಿ ರೋಗದಿಂದ ಹಾನಿಯಾಗಿದೆ ಇದಕ್ಕಾಗಿ ಎಕ್ರೆಗೆ ಕನಿಷ್ಠ 10 ಲಕ್ಷ ಪರಿಹಾರ ಒದಗಿಸಬೇಕು.
ರಬ್ಬರ್ ಬೆಳೆಗೂ ಧಾರಣೆ ಕುಸಿದು ಕೃಷಿಕರು ನಷ್ಟ ಅನುಭವಿಸಿದ್ದಾರೆ.ಕೇರಳ ಸರಕಾರ ರಬ್ಬರ್ ಬೆಳೆಗೆ ಖರೀದಿಗಾಗಿ 500 ಕೋಟಿ ರೂ ಆವರ್ತ ನಿಧಿ ನಿರ್ಮಿಸಿದೆ.ಈ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು.ಕೇರಳದಲ್ಲಿ ಭತ್ತದ ಬೆಳೆಗೆ ಪಾಡಶೇಗರ ಸಮಿತಿಯ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ನೀಡಬೇಕು .ಅಡಿಕೆ ಬೆಳೆಗಾರರಿಗೂ ಮಾರುಕಟ್ಟೆಯಲ್ಲಿ ಸೂಕ್ತ ಸಮಯದಲ್ಲಿ ಸೂಕ್ತ ಧಾರಣೆ ಸಿಗದೆ ಹಲವು ವರುಷಗಳಿಂದ ವಂಚನೆಯಾಗಿದೆ.
ತೆಂಗಿನ ಬೆಳೆಗೂ ಮಂಗಗಳ ಕಾಟದಿಂದ ರೈತರು ನಷ್ಟ ಅನುಭವಿಸುವಂತಾಗಿದೆ.ಅದಕ್ಕಾಗಿ ಮಂಕಿ ಪಾರ್ಕ್ ನಿರ್ಮಾಣಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ರವಿಕಿರಣ್ ಪುಣಚ ತಿಳಿಸಿದ್ದಾರೆ.ಧರಣಿಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರೋನಿ ಮೆಂಡೋನ್ಸಾ,ಉಪಾಧ್ಯಕ್ಷ ತಾರಾನಾಥ ಗೌಡ,ಜಿಲ್ಲಾ ಕಾರ್ಯದರ್ಶಿ ಇಬ್ರಾಹೀಂ ಖಲೀಲ್, ಹಾಗೂ ಇತರ ಮುಖಂಡರಾದ ನಾರಾಯಣ ರಾವ್ ಕೊಲ್ಲಾಜೆ,ಪೇಮ ನಾಥ ಶೆಟ್ಟಿ ಬಾಳ್ತಿಲ,ಸತ್ಯ ಶಂಕರ ಭಟ್,ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಾಜೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.