ಬೆಂಗಳೂರು: ನಾಪತ್ತೆಯಾಗಿದ್ದ ಆರು ವಿದ್ಯಾರ್ಥಿಗಳು ಪತ್ತೆ
ಬೆಂಗಳೂರು, ಜೂ.19: ಸ್ನೇಹಿತರ ಮನೆಗೆಂದು ತೆರಳಿದ್ದ 9ನೆ ತರಗತಿಯ ಆರು ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಕಾಮಾಕ್ಷಿಪಾಳ್ಯದ ಸೆಂಟ್ ಲಾರೆನ್ಸ್ ಶಾಲೆಯ ವಿದ್ಯಾರ್ಥಿಗಳಾದ ರಾಕೇಶ್, ಸುಜನ್ಶೆಟ್ಟಿ, ಚಂದನ್, ಅನೂಪ್, ರೇಣು ಮತ್ತು ವರುಣ್ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ: ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಚಂದನ್ ಎಂಬಾತ ಶಾಲೆ ಮುಗಿಸಿಕೊಂಡು ವಾಪಸ್ ಮನೆಗೆ ಬಂದು ಎಂದಿನಂತೆ ಮನೆ ಸಮೀಪದಲ್ಲೇ ಇರುವ ಮನೆಪಾಠಕ್ಕೆ(ಟ್ಯೂಷನ್) ಹೋಗುವುದಾಗಿ ಹೇಳಿ ತನ್ನ ಸ್ನೇಹಿತರಾದ ರಾಕೇಶ್, ಸುಜನ್ಶೆಟ್ಟಿ, ಅನೂಪ್, ವರುಣ್, ರೇಣು ಎಂಬುವರೊಂದಿಗೆ ಹೋಗಿದ್ದಾನೆ. ಆದರೆ, ಇವರು ಮನೆಪಾಠಕ್ಕೆ ಹೋಗದೆ, ನಾಪತ್ತೆಯಾಗಿದ್ದಾರೆ.
ರಾತ್ರಿಯಾದರೂ ಮನೆಗೆ ಬಾರದ ಚಂದನ್ ಬಗ್ಗೆ ಪೋಷಕರು ಸ್ನೇಹಿತರನ್ನು ವಿಚಾರಿಸಿದಾಗ ಈತನೊಂದಿಗೆ ಐದು ಮಂದಿ ಗೆಳೆಯರು ನಾಪತ್ತೆಯಾಗಿರುವುದು ತಿಳಿದುಬಂದಿದೆ. ನಾಪತ್ತೆಯಾಗಿರುವ ಬಾಲಕರ ಪೈಕಿ ಒಬ್ಬನ ಬಳಿ ಮೊಬೈಲ್ ಇದ್ದು, ಅದು ಸಂಪರ್ಕಕ್ಕೆ ದೊರೆಯುತ್ತಿಲ್ಲ. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿತ್ತು.
ತಂಡ ರಚನೆ: ನಾಪತ್ತೆಯಾಗಿರುವ ಆರು ಮಂದಿ ಬಾಲಕರ ಪತ್ತೆಗಾಗಿ ವಿಜಯನಗರ ಉಪವಿಭಾಗದ ಎಸಿಪಿ ಪರಮೇಶ್ವರ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡಾಗ ವಿದ್ಯಾರ್ಥಿಗಳು ರಾಕೇಶ್ ನ ಮಾಗಡಿಯಲ್ಲಿರುವ ಅತ್ತೆ ಮನೆಯಲ್ಲಿರುವುದು ಬೆಳಕಿಗೆ ಬಂದಿದೆ.







