ಮಡಿಕೇರಿ: ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಮಡಿಕೇರಿ, ಜೂ.19 : ವ್ಯಕ್ತಿಯೊಬ್ಬರು ಮಡಿಕೇರಿ ಸಮೀಪ ಕೂಟುಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ದಿ.ಹಬೀಬ್ ಹಾಗೂ ಮೆಹರೂನ್ ದಂಪತಿಗಳ ಪುತ್ರ ಸಮಿವುಲ್ಲಾ (33) ಎಂಬುವವರೆ ಮೃತ ವ್ಯಕ್ತಿ. ರಸ್ತೆಯ ಬದಿ ಇರುವ ಹೊಳೆಗೆ ತಾನು ಚಲಾಯಿಸುತ್ತಿದ್ದ ಓಮ್ನಿ ಸಹಿತ ಮುಳುಗಲು ಯತ್ನಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಹೊಳೆಯ ಬದಿ ಕೆಸರಿನಲ್ಲಿ ಓಮ್ನಿ ಸಿಲುಕಿಕೊಂಡಿರುವುದು ಗೋಚರಿಸಿದೆ.
ಮನೆಯ ಪಕ್ಕದ ಜಾಗದ ವಿವಾದದಿಂದ ಮನನೊಂದು ಸಮಿವುಲ್ಲಾ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಕುಟುಂಬ ಸದಸ್ಯರು ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ್ ಬಳಸಿ ಮೃತ ದೇಹವನ್ನು ಹೊಳೆಯಿಂದ ಹೊರ ತೆಗೆದಿದ್ದಾರೆ.
ಮೃತ ಸಮಿವುಲ್ಲಾ ವಿದ್ಯಾರ್ಥಿಗಳನ್ನು ತಮ್ಮ ವಾಹನದಲ್ಲಿ ಶಾಲೆಗೆ ಕರೆದೊಯ್ಯುವ ವೃತ್ತಿ ಮಾಡುತ್ತಿದ್ದರು. ಮೃತರು ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.