ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆ: ಈದುಲ್ ಫಿತರ್ ಹಬ್ಬದ ಆಚರಣೆ
ಮಂಗಳೂರು, ಜೂ. 19: ನಗರದ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯಲ್ಲಿ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು.
ಅತೀ ವಂದನೀಯ ಆಲ್ಪ್ರೆಡ್ ಜೆ. ಪಿಂಟೋ ಅವರು ಅಧ್ಯಕ್ಷತೆ ವಹಿಸಿ, ಮಾತನಾಡುತ್ತಾ ಎಲ್ಲಾ ಧರ್ಮ ಆಶಿಸುವುದು ಒಂದೇ, ಸಾರವೂ ಒಂದೇ, ಒಬ್ಬರು ಇನ್ನೊಬ್ಬರಿಗೆ ಸಹಕಾರ ನೀಡುವುದಾಗಿದೆ. ಮನುಷ್ಯತ್ವ ಬಹಳ ಮುಖ್ಯ ಮನುಷ್ಯತ್ವದಿಂದ ಬದುಕುವುದೇ ನಿಜವಾದ ಜೀವನ ಎಂದು ನುಡಿದರು.
ಅತಿಥಿಗಳಾಗಿ ಅಹ್ಮದ್ ನಹೀಂ ಮುಕ್ವೆ ಇವರು ಆಗಮಿಸಿದ್ದರು. ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು ಎಲ್ಲಾ ಸಂಸ್ಥೆಗಳಲ್ಲೂ ಇಂತಹ ಅವಕಾಶವಿರುವುದಿಲ್ಲ. ಇದು ಪರಿಪೂರ್ಣವಾದ ಕಾರ್ಯಕ್ರಮವಾಗಿದೆ. ಇಂದಿನ ಯುಗದಲ್ಲಿ ಮೃಗಗಳಿಗಾದರೂ ಪರಸ್ಪರ ಸ್ವಾತಂತ್ರ್ಯದಿಂದ ಬದುಕುವ ಅವಕಾಶವಿದೆ ಆದರೆ ಮನುಷ್ಯನಿಗೆ ನೆಮ್ಮದಿಯಿಂದ ಬದುಕುವ ಅವಕಾಶ ಇಲ್ಲದಾಗಿದೆ. ಮರುಭೂಮಿಯ ನಡುವಿನ ಓಯಸಿಸ್ ನಂತೆ ಈ ಸಂಸ್ಥೆಯಲ್ಲಿ ಇಂತಹ ಒಂದು ಆಚರಣೆಯು ಅದ್ಭುತವಾಗಿದೆ. ಇಂತಹ ಸಂಸ್ಥೆಯಲ್ಲಿ ಬೆಳಗಿ ಬರುವ ವಿದ್ಯಾರ್ಥಿನೀಯರು ಸಮಾಜದ ಪ್ರಬುದ್ಧ ಪ್ರಜೆಗಳಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನುಡಿದರು.
ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಎಫ್ ಲೋಬೊ ರವರು ಮಾತನಾಡುತ್ತಾ ಎಲ್ಲಾ ಧರ್ಮಗಳ ಮೂಲ ಉದ್ದೇಶ ಮಾನವ ಧರ್ಮ, ಪ್ರೀತಿ ಸಹೋದರತ್ವವಾಗಿದೆ. ಬೇಧ-ಭಾವ ಹೋಗಲಾಡಿಸಿ ಒಳ್ಳೆಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂಬುವುದೇ ಹಬ್ಬಗಳ ಆಚರಣೆಯ ಉದ್ಧೇಶವಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮಾಯಿದೆ ದೇವುಸ್ ಚರ್ಚ್ ನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆ.ಪಿ. ರೋಡ್ರಿಗಸ್, ಶಾಲಾ ನಾಯಕಿ ಕುಮಾರಿ ಧೃತಿ ಹಾಗೂ ಮಕ್ಕಳ ಹಕ್ಕುಗಳ ಸಂಘದ ಅಧ್ಯಕ್ಷೆ ಕುಮಾರಿ ಪ್ರಿನ್ಸಿಟಾ ಉಪಸ್ಥಿತರಿದ್ದರು.
ಕುಮಾರಿ ಚೈತ್ರಾ ಸ್ವಾಗತಿಸಿ, ಅರ್ಪಿತಾ ವಂದಿಸಿದರು. ಫಾಹಿಮಾ ದಿನದ ಮಹತ್ವ ತಿಳಿಸಿ, ಅನುಪಮಾ ಕಾರ್ಯಕ್ರಮ ನಿರೂಪಿಸಿದರು.