'ಗೋ ಸಚಿವಾಲಯ' ಸ್ಥಾಪಿಸುವಂತೆ ಮ.ಪ್ರ. ಸರಕಾರವನ್ನು ಆಗ್ರಹಿಸಿದ ನೂತನ ಸಚಿವ !
ಭೋಪಾಲ್, ಜೂ.20: ಮಧ್ಯ ಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸರಕಾರದಿಂದ ಕ್ಯಾಬಿನೆಟ್ ಸಚಿವ ಸ್ಥಾನಮಾನ ಪಡೆದಿರುವ ಸ್ವಾಮಿ ಅಖಿಲೇಶ್ವರಾನಂದ್ ಅವರು ಗೋ ಸಚಿವಾಲಯವೊಂದನ್ನು ರಚಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ.
ರಾಜಸ್ಥಾನದಲ್ಲಿ ಗೋ ಸೆಕ್ರಟೇರಿಯಟ್ ಇರಬಹುದಾದರೆ ಹಾಗೂ ಮಧ್ಯ ಪ್ರದೇಶದಲ್ಲಿ ಹ್ಯಾಪಿನೆಸ್ ಸಚಿವಾಲಯ ಇರಬಹುದಾದರೆ ಇನ್ನೊಂದು ಗೋ ಸಚಿವಾಲಯ ಕೂಡ ರಚಿಸಬಹುದಾಗಿದೆ ಎಂದಿದ್ದಾರೆ. ಗೋವನ್ನು ಪ್ರಾಣಿಗಳ ವಿಭಾಗದಿಂದ ಹೊರಗಿಡಬೇಕೆಂಬ ಬೇಡಿಕೆಯನ್ನೂ ಅವರಿಟ್ಟಿದ್ದಾರೆ.
ತಾವು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಳಿ ಈ ಬಗ್ಗೆ ಮಾತನಾಡಿದ್ದಾಗಿಯೂ ಅವರು ಹೇಳಿದ್ದಾರೆ. ``ರಾಜ್ಯದಲ್ಲಿ ಎಲ್ಲಾ ಗೋಶಾಲೆಗಳನ್ನು ಮರುಸ್ಥಾಪಿಸಲಾಗುವುದು. ಈ ನಿಟ್ಟಿನಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಎದುರಾಗದು. ಈ ಉದ್ದೇಶ ಈಡೇರಿಸಲು ಆತ್ಮಬಲ ಅಗತ್ಯವಿದೆ" ಅಷ್ಟೇ ಎಂದಿದ್ದಾರೆ.
"ಅವರನ್ನು ರಾಷ್ಟ್ರೀಯ ಕೃಷಿ ಮತ್ತು ಮನ್ರೇಗಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವುದರಿಂದ ನನಗೆ ಹೆಚ್ಚಿನ ಭರವಸೆಯಿದೆ. ಈ ಯೋಜನೆಯಂಗವಾಗಿ ರಾಜ್ಯಕ್ಕೆ ರೂ 15,000 ಕೋಟಿ ದೊರಕುತ್ತದೆ. ಇದರ ಅರ್ಧದಷ್ಟು ಮಾತ್ರ ವ್ಯಯಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಗೋ ರಕ್ಷಣಾ ಮಂಡಳಿಗೆ ರೂ 1000 ಕೋಟಿ ಬಜೆಟ್ ನೀಡಿದರೆ ಉದ್ದೇಶ ಈಡೇರಿಸಬಹುದು ಎಂದು ತಿಳಿಸಿದೆ'' ಎಂದು ಸ್ವಾಮಿ ಅಖಿಲೇಶ್ವರಾನಂದ್ ತಿಳಿಸಿದ್ದಾರೆ.
ಈ ಹಿಂದೆ ಗೋ ರಕ್ಷಣಾ ಮಂಡಳಿಯ ಅಧ್ಯಕ್ಷರಾಗಿದ್ದ ಅಖಿಲೇಶ್ವರಾನಂದ್ ಅವರನ್ನು ಜೂನ್ 13ರಂದು ಕ್ಯಾಬಿನೆಟ್ ಸಚಿವರನ್ನಾಗಿಸಲಾಗಿದೆ.