ತುಳು ಸಂಸ್ಕೃತಿಯ ಪರಿಚಯಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ: ಡಾ. ಸದಾನಂದ ಪೆರ್ಲ

ಮಂಗಳೂರು, ಜೂ. 20: ತುಳುನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಾಂಪ್ರದಾಯಕ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಾಗಬೇಕು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಅಭಿಪ್ರಾಯಪಟ್ಟರು.
ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ತುಳುಭವನದ ಕಟ್ಟಡದ ಸಿರಿಚಾವಡಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಎಲ್ಸಿ.ಡಿ ಪ್ರೊಜೆಕ್ಟರ್ ಅನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ತುಳು ಭಾಷೆಗೆ ಭವ್ಯವಾದ ಇತಿಹಾಸವಿದೆ. ಮೌಲಿಕವಾದ ಸಾಹಿತ್ಯ ಪರಂಪರೆ ಇದೆ. ತುಳುವರಲ್ಲಿ ಹೋರಾಟದ ಕಿಚ್ಚೂ ಇದೆ. ಪ್ರಾಮಾಣಿಕತೆ, ನಿಷ್ಠೆ ತುಳುವರ ಮೂಲ ಗುಣವಾಗಿದೆ. ಆದರೂ ತುಳು ಭಾಷೆಗೆ ಸಂವಿಧಾನದ ಮಾನ್ಯತೆ ದೊರಕಿಲ್ಲ. 8ನೇ ಪರಿಚ್ಛೇದಕ್ಕೆ ತುಳುಭಾಷೆ ಸೇರಬೇಕು ಎನ್ನುವುದು ತುಳುವರ ಒಕ್ಕೊರಲ ಬೇಡಿಕೆಯಾಗಿದೆ. ಈ ಗುರಿಯನ್ನು ಸಾಧಿಸಲು ಎಲ್ಲಾ ರೀತಿಯ ಪ್ರಯತ್ನಗಳು ಆಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಡಾ. ಸದಾನಂದ ಪೆರ್ಲ ಹೇಳಿದರು.
ಅಕಾಡಮಿಯ ಅಧ್ಯಕ್ಷ ಎ.ಸಿ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಕಾಡಮಿಯ ಸದಸ್ಯರಾದ ಶಿವಾನಂದ ಕರ್ಕೇರ, ಬೆನೆಟ್ ಅಮ್ಮಣ್ಣ, ಡಾ.ವಾಸುದೇವ ಬೆಳ್ಳೆ, ಪ್ರಭಾಕರ ನೀರುಮಾರ್ಗ ಪ್ರಮುಖರಾದ ಯೋಗೀಶ್ ಶೆಟ್ಟಿ ಜೆಪ್ಪು, ಡಾ. ಕಿಶೋರ್ ಕುಮಾರ್ ಶೇಣಿ, ನಂದಳಿಕೆ ಬಾಲಚಂದ್ರ ರಾವ್, ಮೋಹನ್ ಕೊಪ್ಪಲ ಕದ್ರಿ, ಡಿ.ಎಂ.ಕುಲಾಲ್, ರಂಗ ಕಲಾವಿದ ತಮ್ಮ ಲಕ್ಷ್ಮಣ ಉಪಸ್ಥಿತರಿದ್ದರು.
ಅಕಾಡಮಿಯ ಸದಸ್ಯ ತಾರಾನಾಥ ಗಟ್ಟಿ ಕಾಪಿಕಾಡ್ ಸ್ವಾಗತಿಸಿದರು. ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ವಂದಿಸಿದರು.