ಬಂಟ್ವಾಳ: ಗುಂಪಿನಿಂದ ಹಲ್ಲೆಗೊಳಗಾದ ಯುವಕನಿಗೆ ಪೊಲೀಸರಿಂದ ದೌರ್ಜನ್ಯ ಆರೋಪ
ಯಾವುದೇ ಹಲ್ಲೆ ಅಥವಾ ದೌರ್ಜನ್ಯ ನಡೆದಿಲ್ಲ: ಎಸ್ಸೈ ಪ್ರಸನ್ನ

‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವನನ್ನು ಠಾಣೆಗೊಯ್ದು ಹಲ್ಲೆ’
ಮಂಗಳೂರು, ಜೂ. 20: ಬಂಟ್ವಾಳದ ಅಮೈ ಎಂಬಲ್ಲಿ ಗುಂಪಿನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವನನ್ನು ಪೊಲೀಸರು ಡಿಸ್ಚಾರ್ಜ್ ಮಾಡಿಸಿ ಠಾಣೆಗೊಯ್ದು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಯುವಕನನ್ನು ಬಂಟ್ವಾಳ ತಾಲೂಕಿನ ಪೆರ್ನೆಯ ಪುರಿಯಾ ನಿವಾಸಿ ಹಾಗೂ ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಅಬ್ದುರ್ರಹ್ಮಾನ್ (28) ಎಂದು ಗುರುತಿಸಲಾಗಿದೆ.
ಜೂ. 18ರಂದು ರಹ್ಮಾನ್ ವಿಟ್ಲದಿಂದ ಬರುತ್ತಿದ್ದಾಗ ಅಮೈ ಎಂಬಲ್ಲಿ ಆಟೋದಲ್ಲಿನ ಪೆಟ್ರೋಲ್ ಖಾಲಿಯಾಗಿತ್ತು. ಪೆಟ್ರೋಲ್ ತರಲೆಂದು ಬಂಕ್ ಕಡೆಗೆ ಹೋಗುತ್ತಿದ್ದಾಗ ದಾರಿ ಮಧ್ಯೆ ಯುವಕರ ಗುಂಪೊಂದು ಚರ್ಚಿಸುತ್ತಿತ್ತು. ಅಲ್ಲಿ ನಿಂತಿದ್ದ ರಹ್ಮಾನ್ನನ್ನು ಆ ಗುಂಪಿನಲ್ಲಿದ್ದ ಕೆಲವರು ವಿಚಾರಿಸಿದ್ದು, ಬಳಿಕ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಮತ್ತೆ ಕೆಲವರು ಬಂದು ಹೊಡೆದಿದ್ದಾರೆ ಎಂದು ರಹ್ಮಾನ್ ಆರೋಪ ಮಾಡಿದ್ದಾರೆ.
ಹಲ್ಲೆಗೊಳಗಾದ ರಹ್ಮಾನ್ನನ್ನು ಸ್ಥಳೀಯರು ಅದೇ ದಿನ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾಹಿತಿ ಕಲೆ ಹಾಕಲು ಬಂದಿದ್ದ ಪುತ್ತೂರು ನಗರ ಠಾಣೆ ಪೊಲೀಸರು ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ಯಾವುದೇ ಸೂಚನೆ ನೀಡದೆ ಆಸ್ಪತ್ರೆಯಿಂದ ಕರೆದೊಯ್ದಿದ್ದಾರೆ ಎನ್ನಲಾಗಿದ್ದು, ಪುತ್ತೂರು ನಗರ ಠಾಣೆಯಲ್ಲಿ ಕುಳ್ಳಿರಿಸಿ ಬಳಿಕ ಜಿಪೊಂದರಲ್ಲಿ ಅಲ್ಲಿಂದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಕರೆದುಕೊಂಡು ಬಂದಿದ್ದಾರೆ.
ಬರುವಾಗ ಜೀಪಿನಲ್ಲೇ ತನಗೆ ಹಲ್ಲೆ ನಡೆಸಿದ್ದಾರೆ. ಕೆನ್ನೆ ಮತ್ತು ಕಿವಿಯ ಭಾಗಗಳಿಗೆ ಹೊಡೆದಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದ ನಂತರ ರಾತ್ರಿ 12 ಗಂಟೆಯ ವರೆಗೂ ನನಗೆ, ತಲೆ, ಕವಿಯ ಭಾಗ, ಕೈ ಕಾಲುಗಳಿಗೆ ಹೊಡೆದಿದ್ದಾರೆ. ಹಲ್ಲೆಯಿಂದ ತನ್ನ ಕೈ ಕಾಲುಗಳಲ್ಲಿ ನೋವು ಕಾಣಿಸಿಕೊಂಡಿದ್ದು, ರಕ್ತ ಹೆಪ್ಪುಗಟ್ಟಿದೆ. ಎರಡೂ ಕಿವಿಗಳು ಸರಿಯಾಗಿ ಕೇಳುತ್ತಿಲ್ಲ ಎಂದು ರಹ್ಮಾನ್ ಪೊಲೀಸ್ ದೌರ್ಜನ್ಯದ ಬಗ್ಗೆ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ರಹ್ಮಾನ್ರ ಹಿರಿಯ ಸಹೋದರ ಅಶ್ರಫ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಿಲಿಸಿರುವ ನನ್ನ ತಮ್ಮನನ್ನು ಪೊಲೀಸರು ಠಾಣೆಗೆ ಕರೆದೊಯ್ದ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಜೂ. 19ರಂದು ಫೋನ್ ಮಾಡಿ ರಹ್ಮಾನ್ ಪೊಲೀಸ್ ಠಾಣೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಅದರಂತೆ ನಾವು ನ್ಯಾಯವಾದಿಯವರನ್ನು ಸಂಪರ್ಕಿಸಿದ್ದು, ಜಾಮೀನು ಮೇಲೆ ರಹ್ಮಾನ್ ಜೂ. 19ರಂದು ಬಿಡೆಗಡೆಗೊಂಡಿದ್ದಾರೆ.
ಅದೇ ದಿನ ಸಂಜೆಯಾಗುತ್ತಿದ್ದಂತೆ ರಹ್ಮಾನ್ಗೆ ಸರಿಯಾಗಿ ನಡೆದಾಡಲು ಆಗದಿರುವುದನ್ನು ಹಾಗೂ ಎರಡೂ ಕಿವಿಗಳು ಸರಿಯಾಗಿ ಕೇಳಿಸದೇ ಇರುವುದರಿಂದ ರಾತ್ರಿ ಸುಮಾರು 9 ಗಂಟೆಗೆ ನಗರಕ್ಕೆ ಬಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ವಿವರಿಸಿದ್ದಾರೆ.
ಅಮೈಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಪೊಲೀಸರು ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿರುವ ರಹ್ಮಾನ್ ಘಟನೆಯಲ್ಲಿ ಕಡೇಶ್ವಾಲ್ಯ ಗ್ರಾ.ಪಂ. ಸದಸ್ಯ ಸನತ್ ಮತ್ತು ಪೆರ್ನೆ ಗ್ರಾಮದ ಕಾರ್ಲ ಎಂಬಲ್ಲಿನ ಮನೋಜ್ ಪ್ರಮುಖ ಆರೋಪಿಯಾಗಿದ್ದಾರೆ. ಮನೋಜ್ ತನ್ನನ್ನು ಹಿಡಿದುಕೊಂಡಿದ್ದರೆ, ಸನತ್ ಹೊಡೆಯುತ್ತಿದ್ದ. ಅಲ್ಲದೆ ಅಲ್ಲಿದ್ದ ಇತರರೂ ಹಲ್ಲೆ ನಡೆಸಿದ್ದಾರೆ ಎಂದು ರಹ್ಮಾನ್ ಘಟನೆಯನ್ನು ವಿವರಿಸಿದ್ದಾರೆ.
ಹಲ್ಲೆ ನಡೆಸಿರುವ ಆರೋಪಿಗಳ ಪೈಕಿ ಸನತ್ ಇತರರೊಂದಿಗೆ ರಹ್ಮಾನ್ ಮನೆಗೆ ಬಂದು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ರಹ್ಮಾನ್ರ ಸಹೋದರಿ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದರೂ ಸುಮಾರು ಸಂಜೆ 7 ಗಂಟೆಯಿಂದ ರಾತ್ರಿ 12ಗಂಟೆಯವರೆಗೆ ಕಾಯಿಸಿದ್ದಾರೆ ಎಂದು ಅಶ್ರಫ್ ಆರೋಪಿಸಿದ್ದಾರೆ.
ಯಾವುದೇ ಹಲ್ಲೆ ಅಥವಾ ದೌರ್ಜನ್ಯ ನಡೆದಿಲ್ಲ: ಎಸ್ಸೈ ಪ್ರಸನ್ನ
ಎರಡು ಗುಂಪುಗಳ ಮಧ್ಯೆ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅದರ ಪ್ರಕಾರ ಪ್ರಕರಣ ದಾಖಲಿಸಿದ್ದೇವೆ. ಈ ಬಗ್ಗೆ ಓರ್ವನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆಯಾಗಿದೆ. ಘಟನೆಗೆ ಸಂಬಂಧಿಸಿ ಬಂಟ್ವಾಳ ಠಾಣೆಗೆ ಕರೆ ತಂದು ವಿಚಾರಣೆ ಮಾಡಿದ್ದೇವೆ. ಆದರೆ, ಯಾವುದೇ ಹಲ್ಲೆ ಅಥವಾ ದೌರ್ಜನ್ಯ ಮಾಡಿಲ್ಲ. ಆತನನ್ನು ಓಪನ್ ಕೋರ್ಟ್ನಲ್ಲಿಯೇ ಹಾಜರು ಪಡಿಸಿದ್ದೇವೆ. ಒಂದು ವೇಳೆ ಹಲ್ಲೆ ಮಾಡಿದ್ದೇ ಆದಲ್ಲಿ ನ್ಯಾಯಾಧೀಶರ ಮುಂದೆ ಹೇಳಬಹುದಿತ್ತು. ಇದೀಗ ಹೊರಗಡೆ ಬಂದ ಮೇಲೆ ಆರೋಪ ಮಾಡುತ್ತಿದ್ದಾರೆ.
- ಎಸ್ಸೈ ಪ್ರಸನ್ನ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ







