ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿಗೆ ಬೀಳ್ಕೊಡುಗೆ

ಬೆಂಗಳೂರು, ಜೂ. 21: ಕಳೆದ ಎಂಟು ವರ್ಷಗಳಿಂದ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಿ.ಎಚ್.ಶಂಕರಮೂರ್ತಿ ಅವರು ಇಂದು ನಿವೃತ್ತಿ ಹೊಂದಿದ್ದು, ಅವರನ್ನು ಬೀಳ್ಕೊಡಲಾಯಿತು.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಂಕರಮೂರ್ತಿ, ಇಂದು ನನಗೆ ಕೊನೇ ದಿನ. ನನ್ನ ಕೆಲಸ ಪೂರ್ತಿಗೊಳಿಸಿ ಹೋಗುತ್ತಿದ್ದೇನೆ ಎನ್ನುವ ಖುಷಿ ಇದೆ. ಕಹಿ-ಸಂತೋಷದ ಅನೇಕ ಘಟನಾವಳಿಗಳು ನಡೆದಿವೆ. ಆದರೆ ಕೆಲವು ವಿಷಯಗಳ ಕುರಿತು ಆಸೆ ಪಟ್ಟಿದ್ದೆ, ಟೀಕೆ ಮಾಡಿದ್ದೆ. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಿದ್ದೇನೆ ಎಂದು ಬಣ್ಣಿಸಿದರು.
ಗಾಂಧಿ ಪುತ್ಥಳಿ ಸ್ಥಾಪಿಸಿದ ಖುಷಿ: ವಿಧಾನಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಿದ ಖುಷಿಯಿದೆ. ಹುದ್ದೆಯಿಂದಷ್ಟೇ ನಿವೃತ್ತಿಯಾಗಿದ್ದೇನೆ. ಹೊರತು ರಾಜಕೀಯದಿಂದ ನಿವೃತ್ತಿಯಾಗಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಪಾಲರ ಹುದ್ದೆ ಕೊಡುತ್ತೇನೆ ಎಂದಿದ್ದರು. ನಾನೂ ಇದಕ್ಕೆ ಸಮ್ಮತಿ ಸೂಚಿಸಿದ್ದೆ. ಆದರೆ, ಹುದ್ದೆ ಸಿಗಲಿಲ್ಲ. ಇದರಿಂದಾಗಿ ಯಾವುದೇ ಬೇಸರವಿಲ್ಲ ಎಂದು ಅವರು ಹೇಳಿದರು.
ನೈಋತ್ಯ ಪದವೀಧರ ಕ್ಷೇತ್ರದಿಂದ 1988 ರಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಶಂಕರಮೂರ್ತಿ, 1994, 2000, 2006, 2012ರಲ್ಲಿ ನಿರಂತರವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. 2006ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2010ರಲ್ಲಿ ವಿಧಾನ ಪರಿಷತ್ ಸಭಾಪತಿಯಾಗಿ ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು
‘ಸಭಾಪತಿ ಡಿ.ಎಚ್.ಶಂಕರಮೂರ್ತಿ ನಿವೃತ್ತಿ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ ಅವರಿಗೆ ಶಂಕರಮೂರ್ತಿ ಅವರು ಇದೇ ವೇಳೆ ಅಧಿಕಾರವನ್ನು ಹಸ್ತಾಂತರ ಮಾಡಿದರು. ಮುಂದಿನ ಅಧಿವೇಶನದ ವರೆಗೂ ಹೊರಟ್ಟಿ ಅವರು ಹಂಗಾಮಿ ಸಭಾಪತಿಯಾಗಿರಲಿದ್ದಾರೆ’







