ಮಂಗಳೂರು ವಿವಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕೊಣಾಜೆ, ಜೂ. 21: ಯೋಗವು ದೇಹದ ಆರೋಗ್ಯವನ್ನು ಕಾಪಾಡುತ್ತದೆ ಜೊತೆಗೆ ಪ್ರಮುಖವಾಗಿ ಉತ್ತಮ ಆಲೋಚನೆಗಳೊಂದಿಗೆ ಆರೋಗ್ಯಕರ ಮನಸ್ಸನ್ನು ನಿರ್ಮಾಣ ಮಾಡುವಲ್ಲಿ ಯೋಗದ ಪಾತ್ರವು ಪ್ರಮುಖವಾದುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಕಿಶೋರ್ ಕುಮಾರ್ ಸಿ.ಕೆ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಯೋಗ ವಿಜ್ಞಾನ ವಿಭಾಗ ಹಾಗೂ ಮಾನವಪ್ರಜ್ಞೆ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿವಿಯಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯೋಗವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಪ್ರಸಿದ್ದಿಯನ್ನು ಪಡೆದಿದೆ. ವಿದೇಶಿಯರು ಕೂಡಾ ಇಂದು ಯೋಗದಿಂದ ಬಹಳಷ್ಟು ಪ್ರಯೋಜನವನ್ನು ಪಡೆದುಕೊಂಡು ಅದನ್ನು ಸದುಪಯೋಗಗೊಳಿಸುತ್ತಿ ದ್ದಾರೆ. ಭಾರತದಲ್ಲಿ ಪ್ರತಿಯೊಬ್ಬರೂ ಈ ಯೋಗದ ಮಹತ್ವವನ್ನು ಅರಿತುಕೊಂಡು ಕಾರ್ಯೋನ್ಮುಖರಾಗಬೇಕಿದೆ. ಇಂದು ಕೆಲವು ಕಡೆಗಳಲ್ಲಿ ವಿಡಿಯೋ ನೋಡಿಕೊಂಡು ಯೋಗಾಭ್ಯಾಸವನ್ನು ಮಾಡುವುದನ್ನು ನೋಡುತ್ತೇವೆ. ಆದರೆ ಯೋಗಾಭ್ಯಾಸವನ್ನು ಗುರುವಿನ ಮಾರ್ಗದರ್ಶನವಿಲ್ಲದೆ ಸಮರ್ಪಕವಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಮಂಗಳೂರು ವಿವಿ ಕುಲಸಚಿವ ಪ್ರೊ. ನಾಗೇಂದ್ರ ಪ್ರಕಾಶ್ ಅವರು ಮಾತನಾಡಿ, ಯೋಗಾಭ್ಯಾಸವು ನಮ್ಮಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡು ವುದರೊಂದಿಗೆ ಹೆಚ್ಚು ಕ್ರೀಯಾಶೀಲರನ್ನಾಗಿ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಘಟಕರಾದ ಯೋಗ ವಿಜ್ಞಾನ ವಿಭಾಗದ ಡಾ.ಕೆ.ಕೃಷ್ಣ ಶರ್ಮ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಲ್ಲಿ ಯೋಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಮಂಗಳೂರು ವಿವಿಯ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.