ಆರೋಪಿ ಸುರೇಂದ್ರ ಭಂಡಾರಿ ಐದು ದಿನಗಳ ಪೊಲೀಸ್ ಕಸ್ಟಡಿಗೆ
ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ, ಕೊಲೆ ಯತ್ನ ಪ್ರಕರಣ
ಬಂಟ್ವಾಳ, ಜೂ. 22: ಇಲ್ಲಿನ ಬಡ್ಡಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆಗೈದು ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿ ಸುರೇಂದ್ರ ಭಂಡಾರಿಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಎಂದು ಬಂಟ್ವಾಳ ನ್ಯಾಯಾಲಯ ಆದೇಶಿಸಿದೆ.
ಬಂಧಿತ ಇನ್ನಿಬ್ಬರು ಆರೋಪಿಗಳಾದ ಸತೀಶ್ ಕುಲಾಲ್ (37 ) ಹಾಗೂ ಪೃಥ್ವಿರಾಜ್ ಶೆಟ್ಟಿ( 35)ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಂಗಳೂರಿನ ಡಿಸಿಐಬಿ ತಂಡ ಹಾಗೂ ಬಂಟ್ವಾಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮಂಗಳೂರಿನ ಪಚ್ಚಿನಡ್ಕ ಎಂಬಲ್ಲಿ ಸುರೇಂದ್ರ ಮತ್ತು ಸತೀಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ. ಘಟನೆಯ ಬಳಿಕ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಅರೋಪದಲ್ಲಿ ಪೃಥ್ವಿರಾಜ್ ಜೆ. ಶೆಟ್ಟಿಯನ್ನು ಕುಂಬ್ಳೆಯಲ್ಲಿ ಪೊಲೀಸರು ದಸ್ತಗಿರಿ ಮಾಡಿದ್ದರು.
ಬಂಧಿತ ಆರೋಪಿಗಳಾದ ಸುರೇಂದ್ರ, ಸತೀಶ್, ಪೃಥ್ವಿರಾಜ್ರನ್ನು ಗುರುವಾರ ರಾತ್ರಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ನಿವೇದನೆಯಂತೆ ಆರೋಪಿ ಸುರೇಂದ್ರನಿಗೆ ನ್ಯಾಯಾಲಯ ಐದು ದಿನಗಳ ಪೊಲೀಸ್ ಕಸ್ಟಡಿಗೊಪ್ಪಿಸಿದೆ.