ಮೂಲವಿಜ್ಞಾನ ಸಂಶೋಧನೆಗೆ ಒತ್ತು: ಬಿಟ್ಸ್ ಪಿಲಾನಿ ನಿರ್ದೇಶಕರ ಸಲಹೆ
’ವಿಶ್ವಕ್ಕೆ ತಂತ್ರಜ್ಞರಿಗಿಂತ ವಿಜ್ಞಾನಿಗಳ ಅಗತ್ಯ ಹೆಚ್ಚು’
ಮಂಗಳೂರು, ಜೂ. 22: ವಿಶ್ವಕ್ಕೆ ಇಂದು ತಂತ್ರಜ್ಞರಿಗಿಂತ ಹೆಚ್ಚಾಗಿ ಸಂಪನ್ಮೂಲದ ಸದ್ಬಳಕೆಗೆ ಪೂರಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬಲ್ಲ ಸೃಜನಶೀಲ ವಿಜ್ಞಾನಿಗಳ ಅಗತ್ಯವಿದೆ ಎಂದು ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್ (ಬಿಟ್ಸ್) ಪಿಲಾನಿ ಕೆ.ಕೆ.ಬಿರ್ಲಾ ಕ್ಯಾಂಪಸ್ನ ನಿದೇರ್ಶಕ ಡಾ.ಜಿ.ರಘುರಾಮ ಅಭಿಪ್ರಾಯಪಟ್ಟರು.
ನಗರದ ಸಂತ ಅಲೋಶಿಯಸ್ ಕಾಲೇಜಿನ ವಿಜ್ಞಾನ ವಿಭಾಗ ಆಯೋಜಿಸಿದ್ದ ದತ್ತಿ ಉಪನ್ಯಾಸದಲ್ಲಿ "ಭವಿಷ್ಯಕ್ಕೆ ಹೇಗೆ ಸಜ್ಜಾಗಬೇಕು" ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, "ಇತ್ತೀಚಿನ ದಿನಗಳಲ್ಲಿ ಮೂಲವಿಜ್ಞಾನ ಸಂಶೋಧನಾ ಕ್ಷೇತ್ರಕ್ಕೆ ಯುವಕರು ಒಲವು ತೋರುತ್ತಿರುವುದು ಆಶಾದಾಯಕ ಬೆಳವಣಿಗೆ" ಎಂದು ವಿಶ್ಲೇಷಿಸಿದರು.
ಕೌಶಲ ಬೆಳೆಸುವುದಷ್ಟೇ ಭಾರತದ ಇಂದಿನ ಅಗತ್ಯವಲ್ಲ; ಕೌಶಲದ ಜತೆಗೆ ಸೃಜನಶೀಲತೆ ಮತ್ತು ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುವುದು ಕೂಡಾ ಮುಖ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.
ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ ಈ ನಾಲ್ಕು ಪ್ರಮುಖ ಕ್ಷೇತ್ರಗಳ ಬಗ್ಗೆ ಗಮನ ಹರಿಸಿದರಷ್ಟೇ ಭವಿಷ್ಯಕ್ಕೆ ಅಗತ್ಯವಾದ ಕೌಶಲ ಬೆಳೆಸಲು ಸಾಧ್ಯ. ವಿದ್ಯಾರ್ಥಿಗಳಿಗೆ ಇಂದು ಅಗಾಧ ಅವಕಾಶಗಳಿದ್ದು, ತಮ್ಮ ಇಷ್ಟದ ಕ್ಷೇತ್ರ ಆಯ್ದುಕೊಂಡು ಅದರಲ್ಲಿ ಉನ್ನತಿ ಸಾಧಿಸಲು ಶ್ರಮಿಸಬೇಕು ಎಂದು ಸೂಚಿಸಿದರು.
ಭೂಮಿಯ ಮೇಲೆ ಬೀಳುವ ಸೂರ್ಯರಶ್ಮಿಯ ಶೇಕಡ 1.5ರಷ್ಟನ್ನು ಸಮರ್ಪಕವಾಗಿ ಬಳಸಿಕೊಂಡರೆ ಇಡೀ ವಿಶ್ವದ ವಿದ್ಯುತ್ ಅಗತ್ಯತೆ ಪೂರೈಸಬಹುದು. ಅಂತೆಯೇ ಭೂಮಂಡಲದಲ್ಲಿ ಶೇಕಡ 75ರಷ್ಟು ನೀರಿದ್ದರೂ ವಿಶ್ವ ಇಂದು ಜಲಕ್ಷಾಮ ಎದುರಿಸುತ್ತಿದೆ. ಉಪ್ಪುನೀರನ್ನು ಸಿಹಿನೀರಾಗಿ ಪರಿವರ್ತಿಸಿ ಜನಬಳಕೆಗೆ ನೀಡುವ ಅಗ್ಗದ ತಂತ್ರಜ್ಞಾನದಿಂದ ಇದನ್ನು ಬಗೆಹರಿಸಲು ಸಾಧ್ಯ. ಇಂಥ ಅನುಶೋಧನೆ ಇಂದಿನ ಅಗತ್ಯ ಎಂದು ಪ್ರತಿಪಾದಿಸಿದರು.
ಮುಂದಿನ ಕೈಗಾರಿಕಾ ಕ್ರಾಂತಿ ಹೊಸಯುಗದ ತಂತ್ರಜ್ಞಾನಗಳಿಂದ ಆಗುತ್ತದೆ. 2034ರ ವೇಳೆಗೆ ಶೇಕಡ 47ರಷ್ಟು ಉದ್ಯೋಗಗಳನ್ನು ಯಂತ್ರಗಳೇ ನಿರ್ವಹಿಸುವಂತಾಗುತ್ತದೆ. ಇಂಟರ್ನೆಟ್ ಆಫ್ ಥಿಂಕ್ಸ್ನಂಥ ಕ್ರಾಂತಿಕಾರಿ ಸಾಧನಗಳು ಮುಂದಿನ ಕೆಲವೇ ವರ್ಷಗಳಲ್ಲಿ ಜನಜೀವನದಲ್ಲಿ ಹಾಸುಹೊಕ್ಕಾಗಲಿವೆ. ಇತ್ತೀಚೆಗೆ ನಡೆಸಿದ ಅಧ್ಯಯನವೊಂದರ ಪ್ರಕಾರ ಶೇಕಡ 94ರಷ್ಟು ಐಟಿ ಪದವೀಧರರು ಉದ್ಯೋಗಕ್ಕೆ ಅರ್ಹರಲ್ಲ. ಮೂಲವಿಜ್ಞಾನಕ್ಕೆ ಒತ್ತು ನೀಡುವುದೊಂದೇ ಇಂಥ ಸಮಸ್ಯೆಗೆ ಪರಿಹಾರ ಎಂದು ವಿಶ್ಲೇಷಿಸಿದರು.
ಹೊಸ ಯುಗದ ಅಗತ್ಯತೆಗಳಿಗೆ ಅನುಗುಣವಾಗಿ ನಮ್ಮ ಕಲಿಕಾ ಪದ್ಧತಿಯೇ ಬದಲಾಗಬೇಕು. ಸಮಸ್ಯೆ ಬಗೆಹರಿಸುವ ದೃಷ್ಟಿಕೋನದ ಬದಲಾಗಿ ಕುತೂಹಲವನ್ನು ಸೃಷ್ಟಿಸುವಂಥ, ನಮ್ಮಲ್ಲಿ ಅರಿವು ಉದ್ದೀಪಿಸುವ ಕಲಿಕಾ ವಿಧಾನ ಅಗತ್ಯ. ಆಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೊಸ ದೃಷ್ಟಿಕೋನ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಜ್ಞಾನದ ಜತೆಜತೆಗೆ ಮಾನವತೆಯ ಅಂಶಗಳು ಕೂಡ ಮಹತ್ವದ್ದಾಗುತ್ತವೆ. ಸಮಾಜ ವಿಜ್ಞಾನ, ಕಲೆ, ಭಾಷೆಗಳ ಕಲಿಕೆ ಕೂಡಾ ಅಷ್ಟೇ ಪ್ರಮುಖ. ಅಂತರ್ಶಿಸ್ತೀಯ ಹಾಗೂ ಜಾಗತಿಕ ಭಾಷೆಗಳ ಕಲಿಕೆಗೂ ಗಮನ ಹರಿಸಬೇಕು. ಇಂದು ಸಮಾಜ ಸ್ಪರ್ಧಾತ್ಮಕ ಪೈಪೋಟಿಗೆ ಯುವಜನರನ್ನು ಸಜ್ಜುಗೊಳಿಸುವ ಪ್ರಯತ್ನದಲ್ಲಿ ಸೃಜನಶೀಲತೆಯನ್ನು ಹೊಸಕಿ ಹಾಕುತ್ತಿದೆ ಎಂದು ವಿಷಾದಿಸಿದರು.
ಇದರ ಜತೆಗೆ ಹಣಕಾಸು, ಆರ್ಥಿಕ, ವ್ಯವಹಾರದ ಸಾಕ್ಷರತೆ ಕೂಡ ಮಹತ್ವದ್ದು. ಸ್ಥಳೀಯ ಪರಿಸದರ ಬಗ್ಗೆ ಸಂಬಂಧ ಸ್ಥಾಪಿಸಿ, ಆಳವಾದ ಸಂಬಂಧವನ್ನು ಮುಂದುವರಿಸುವುದು ಸೃಜನಶೀಲತೆಗೆ ಪೂರಕವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ರೆವರೆಂಡ್ ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ ಮಾತನಾಡಿ, "ಇಚ್ಛೆ, ಕನಸು ಕಾಣುವುದು ಹಾಗೂ ಬದ್ಧತೆ ವ್ಯಕ್ತಿಯನ್ನು ಉನ್ನತಿಗೆ ಒಯ್ಯಬಲ್ಲದು. ತಮ್ಮ ಇಷ್ಟದ ವಿಷಯಗಳಲ್ಲಿ ತೊಡಗಿಸಿಕೊಂಡು, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕನಸುಗಳನ್ನು ಕಂಡರೆ ಮಾತ್ರ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲು ಸಾಧ್ಯ" ಎಂದು ಹೇಳಿದರು.
ಕ್ಸೇವಿಯರ್ ಬ್ಲಾಕ್ ನಿರ್ದೇಶಕ ಪ್ರೊ.ಜಾನ್ ಡಿಸಿಲ್ವ ಸ್ವಾಗತಿಸಿದರು. ರಿಜಿಸ್ಟ್ರಾರ್ ಎ.ಎಂ.ನರಹರಿ, ಸ್ಟಾರ್ ಕಾಲೇಜು ಯೋಜನೆಯ ಸಂಯೋಜಕ ಡಾ.ರೊನಾಲ್ಡ್ ನಜರತ್, ಕಾರ್ಯಕ್ರಮದ ಸಂಯೋಜಕ ಡಾ.ನಾರಾಯಣ ಭಟ್ ಉಪಸ್ಥಿತರಿದ್ದರು. ಕಳೆದ ವರ್ಷದ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.







