ಅವಸಾನದತ್ತ ಮಲೆನಾಡಿನ ಸಾಂಪ್ರದಾಯಿಕ ಭತ್ತದ ಕೃಷಿ: ಕಾಫಿ, ಅಡಿಕೆ ತೋಟಗಳಾಗುತ್ತಿರುವ ಭತ್ತದ ಗದ್ದೆಗಳು
ಗದ್ದೆಗಳ ಅಪರೂಪದ ಜೀವ ಸಂಕುಲ ಕಣ್ಮರೆ

ಚಿಕ್ಕಮಗಳೂರು, ಜೂ.22: ಕಾಫಿನಾಡು ಚಿಕ್ಕಮಗಳೂರು ಎಂದ ತಕ್ಷಣ ನೆನಪಿಗೆ ಬರುವುದು ಇಲ್ಲಿನ ಇಳಿಜಾರು ಬೆಟ್ಟಗುಡ್ಡಗಳಲ್ಲಿ ಕಂಡು ಬರುವ ಕಾಫಿ ತೋಟಗಳು, ಅಡಿಕೆ ತೋಟಗಳು ಹಾಗೂ ಹಚ್ಛ ಹಸಿರಿನ ಮುಗಿಲೆತ್ತರ ಬೆಟ್ಟಗುಡ್ಡಗಳು. ಚಿಕ್ಕಮಗಳೂರು ಜಿಲ್ಲೆ ಕಾಫಿ, ಅಡಿಕೆ, ಕಾಳು ಮೆಣಸು, ಏಲಕ್ಕಿಯಂತಹ ವಾಣಿಜ್ಯ ಬೆಳೆಗಳಿಗೆ ಹೆಸರುವಾಸಿಯಾಗಿದೆ. ಜಿಲ್ಲೆ ಈ ಬೆಳೆಗಳಿಗಷ್ಟೇ ಅಲ್ಲದೇ ಈ ಹಿಂದೆ ಸಾಂಪ್ರದಾಯಿಕ ಭತ್ತದ ಕೃಷಿಗೂ ಖ್ಯಾತಿ ಪಡೆದಿತ್ತೆಂಬುದು ಇತ್ತೀಚಿನ ಪೀಳಿಗೆಗೆ ಮರೆತೇ ಹೋಗಿದೆ ಎಂದರೆ ತಪ್ಪಾಗಲಾರದು.
ಕಾಫಿ, ಅಡಿಕೆ, ಕಾಳು ಮೆಣಸಿಗೆ ಯಾವಾಗ ದಿಢೀರ್ ಬೆಲೆ ಏರಿಕೆಯಾಯಿತೋ ಅಂದಿನಿಂದ ಜಿಲ್ಲೆಯಲ್ಲಿನ ಸಾಂಪ್ರದಾಯಿಕ ಭತ್ತದ ಗದ್ದೆಗಳನ್ನು ಕಾಫಿ, ಅಡಿಕೆ, ಶುಂಠಿಯಂತಹ ವಾಣಿಜ್ಯ ಬೆಳೆಗಳು ಆಕ್ರಮಿಸಿದ ಪರಿಣಾಮ ಇಲ್ಲಿನ ಭತ್ತದ ಕೃಷಿ ಅವಸಾನದ ಅಂಚಿಗೆ ತಲುಪಿದ್ದು, ಮಲೆನಾಡಿನ ಸಾಂಪ್ರದಾಯಿಕ ಭತ್ತದ ಗದ್ದೆಗಳು ಜನಮಾನಸದಿಂದ ಮರೆಯಾಗುತ್ತಿದೆ.
ಹಿಂದೆ ಚಿಕ್ಕಮಗಳೂರು ಜಿಲ್ಲೆ ಕಾಫಿ, ಅಡಿಕೆ ಬೆಳೆಗಳಂತೆ ವಿವಿಧ ಸಾಂಪ್ರದಾಯಿಕ ಭತ್ತದ ತಳಿಗಳ ಕೃಷಿಗೆ ಹೆಸರಾಗಿತ್ತು. ಕಾಫಿ ಜಿಲ್ಲೆಗೆ ಕಾಲಿಡುವ ಮುನ್ನ ಮಲೆನಾಡಿಗರ ಮೂಲ ಸಾಂಪ್ರದಾಯಿಕ ಉದ್ಯೋಗವೇ ಭತ್ತದ ಕೃಷಿಯಾಗಿತ್ತು. ಜಿಲ್ಲೆಯ ಮಲೆನಾಡು ಭಾಗಗಳಲ್ಲಿನ ಬಯಲು ಪ್ರದೇಶ ಹಾಗೂ ಬೆಟ್ಟಗುಡ್ಡಗಳ ಇಳಿಜಾರಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಬರೀ ಭತ್ತದ ಹೊಲ ಗದ್ದೆಗಳೇ ಕಂಡು ಬರುತ್ತಿದ್ದವು. ಇಳಿಜಾರಿನ ಗುಡ್ಡಗಳಲ್ಲಿ ಯಥೇಚ್ಛವಾಗಿ ನೀರು ಲಭ್ಯವಾಗುತ್ತಿದ್ದರಿಂದ ಒಂದರ ಮೇಲೊಂದು ಜೋಡಿಸಿಟ್ಟಂತೆ ಭತ್ತದ ಗದ್ದೆಗಳನ್ನು ನಿರ್ಮಿಸುತ್ತಿದ್ದ ಇಲ್ಲಿನ ಕೃಷಿಕರು ಈ ಗದ್ದೆಗಳಲ್ಲಿ ವರ್ಷಕ್ಕೆರಡು ಬಾರಿ ವಿವಿಧ ಸಾಂಪ್ರದಾಯಿಕ ಭತ್ತದ ಬೆಳೆಗಳನ್ನು ಬೆಳೆಯುತ್ತಿದ್ದರು.
ವಿಪರ್ಯಾಸವೆಂದರೆ ಕಾಫಿ, ಅಡಿಕೆ ಬೆಳೆಗೆ ಬೆಲೆ ಬಂದಿದ್ದೇ ತಡ ಮಲೆನಾಡಿನ ಭತ್ತದ ಕೃಷಿ ಅವಸಾನಸ ಅಂಚಿಗೆ ಸರಿಯುತ್ತಿದೆ. ಬೆಟ್ಟಗುಡ್ಡಗಳ ಆಕರ್ಷಕ ಸಾಂಪ್ರದಾಯಿಕ ತುಂಡು ಭತ್ತದ ಗದ್ದೆಗಳು ಹಂತಹಂತವಾಗಿ ಕಾಫಿತೋಟಗಳಾಗಿ ಮಾರ್ಪಟ್ಟಿವೆ. ಬಯಲು ಪ್ರದೇಶಗಳಲ್ಲಿದ್ದ ಭತ್ತದ ಗದ್ದೆಗಳ ಜಾಗವನ್ನು ಮುಗಿಲೆತ್ತರದ ಅಡಿಕೆ ಮರಗಳು ಅತಿಕ್ರಮಣ ಮಾಡಿವೆ. ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದ್ದ ಭತ್ತ ಇದೀಗ ಕೆಲವೇ ಹೆಕ್ಟೇರ್ಗಳಲ್ಲಿ ಬೆಳೆಯಲಾಗುತ್ತಿದೆ.
ಇನ್ನು ಶುಂಠಿ ಬೆಳೆಗೆ ಭಾರೀ ಬಂದ ನಂತರವಂತೂ ಮಲೆನಾಡಿನ ಭತ್ತದ ಗದ್ದೆಗಳು ಸಂಪೂರ್ಣವಾಗಿ ನಶಿಸಿವೆ ಎಂದರೆ ತಪ್ಪಾಗಲಾರದು. ಶುಂಠಿಗೆ ಬಾರೀ ಬೇಡಿಕೆ ಬಂದ ಕಾರಣ ಕೇರಳ ಮೂಲದ ವ್ಯಾಪಾರಿ, ದಲ್ಲಾಳಿಗಳು ಮಲೆನಾಡಿನ ಭತ್ತದ ಗದ್ದೆಗಳನ್ನು ಭಾರೀ ಬೆಲೆಗೆ ಗೇಣಿಗೆ ಪಡಯಲಾರಂಭಿಸಿದ್ದರು. ಹೀಗೆ ಗೇಣಿ ನೀಡುವ ಸಂಸ್ಕೃತಿ ಸುಮಾರು 10 ವರ್ಷಗಳ ಕಾಲ ಮಲೆನಾಡಿನಾದ್ಯಂತ ಮುಂದುವರಿದಿತ್ತು ಎನ್ನಲಾಗುತ್ತಿದೆ. ದುಡ್ಡಿನ ಆಸೆಗೆ ಬಿದ್ದ ಸಣ್ಣ ರೈತರು ತಮ್ಮ ಗದ್ದೆಗಳನ್ನು ಶುಂಠಿ ಬೆಳೆಯಲು ಗೇಣಿಗೆ ಬಿಟ್ಟಿದ್ದರ ಪರಿಣಾಮ ಶುಂಠಿ ಬೆಳೆಗೆ ಪೂರೈಸಿದ್ದ ರಾಸಾಯನಿಕ ಗೊಬ್ಬರ ಹಾಗೂ ಅಪಾಯಕಾರಿ ಕ್ರಮಿನಾಶಕದಿಂದಾಗಿ ಭತ್ತದ ಗದ್ದೆಗಳ ಫಲವತ್ತತೆಯ ಗುಣ ಕಡಿಮೆಯಾಗಿ ಶುಂಠಿ ಬೆಳೆದ ಗದ್ದೆಗಳಲ್ಲಿ ಭತ್ತ ಬೆಳೆಯಲು ಸಾಧ್ಯವಿಲ್ಲ ಎಂಬ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಶುಂಠಿ ಬೆಳೆಗೆ ಇಂದಿಗೂ ಉತ್ತಮ ಧಾರಣೆ ಇರುವ ಪರಿಣಾಮ ಮಲೆನಾಡಿನ ಭತ್ತ ಕೃಷಿಕರು ತಮ್ಮ ಗದ್ದೆಗಳಲ್ಲಿ ಇಂದಿಗೂ ಶುಂಠಿ ಬೆಳೆಯುತ್ತಿದ್ದು, ಭತ್ತದ ಕೃಷಿಯಿಂದ ವಿಮುಖರಾಗಿದ್ದಾರೆ.
ಹೀಗೆ ವಾಣಿಜ್ಯ ಬೆಳೆಗಳಿಗೆ ಬಂದ ಬಾರೀ ಬೆಲೆಯಿಂದಾಗಿ ಮಲೆನಾಡಿನ ಸಾಂಪ್ರದಾಯಿಕ ಭತ್ತದ ಕೃಷಿ ಅವಸಾನದ ಅಂಚಿಗೆ ಸಿಲುಕಿದ್ದು, ಭತ್ತ ಬೆಳೆಯಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಂತಹ ಕೆಲ ಸಂಘಗಳು ಮಲೆನಾಡಿನ ರೈತರಿಗೆ ಸಹಾಯಧನ, ಉತ್ತಮ ಬೆಳೆಗೆ ಪ್ರಶಸ್ತಿಯಂತಹ ಉತ್ತೇಜನಕಾರಿ ಕ್ರಮಗಳನ್ನು ಕೈಗೊಂಡಿದ್ದರೂ ಮಲೆನಾಡಿನ ಕೃಷಿಕರು ಭತ್ತದ ಕೃಷಿಯಿಂದ ದೂರ ಉಳಿದಿದ್ದು, ವರ್ಷದಿಂದ ವರ್ಷಕ್ಕೆ ಭತ್ತದ ಉತ್ಪಾದನೆಯ ಪ್ರಮಾಣ ಕ್ಷೀಣಿಸುತ್ತಿದೆ. ಜೊತೆಗೆ ಭತ್ತ ಬೆಳೆಯುತ್ತಿದ್ದ ಪ್ರದೇಶವೂ ಕಡಿಮೆಯಾಗುತ್ತಾ ಅವೆಲ್ಲವೂ ಕಾಫಿ, ಅಡಿಕೆ, ಶುಂಠಿಯಂತಹ ವಾಣಿಜ್ಯ ಬೆಳೆಗಳ ಪಾಲಾಗುತ್ತಿವೆ ಎಂಬುದು ಮಲೆನಾಡಿನ ಕೆಲ ಭತ್ತ ಬೆಳೆಯುವ ರೈತರ ಅಳಲಾಗಿದೆ.
ಭತ್ತದ ಗದ್ದೆಗಳಲ್ಲಿದ್ದ ಜೀವವೈವಿದ್ಯತೆ ನಾಶ:
ಹಿಂದೆ ಮಲೆನಾಡಿನ ಭತ್ತದ ಗದ್ದೆಗಳು ಜನರಿಗೆ ಮಾತ್ರ ಆಸರೆಯಾಗಿರದೇ ಅದು ಜೀವ ವೈವಿದ್ಯತೆಯ ತಾಣವಾಗಿತ್ತು. ಕಪ್ಪೆ, ನೀರು ಹಾವು, ಹುಲ್ಲೇಡಿ, ಕಲ್ಲೇಡಿ, ವಿವಿಧ ಜಾತಿಯ ಮೀನುಗಳು, ಎರೆಹುಳ ಸೇರಿದಂತೆ ಮತ್ತಿತರ ಅಪರೂಪದ ಜೀವಿಗಳ ಪಾಲಿಗೆ ಭತ್ತದ ಗದ್ದೆಗಳು ಆಸರೆಯಾಗಿದ್ದವು. ಆದರೆ ಶುಂಠಿ ಬೆಳೆ ಮಲೆನಾಡಿಗೆ ಕಾಲಿಟ್ಟ ನಂತರ ಯಥೇಚ್ಛವಾಗಿ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಈ ಅಪರೂಪದ ಜೀವ ಸಂಕುಲ ಹೇಳ ಹೆಸರಿಲ್ಲದಂತೆ ನಾಶವಾಗಿವೆ. ರೈತನ ಮಿತ್ರನಾಗಿ ಭಮಿಯ ಫಲವತ್ತತೆಯನ್ನು ಹೆಚ್ಚಿಸುತ್ತಿದ್ದ ಈ ಜೀವ ಸಂಕಲಗಳು ಮಲೆನಾಡಿನಲ್ಲಿ ವಿರಳವಾಗುತ್ತಿದೆ.
- ಆನಂದ್, ಭತ್ತ ಬೆಳೆಯುತ್ತಿರುವ ರೈತ, ಕಳಸ
ಭತ್ತದ ಕೃಷಿ ಮಲೆನಾಡಿನ ಸಾಂಪ್ರದಾಯಿಕ ಕಲೆಯಾಗಿತ್ತು:
ಮಲೆನಾಡಿನ ರೈತರ ಈ ಭತ್ತ ಕೃಷಿ ಕೇವಲ ಋತುಮಾನದ ಉದ್ಯೋಗವಾಗಿರದೇ ಒಂದು ಸಾಂಪ್ರದಾಯಿಕ ಕಲೆಯಂತಿತ್ತು. ಭತ್ತದ ಕೃಷಿಯೊಂದಿಗೆ ಮಲೆನಾಡಿನ ಜಾನಪದ ಕಲೆ, ಸಂಸ್ಕೃತಿ ಒಂದನ್ನೊಂದು ಬೆಸೆದು ಕೊಂಡಿತ್ತು. ಮೇಲ್ವರ್ಗದ ಜಮೀನು ಮಾಲಕರು ಮತ್ತು ಕೃಷಿ ಕೂಲಿಯಾಳುಗಳಾಗಿ ದುಡಿಯುತ್ತಿದ್ದ ಕೆಳವರ್ಗಗಳ ಜನರ ನಡುವೆ ಬಾಂಧವ್ಯದ ಕೊಂಡಿಯಾಗಿತ್ತು. ಹಿಂದೆ ಭತ್ತದ ಕೃಷಿ ಮಲೆನಾಡಿಗರ ಪಾಲಿಗೆ ಅನಿವಾರ್ಯ ಉದ್ಯೋಗವಾಗಿದ್ದರಿಂದ ಜಮೀನು ಮಾಲಕರಿಗೆ ಭತ್ತದ ಕೃಷಿಗೆ ಕೆಳಸ್ಥರದ ಶ್ರಮಿಕ ವರ್ಗ ಅನಿವಾರ್ಯವಾಗಿದ್ದರಿಂದ ಈ ಎರಡು ಕೃಷಿಯ ನೆಪದಲ್ಲಿ ಪರಸ್ಪರ ಭೇಟಿಯಾಗುತ್ತಿದ್ದರಿಂದ ಜಾತಿಯ ಕಾರಣಕ್ಕೆ ಅಂತರ ಕಾಯ್ದುಕೊಂಡಿದ್ದ ಎರಡು ವರ್ಗಗಳು ಪರಸ್ಪರ ಹತ್ತಿರವಾಗಿದ್ದವು. ಗದ್ದೆಗಳಲ್ಲಿ ನಾಟಿ ವೇಳೆ ಮಲೆನಾಡಿನಾಡಿಗರಲ್ಲಿ ಹುದುಗಿದ್ದ ಜಾನಪದ ಹಾಡುಗಳ ಕಲೆ ಹೊರಹೊಮ್ಮುತ್ತಿತ್ತು. ಅಕ್ಕಿಯೇ ಮಲೆನಾಡಿಗರ ಆಹಾರ ಪದ್ಧತಿಯ ಮೂಲವಾಗಿದ್ದರಿಂದ ಭತ್ತದ ಕೃಷಿ ವ್ಯಾಪಾರದ ಹಿನ್ನೆಲೆಯ ಉದ್ಯಮವಾಗಿರಲಿಲ್ಲ. ಒಟ್ಟಿನಲ್ಲಿ ಮಲೆನಾಡಿನ ಭತ್ತ ಕೃಷಿ ಹಿಂದೆ ಒಂದು ಸಾಂಪ್ರದಾಯಿಕ ಸಡಗರಕ್ಕೆ ಕಾರಣವಾಗಿ ಸಾಮಾಜಿಕ ಬಾಂಧವ್ಯಕ್ಕೆ ಕೊಂಡಿಯಾಗಿತ್ತು.
- ಬಾನೇಶ್, ಪ್ರಗತಿಪರ ಕೃಷಿಕ
ಭತ್ತದ ಕೃಷಿಗೆ ಖರ್ಚು ಹೆಚ್ಚು:
ಭತ್ತ ಬೆಳೆಯುವವರು ಸಣ್ಣ ರೈತರು. ಭಾರೀ ಜಮೀನು ಹೊಂದಿದವರು ಭತ್ತ ಬೆಳೆಯುವುದಿಲ್ಲ. ಹೆಚ್ಚಿದ ರಸಗೊಬ್ಬರಗಳ ಬೆಲೆ, ಕೃಷಿ ಕಾರ್ಮಿಕರ ಕೊರತೆ, ದುಪ್ಪಟ್ಟಾಗಿರುವ ಕೃಷಿ ಯಂತ್ರೋಪಕರಣಗಳ ಬಾಡಿಗೆ, ವಿರಳವಾಗಿರುವ ಹಟ್ಟಿ ಗೊಬ್ಬರ ಇತ್ಯಾದಿ ಸಮಸ್ಯೆಗಳಿಂದಾಗಿ ಭತ್ತದ ಕೃಷಿಕರಿಗೆ ಖರ್ಚು ಹೆಚ್ಚುತ್ತಿದೆ. ಅಲ್ಲದೇ ಭತ್ತಕ್ಕಿರುವ ಬೆಲೆ ಭಾರೀ ಕಡಿಮೆ. ಇದರಿಂದ ಖರ್ಚೂ ಗೀಟುತ್ತಿಲ್ಲ. ಬೆಂಬಲ ಬೆಲೆಯೂ ಸಿಗುತ್ತಿಲ್ಲ, ಸಿಕ್ಕರೂ ಕಡಿಮೆಯೇ, ಕಾಫಿ, ಅಡಿಕೆಗೆ ಬೆಲೆ ಕಡಿಮೆಯಾದರೇ ಇಡೀ ಮಲೆನಾಡು ಬಂದ್ ಆಗುತ್ತದೆ. ಭತ್ತದ ಬೆಲೆ ಅನೇಕ ವರ್ಷಗಳಿಂದ ಕುಸಿಯುತ್ತಲೇ ಇದೆ. ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ವಾಸ್ತವ ಹೀಗಿರುವಾಗ ಯಾರು ತಾನೆ ಸಾಲ ಮಾಡಿ ಭತ್ತ ಬೆಳೆಯಲು ಮುಂದಾಗುತ್ತಾರೆ. ಅದೇ ಗದ್ದೆಗಳಲ್ಲಿ ಒಮ್ಮೆ ಕಾಫಿ, ಅಡಿಕೆ ಗಿಡ ನೆಟ್ಟರೇ ಮತ್ತೆ ಕೆಲಸವಿಲ್ಲ. 4- ವರ್ಷ ಕಾದಲ್ಲಿ ಕೂತಲ್ಲಿಗೆ ಆದಾಯ ಬರುತ್ತದೆ.
- ಚಂದ್ರೇಗೌಡ, ಭತ್ತದ ಗದ್ದೆಯನ್ನು ಕಾಫಿ ತೋಟ ಮಾಡಿರುವ ರೈತ, ಆಲ್ದೂರು.







