ಎಲ್ಲರೂ ಕೂಡಿ ಬಾಳಿದಾಗ ದೇವರ ಅನುಗ್ರಹ ಪ್ರಾಪ್ತಿ: ಲಿಂಗರಾಜ ಅರಸು
ಗ್ರೀನ್ ವ್ಯೂ ನಲ್ಲಿ ಈದ್ ಸೌಹಾರ್ದ ಸಮ್ಮಿಲನ

ಸುಳ್ಯ, ಜೂ. 23: ಎಲ್ಲಾ ಧರ್ಮದವರೂ ಕೂಡಿ ಬಾಳಿದಾಗ ಸಹೋದರತೆಯ ಪರಿಕಲ್ಪನೆಗೆ ಅರ್ಥ ಬಂದು ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಲಿಂಗರಾಜ ಅರಸು ಹೇಳಿದರು.
ಸುಳ್ಯದ ಗ್ರೀನ್ವ್ಯೆ ಶಿಕ್ಷಣ ಸಂಸ್ಥೆಯಲ್ಲಿ ಪತ್ರಕರ್ತರಿಗೆ, ಶಿಕ್ಷಕ ವೃಂದದವರಿಗೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ನಗರ ಪಂಚಾಯತ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಆಯೋಜಿಸಲಾದ ಈದ್ ಸೌಹಾರ್ದ ಸಮ್ಮಿಲನ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇಂದಿನ ಸನ್ನಿವೇಶದಲ್ಲಿ ಎಲ್ಲರೂ ಸಹೋದರತೆಯಿಂದ ಬೆರೆತು ಹಬ್ಬಗಳನ್ನು ಆಚರಿಸುವುದು ಉತ್ತಮ ಕಾರ್ಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಐ. ಇಸ್ಮಾಯಿಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ನಿವೃತ್ತ ಉಪಕಾರ್ಯದರ್ಶಿ ಇಬ್ರಾಹಿಂ ಗೂನಡ್ಕ ಮಾತನಾಡಿ ಇಂತಹ ಕಾರ್ಯಕ್ರಮಗಳು ಎಲ್ಲಾ ಕಡೆಗಳಲ್ಲೂ ನಡೆಯಬೇಕು. ಎಲ್ಲಾ ಧರ್ಮದ ಹಬ್ಬಗಳ ಆಚರಣೆಯ ತಿರುಳು ಸಮಾಜಕ್ಕೆ ತಿಳಿಯಪಡಿಸಬೇಕು, ಆಗ ಸೌಹಾರ್ದತೆ ನೆಲೆಗೊಳ್ಳುತ್ತದೆ ಎಂದು ಶುಭಾಶಂಸನೆಗೈದರು. ಅತಿಥಿಗಳಾಗಿ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಎಸ್. ಸಂಶುದ್ದೀನ್, ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮೀಣ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಎ.ಪಿ.ಎಂ.ಸಿ. ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ, ಸುಳ್ಯ ತಾಲೂಕು ಮದರಸ ಅಧ್ಯಾಪಕರುಗಳ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರು, ಕೆಪೆಕ್ ನಿರ್ದೇಶಕ ಪಿ.ಎ. ಮಹಮ್ಮದ್, ಸುಳ್ಯ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪ್ಪಳ್ಳ, ಶಾಲಾ ಮುಖ್ಯೋಪಾಧ್ಯಾಯ ಅಮರನಾಥ ಬಿ.ಪಿ., ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಂಜೆ ಮೊದಲಾದವರು ಭಾಗವಹಿಸಿದ್ದರು.
ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಂ. ಮುಸ್ತಫ ಸ್ವಾಗತಿಸಿ, ಪ್ರಧಾನಕಾರ್ಯದರ್ಶಿ ಕೆ.ಬಿ. ಇಬ್ರಾಹಿಂ ವಂದಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಈದ್ ಹಬ್ಬದ ಪ್ರಯುಕ್ತ ಖರ್ಜೂರ ನೀಡಿ ಅತಿಥಿಗಳನ್ನು ಸ್ವಾಗತಿಸಿ, ಕೊನೆಯಲ್ಲಿ ಸೌಹಾರ್ಧ ಭೋಜನಕೂಟದೊಂದಿಗೆ ಮುಕ್ತಾಯಗೊಂಡಿತು.