ಉಡುಪಿ: ಜು.1ಕ್ಕೆ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ
ಉಡುಪಿ, ಜೂ.23: ಉಡುಪಿಯ ರಥಬೀದಿ ಗೆಳೆಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕನ್ನಡ ನವ್ಯ ಸಾಹಿತ್ಯ ಚಳವಳಿಯ ಆದ್ಯ ಪ್ರವರ್ತಕರಾದ ಡಾ.ಮೊಗೇರಿ ಗೋಪಾಲಕೃಷ್ಣ ಅಡಿಗ (18-2-1918 ರಿಂದ 4-11-1994)ರ ಜನ್ಮ ಶತಮಾನೋತ್ಸವನ್ನು ಜು.1ರಂದು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡಿದೆ.
ಕಾರ್ಯಕ್ರಮವನ್ನು ಕನ್ನಡ ಹಿರಿಯ ಚಿಂತಕ ಹಾಗೂ ವಿಮರ್ಶಕ ಜಿ.ರಾಜಶೇಖರ್ ಅವರು ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಅಡಿಗ ಟ್ರಸ್ಟ್ನ ಜಯರಾಮ ಅಡಿಗ ಅವರು ಭಾಗವಹಿಸಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸಾಹಿತಿ ಡಾ.ಅರವಿಂದ ಮಾಲಗತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳಗ್ಗೆ 11:30ಕ್ಕೆ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಕನ್ನಡ ಕಾವ್ಯಕ್ತೆ ಅಡಿಗರ ಕೊಡುಗೆ ವಿಷಯದ ಕುರಿತು ಮಾತನಾಡಲಿದ್ದಾರೆ. ಬಳಿಕ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ನಟರಾಜ ದೀಕ್ಷಿತರ ಅದ್ಯಕ್ಷತೆಯಲ್ಲಿ ‘ಅಡಿಗರ ಒಡನಾಟದ ನೆನಪುಗಳು’ ಗೋಷ್ಠಿ ನಡೆಯಲಿದ್ದು, ಇದರಲ್ಲಿ ಅಡಿಗರ ಸಹೋದ್ಯೋಗಿಗಳು, ಶಿಷ್ಯರು, ಅಭಿಮಾನಿಗಳಾದ ಗುರುರಾಜ ಮಾರ್ಪಳ್ಳಿ, ಎಸ್.ವಿ.ಭಟ್, ಡಾ.ರಘುಪತಿ ಕೆ., ಡಾ.ಶ್ರೀಕಾಂತ ಸಿದ್ಧಾಪುರ, ಪೃಥ್ವಿರಾಜ ಕವತ್ತಾರ್, ಎಚ್.ಡುಂಡಿರಾಜ್ ಹಾಗೂ ಡಾ.ಎನ್.ಎ.ಮಧ್ಯಸ್ಥ ಭಾಗವಹಿಸಲಿದ್ದಾರೆ.
ಅಪರಾಹ್ನ 2:15ಕ್ಕೆ ಅಡಿಗರ ಕವನಗಳ ವಾಚನ ಮತ್ತು ಗಾಯನ ಉಪ್ಪುಂದ ಚಂದ್ರಶೇಖರ ಹೊಳ್ಳರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದರಲ್ಲಿ ನಟರಾಜ ಎಚ್.ಎನ್., ಡಾ.ಮಹಾಬಲೇಶ್ವರ ರಾವ್, ಡಾ.ಮಾಧವಿ ಭಂಡಾರಿ, ಡಾ.ಪಿ. ಬಿ.ಪ್ರಸನ್ನ, ಮೇಟಿ ಮುದಿಯಪ್ಪ, ಎಸ್.ಅಭಿಲಾಷಾ, ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ ಸಂಜೆ 4:30ಕ್ಕೆ ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಖ್ಯಾತ ಗಾಯಕ ಚಂದ್ರಶೇಖರ ಕೆದ್ಲಾಯ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ರಥಬೀದಿ ಗೆಳೆಯರು ಪ್ರಕಟಣೆ ತಿಳಿಸಿದೆ.







