ಬಸ್ಸಿನಿಂದ ಎಸೆಯಲ್ಪಟ್ಟು ಮೃತ್ಯು ಪ್ರಕರಣ: ಚಾಲಕರಿಬ್ಬರಿಗೆ ಸಜೆ
ಪುತ್ತೂರು, ಜೂ. 23: 2 ಪ್ರತ್ಯೇಕ ಪ್ರಕರಣದಲ್ಲಿ ಖಾಸಗಿ ಬಸ್ಸೊಂದರಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟ ಪ್ರಕರಣ ಹಾಗೂ ಪ್ರಯಾಣಿಕರೊಬ್ಬರ ಮೇಲೆ ಬಸ್ಸು ಹರಿದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಆರೋಪಿಗಳಿಗೆ ದಂಡ ಹಾಗೂ ಸಜೆ ವಿಧಿಸಿದೆ.
2014ರ ಎಪ್ರಿಲ್ 5ರಂದು ಬೆಂಗಳೂರಿನ ವಿಜಯನಗರ ನಿವಾಸಿ ಸತ್ಯನಾರಾಯಣ ಎಂಬವರು ಖಾಸಗಿ ಬಸ್ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ವೇಳೆ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿನ ರಸ್ತೆ ತಿರುವಿನಲ್ಲಿ ಸತ್ಯ ನಾರಾಯಣವರು ತಾನಿದ್ದ ಸ್ಥಳದಿಂದ ಬಸ್ನ ಎಡಬದಿಗೆ ಜಾರಿ ಪಕ್ಕದ ಗಾಜು ಪುಡಿಯಾಗಿ ಅವರು ಹೊರಕ್ಕೆ ಎಸೆಯಲ್ಪಟ್ಟಿದ್ದರು. ಇದರಿಂದಾಗಿ ಗಂಭೀರ ಗಾಯಗೊಂಡಿದ್ದ ಅವರು ಮೇ.13ರಂದು ಮೃತಪಟ್ಟಿದ್ದರು.
ಪುತ್ತೂರು ನಗರ ಪೊಲೀಸ್ ಠಾಣೆಯ ಆಗಿನ ವೃತ್ತ ನಿರೀಕ್ಷಕ ಮಂಜಯ್ಯರವರು ತನಿಖೆ ನಡೆಸಿ ಆರೋಪಿ ಬಸ್ಚಾಲಕ ಗುರುಲಿಂಗಪ್ಪ ಅವರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಎಸಿಜೆಎಮ್ ನ್ಯಾಯಾಲಯ ಆರೋಪಿಗೆ 6 ತಿಂಗಳ ಸಜೆ ಮತ್ತು ರೂ. 1 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಇನ್ನೊಂದು ಪ್ರಕರಣದಲ್ಲಿ 2013 ಫೆ. 24 ರಂದು ಪುತ್ತೂರಿನ ಬಸ್ಸು ನಿಲ್ದಾಣದ ಬಳಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಕರಂಬುಲಾಜೆ ನಿವಾಸಿ ಬಾಬು ನಾಯ್ಕ(70) ಎಂಬವರ ಮೇಲೆ ಬಸ್ಸು ಹರಿದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆಯಲ್ಲಿ ಮೃತಪಟ್ಟಿದ್ದರು.
ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯ ಆಗಿನ ವೃತ್ತ ನಿರೀಕ್ಷ ಸುದರ್ಶನ್ ಅವರು ತನಿಖೆ ನಡೆಸಿ ಬಸ್ಚಾಲಕನ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಎಸಿಜೆಎಮ್ ನ್ಯಾಯಾಲಯ ಬಸ್ ಚಾಲಕ ಆರೋಪಿ ಸೇಸಪ್ಪ ಗೌಡರಿಗೆ 6 ತಿಂಗಳ ಸಜೆ ಮತ್ತು ರೂ. 1ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಎರಡೂ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕ ಶೌಕತ್ ಆಲಿ ಅವರು ವಾದಿಸಿದ್ದರು.