ಮನೆ ಅಳತೆ ಮಾಡಬೇಕು ಎಂದು ಹೇಳಿ 10 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿದರು !
ಮೈಸೂರು,ಜೂ.23: 'ನಾವು ಮಹಾನಗರ ಪಾಲಿಕೆಯ ಸಿಬ್ಬಂದಿಗಳು. ನಿಮ್ಮ ಮನೆ ಅಳತೆ ಮಾಡಬೇಕು. ಮನೆ ಅಳತೆ ಮಾಡಿದರೆ ಮುಂದಿನ ತಿಂಗಳಿನಿಂದ ನೀರಿನ ಬಿಲ್ ಉಚಿತ' ಎಂದು ಹೇಳಿಕೊಂಡು ಬಂದ ವ್ಯಕ್ತಿಗಳಿಬ್ಬರು ಮನೆಯಲ್ಲಿದ್ದ ಹತ್ತು ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಕುವೆಂಪು ನಗರದಲ್ಲಿ ನಡೆದಿದೆ.
ಕುವೆಂಪುನಗರದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ರಸ್ತೆಯ ನಿವಾಸಿ ಲೀಲಾವತಿ ಎಂಬವರ ಮನೆಗೆ ಬಂದ ಅನಾಮಿಕರು ಮನೆಯನ್ನು ಅಳತೆ ಮಾಡುವುದಾಗಿ ಹೇಳಿ ಒಳ ಬಂದಿದ್ದಾರೆ. ಇಬ್ಬರೂ ಮನೆಯ ಕೋಣೆಗಳನ್ನು ಅಳತೆ ಮಾಡುತ್ತಿದ್ದು, ಅವರಲ್ಲಿ ಓರ್ವ ಮನೆಯ ಮೇಲ್ಭಾಗ ತೋರಿಸುವಂತೆ ಹೇಳಿದ್ದಾನೆ. ಮತ್ತೋರ್ವ ಕೆಳಗಡೆ ಅಳತೆ ಮಾಡುವಂತೆ ನಟಿಸುತ್ತಿದ್ದ. ನಂತರ ಮನೆಯನ್ನು ಅಳತೆ ಮಾಡಿದ್ದೇವೆ. ಮುಂದಿನ ತಿಂಗಳಿನಿಂದ ನೀರಿನ ಬಿಲ್ ಉಚಿತ ಎಂದು ಹೇಳಿ ಹೋಗಿದ್ದಾರೆ. ಬಳಿಕ ಲೀಲಾವತಿ ಅವರಿಗೆ ಅನುಮಾನ ಬಂದಿದ್ದು, ಮನೆಯ ಬೀರುವಿನ ಬಾಗಿಲು ತೆರೆದು ನೋಡಿದಾಗ ಅದರಲ್ಲಿದ್ದ 280 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.