ಕಿಡ್ನಿ ಕಲ್ಲು ಶಸ್ತ್ರಚಿಕಿತ್ಸೆ ಸಂದರ್ಭ ಕಿಡ್ನಿ ಎಗರಿಸಿದ ವೈದ್ಯ !
ಮುಝಾಫರ್ ನಗರ್, ಜೂ. 24: ವ್ಯೆದ್ಯರು ರೋಗಿಯ ಕಿಡ್ನಿಯಿಂದ ಕಲ್ಲು ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಿದ ಸಂದರ್ಭ ಕಿಡ್ನಿಯನ್ನೇ ಕಳವುಗೈದ ಆರೋಪದಲ್ಲಿ ಉತ್ತರಪ್ರದೇಶದ ಮುಝಾಫರ್ನಗರದ ನ್ಯೂಮಂಡಿ ಪ್ರದೇಶದಲ್ಲಿರುವ ಖಾಸಗಿ ಆಸ್ಪತ್ರೆಗೆ ಬೀಗಮುದ್ರೆ ಹಾಕಲಾಗಿದೆ. ಕಿಡ್ನಿಯಿಂದ ಕಲ್ಲು ತೆಗೆಯಲು ಶಸ್ತ್ರಚಿಕಿತ್ಸೆಗಾಗಿ 60 ವರ್ಷದ ಇಕ್ಬಾಲ್ ಶನಿವಾರ ಈ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ವೈದ್ಯ ವಿಭು ಗರ್ಗ್ ಕಲ್ಲು ತೆಗೆಯಲು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ಸಂದರ್ಭ ಕಿಡ್ನಿ ಕಳವುಗೈದಿದ್ದಾರೆ ಎಂದು ಇಕ್ಬಾಲ್ ಕುಟುಂಬ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಆರೋಪಿಸಿದೆ. ಕಳವುಗೈದ ಕಿಡ್ನಿಯನ್ನು ಐಸ್ ಚೀಲದಲ್ಲಿ ಇರಿಸಲಾಗಿತ್ತು ಎಂದೂ ಕೂಡ ಕುಟುಂಬದ ಸದಸ್ಯರು ಹೇಳಿದ್ದಾರೆ.
ಉತ್ತರಪ್ರದೇಶದ ಆರೋಗ್ಯ ಇಲಾಖೆ ಶನಿವಾರ ಸಂಜೆ ಆಸ್ಪತ್ರೆಗೆ ಬೀಗ ಮುದ್ರೆ ಹಾಕಿದೆ ಹಾಗೂ ಈ ವಿಷಯದ ಕುರಿತು ತನಿಖೆ ನಡೆಸಲು ತಂಡ ರೂಪಿಸಲಾಗಿದೆ ಎಂದು ಮುಖ್ಯ ವ್ಯೆದ್ಯಕೀಯ ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಖಾಸಗಿ ಆಸ್ಪತ್ರೆಯ ವ್ಯೆದ್ಯರು ಹಾಗೂ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.