ರೈತರ ಸಾಲಮನ್ನಾ ಬಗ್ಗೆ ಬಜೆಟ್ನಲ್ಲಿ ರೂಪುರೇಷೆ ಪ್ರಕಟ: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, ಜೂ. 25: ರೈತರ ಸಾಲಮನ್ನಾವನ್ನು ತಮ್ಮ ಅಧಿಕಾರಾವಧಿಯಲ್ಲಿ ಅನುಷ್ಠಾನಗೊಳಿಸಲು ಸಹಕಾರ ಸಂಸ್ಥೆಗಳ ಸಲಹೆಗಳನ್ನು ಪಡೆದಿದ್ದೇನೆ. ಬಜೆಟ್ನಲ್ಲಿ ಈ ಬಗ್ಗೆ ರೂಪುರೇಷೆಗಳನ್ನು ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೃಷಿ, ಸಹಕಾರ ಇಲಾಖೆ ಅಧಿಕಾರಿಗಳು ಮತ್ತು ಸಹಕಾರ ಸಂಘಗಳ ಪ್ರತಿನಿಧಿಗಳೊಂದಿಗೆ ಸಭೆ ಬಳಿಕ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡುವಂತಹ ಹಾಗೂ ರೈತರಿಗೆ ಲಾಭವಾಗುವಂತಹ ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.
ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇನೆ ಎಂಬುದು ನನಗೆ ಮುಖ್ಯವಲ್ಲ. ಎಲ್ಲಿಯವರೆಗೆ ಇರುತ್ತೇನೋ ಅಲ್ಲಿಯವರೆಗೆ ಜನರಿಗಾಗಿ ಏನು ಮಾಡುತ್ತೇನೆ ಎಂಬುದು ಮುಖ್ಯ. ರಾಜ್ಯದ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ಸದುದ್ದೇಶದಿಂದ ಸಹಕಾರ ಸಂಸ್ಥೆಗಳ ಪದಾಧಿಕಾರಿಗಳ ಅನುಭವದ ಮಾಹಿತಿ ಸಂಗ್ರಹಿಸಿ ಹಾಗೂ ಸರಕಾರದ ಸಾಲಮನ್ನಾ ಕ್ರಮದಿಂದ ಆ ಸಂಸ್ಥೆಗಳು ನಷ್ಟಕ್ಕೆ ಒಳಗಾಗದಂತೆ ಮಾರ್ಗೋಪಾಯಗಳನ್ನು ರೂಪಿಸಲು ಸಭೆಯಲ್ಲಿ ಹೊರಹೊಮ್ಮಿದ ಸಲಹೆಗಳು ಅನುಕೂಲಕರ ಎಂದು ಕುಮಾರಸ್ವಾಮಿ ಹೇಳಿದರು.
ಕಮಿಷನ್ ಬರುವುದಿಲ್ಲ: ಮೈತ್ರಿ ಸರಕಾರದ ಇತಿಮಿತಿಯೊಳಗೆ ರೈತರಿಗೆ ನೀಡಿರುವ ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದ ಕುಮಾರಸ್ವಾಮಿ, ರೈತರನ್ನು ಉಳಿಸಿ-ರಕ್ಷಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಈ ಸಮ್ಮಿಶ್ರ ಸರಕಾರವು ಎಷ್ಟುದಿನ ಅಧಿಕಾರದಲ್ಲಿ ಇರುತ್ತದೋ ಎಂದು ಕೆಲವು ಅಧಿಕಾರಿಗಳು ಮಾತನಾಡಿಕೊಳ್ಳುತ್ತಿರುವ ಅಂಶ ತಮ್ಮ ಗಮನಕ್ಕೆ ಬಂದಿದೆ. ಸರಕಾರದ ಆದೇಶವನ್ನು ಅನುಷ್ಠಾನಗೊಳಿಸುವ ಕರ್ತವ್ಯ ಮತ್ತು ಜವಾಬ್ದಾರಿ ಅಧಿಕಾರಿಗಳದ್ದು. ಸಮ್ಮಿಶ್ರ ಸರಕಾರದ ಅಸ್ತಿತ್ವದ ಬಗ್ಗೆ ಅನಗತ್ಯ ಅನುಮಾನ ಹಾಗೂ ಎಲ್ಲಿಲ್ಲದ ಸಂದೇಹಗಳು ಬೇಡ. ಸಾಲಮನ್ನಾ ರೈತರಿಗೆ ಅನುಕೂಲವಾಗಬೇಕು. ರೈತರ ಹೆಸರಿನಲ್ಲಿ ಮಧ್ಯವರ್ತಿಗಳಿಗೆ ಲಾಭವಾಗಬಾರದು. ಇದರಿಂದ ನನಗೆ ಯಾವುದೇ ಕಮಿಷನ್ ಬರುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಾ.31ರ ವರೆಗೆ ಗಡುವು ವಿಸ್ತರಣೆ: ಹಳೆಯ ಸಾಲವನ್ನು ನವೀಕರಣ ಮಾಡಿದರೆ, ರೈತರಿಗೆ ಸಹಾಯ ಆಗುವುದಿಲ್ಲ. ನೈಜ ರೈತರಿಗೆ ಸಕಾಲದಲ್ಲಿ ಸಾಲ ನೀಡಿಕೆಯ ಲಾಭ ದೊರೆಯಬೇಕು. ಕೆಲವು ಸಹಕಾರ ಸಂಸ್ಥೆಗಳ ಪದಾಧಿಕಾರಿಗಳು 2017ರ ಡಿ.31ರ ಗಡುವನ್ನು 2018ರ ಮಾ.31ರ ವರೆಗೆ ವಿಸ್ತರಿಸಲು ಸಲಹೆ ಮಾಡಿದ್ದಾರೆ. ಇದಕ್ಕೆ ತಗಲುವ ವೆಚ್ಚ ಕುರಿತಂತೆ ಸರಕಾರಕ್ಕೆ ಹಾಗೂ ಸಹಕಾರ ಸಂಸ್ಥೆಗಳ ಮೇಲೆ ಬೀಳುವ ಹೊರೆಯ ಪ್ರಮಾಣ ಕುರಿತಂತೆ ನಿಖರ ಅಂಕಿ-ಅಂಶಗಳ ವಾಸ್ತವ ವರದಿ ನೀಡುವಂತೆ ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು.
ರೈತರನ್ನು ಉಳಿಸಬೇಕೆನ್ನುವ ತಮ್ಮ ಸದಾಶಯಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಒಳಗೊಂಡಂತೆ ತಮ್ಮ ಸಂಪುಟದ ಸಹೋದ್ಯೋಗಿಗಳು ಹಾಗೂ ಶಾಸಕ ಮಿತ್ರರು ಕೈಜೋಡಿಸಿದ್ದಾರೆ. ಬೃಹತ್ ಮೊತ್ತದ ಸಾಲಮನ್ನಾ ಕುರಿತಂತೆ ಶೀಘದಲ್ಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಸಭೆಗೆ ತಿಳಿಸಿದರು.
ಬಜೆಟ್ನಲ್ಲಿ ಘೋಷಣೆ: ಹಿಂದಿನ ಸರಕಾರ ಸಹಕಾರಿ ಸಂಸ್ಥೆಗಳಲ್ಲಿನ 50 ಸಾವಿರ ರೂ.ವರೆಗಿನ ಬೆಳೆ ಸಾಲಮನ್ನಾ ಮಾಡಿದೆ. ಇದರ ಮೊತ್ತ 8 ಸಾವಿರ ಕೋಟಿ ರೂ.ಗಳಿಗೂ ಅಧಿಕವಾಗಿದೆ. ಪುನಃ ಸಾಲಮನ್ನಾ ಯೋಜನೆಯಿಂದ ಬೊಕ್ಕಸಕ್ಕೆ 10 ಸಾವಿರ ಕೋಟಿ ರೂ.ಹೊರೆ ಬೀಳಲಿದೆ. ಇದರ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲದ ವಿವರಗಳನ್ನು ಕಲೆ ಹಾಕಬೇಕಾಗಿದೆ. ಅಂತೆಯೇ, ರಾಜ್ಯ ಸರಕಾರ 6ನೆ ವೇತನ ಆಯೋಗದ ಶಿಫಾರಸ್ಸಿನ ಅನುಷ್ಠಾನಕ್ಕೆ 17 ಸಾವಿರ ಕೋಟಿ ರೂ.ಗಳಿಗೆ ಹೆಚ್ಚು ಮೊತ್ತದ ಅವಶ್ಯಕತೆ ಇದೆ. ಅಲ್ಲದೆ, ಹಿಂದಿನ ಸರಕಾರದ ಪ್ರಮುಖ ಯೋಜನೆಗಳನ್ನೂ ಮುಂದುವರೆಸಬೇಕಾದ ಅನಿವಾರ್ಯತೆ ಇದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಶೀಘ್ರದಲ್ಲೇ ಬಜೆಟ್ನಲ್ಲಿ ಸರಕಾರದ ತೀರ್ಮಾನ ಪ್ರಕಟಿಸಲಾಗುವುದು ಎಂದರು.
ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳು ಜನರಿಗೆ, ವಿಶೇಷವಾಗಿ ರೈತರಿಗೆ ತಲುಪಬೇಕು. ಸರಕಾರದ ಸವಲತ್ತು-ಸೌಲಭ್ಯಗಳು ರೈತ ಸಮುದಾಯಕ್ಕೆ ಎಷ್ಟರ ಮಟ್ಟಿಗೆ ತಲುಪುತ್ತವೆ ಎಂಬ ಬಗ್ಗೆ ಪ್ರಾಮಾಣಿಕವಾಗಿ ಪರಾಮರ್ಶೆ ಆಗಬೇಕು ಎಂದು ಕುಮಾರಸ್ವಾಮಿ ಕಳಕಳಿ ವ್ಯಕ್ತಪಡಿಸಿದರು.
ಸಹಕಾರ ಸಚಿವ ಬಂಡೆಪ್ಪ ಕಾಂಶೆಪೂರ್, ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ, ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಸಿಎಂ ಆರ್ಥಿಕ ಸಲಹೆಗಾರ ಡಾ. ಎಸ್.ಸುಬ್ರಮಣ್ಯ ಸೇರಿದಂತೆ ಜಿಲ್ಲಾ ಸಹಕಾರ ಬ್ಯಾಂಕ್ಗಳ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.