ವಾಮಂಜೂರಿನಲ್ಲಿ ತಂಡದಿಂದ ವ್ಯಕ್ತಿಯ ಕೊಲೆಯತ್ನ; ಬೆದರಿಕೆ
ಮಂಗಳೂರು, ಜೂ.24: ಸಮೀಪದ ವಾಮಂಜೂರಿನಲ್ಲಿ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳ ತಂಡವೊಂದು ವಿಫಲ ಕೊಲೆಯತ್ನ ನಡೆಸಿ ಪರಾರಿಯಾದ ಘಟನೆ ರವಿವಾರ ಸಂಜೆ ನಡೆದಿದೆ.
ಆರೋಪಿಗಳನ್ನು ಮುಹಮ್ಮದ್ ರಾಯಿಫ್, ಮುಹಮ್ಮದ್ ರಿಝ್ವಾನ್, ಮುಸ್ತಫಾ, ನವಾಝ್, ಮತ್ತು ಶಾರೂಕ್ ಯಾನೆ ಮುಹಮ್ಮದ್ ಎಂದು ಗುರುತಿಸಲಾಗಿದೆ. ಖಾಲೀದ್ ಹಲ್ಲೆಗೊಳಗಾದವರು.
ಖಾಲಿದ್ ತನ್ನ ಗುಜರಿ ಅಂಗಡಿಗೆ ಬೀಗ ಹಾಕಿ, ವಾಮಂಜೂರು ವೆಲ್ಡಿಂಗ್ ಅಂಗಡಿಯೊಂದರ ಬಳಿ ನಿಲ್ಲಿಸಿದ್ದ ಕಾರಿನ ಬಳಿಗೆ ಹೋಗಿ ಬಾನೆಟ್ನ್ನು ತೆರೆದು ಆಯಿಲ್ ಚೆಕ್ ಮಾಡುತ್ತಿದ್ದರು. ಈ ವೇಳೆ ಮುಹಮ್ಮದ್ ರಾಯಿಫ್ ಸೇರಿ ದುಷ್ಕರ್ಮಿಗಳ ತಂಡವು ಖಾಲೀದ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ನಾವು ಜೈಲಿನಿಂದ ಬಂದವರು ನಮಗೆ ಹಫ್ತಾ ಹಣ ನೀಡಬೇಕು’ ಎಂದು ಹೇಳಿಸೋಡಾ ಬಾಟಲ್ನಿಂದ ಖಾಲೀದ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದ್ದಾರೆ.
ಇದೇ ವೇಳೆ ಆರೋಪಿಯೋರ್ವ ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್ನಿಂದ ಖಾಲೀದ್ ಅವರ ತಲೆಗೆ ಹೊಡೆದಿದ್ದಾನೆ. ಗಾಯಾಳುವಿನ ಕಾರನ್ನು ಜಖಂಗೊಳಿಸಿದ್ದಾರೆ. ಬಳಿಕ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಆರೋಪಿಗಳೆಲ್ಲರೂ ವಾಮಂಜೂರಿನಲ್ಲಿ ಈ ಮೊದಲು ನಡೆದಿರುವ ಚರಣ್ ಎಂಬಾತನ ಕೊಲೆಗೆ ಸಂಬಂಧಿಸಿದ ಆರೋಪಿಗಳಾಗಿದ್ದಾರೆ. ಅಲ್ಲದೆ, ಇವರು ಜೈಲು ಶಿಕ್ಷೆಗೊಳಗಾದವರು ಎಂದು ತಿಳಿದುಬಂದಿದೆ.
ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







