ಎರಡು ದಿನಗಳಿಂದ ಸುರಿಯುತ್ತಿರುವ ಮಳೆ: ಭಂಡಾರಿಬೆಟ್ಟುವಿನಲ್ಲಿ ಕೃತಕ ನೆರೆ

ಬಂಟ್ವಾಳ, ಜೂ. 27: ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಭಂಡಾರಿಬೆಟ್ಟುವಿನಲ್ಲಿ ಬುಧವಾರ ಕೃತಕ ನೆರೆ ಉಂಟಾಗಿ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆಗೆ ನೀರು ಸರಾಗವಾಗಿ ಹರದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ತಗ್ಗು ಪ್ರದೇಶ ಸಹಿತ ಗದ್ದೆಯಲ್ಲಿ ನೀರು ನಿಂತು ವಸ್ತುಶ: ದ್ವೀಪದಂತಾಗಿದೆ. ಇಲ್ಲಿದ್ದ ಚರಂಡಿಯಲ್ಲಿ ಹೂಳುತುಂಬಿದರಿಂದ ನೀರು ಹರಿಯಲು ತಡೆವುಂಟಾಗಿ ಪಕ್ಕದ ಮನೆ, ಅಂಗಡಿಗೆ ನೀರು ನುಗ್ಗಿದೆ. ಪುರಸಭೆ ಮತ್ತು ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಗ್ಗುಪ್ರದೇಶದಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಆದರೆ ಈ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಯ ವ್ಯವಸ್ಥೆ ಇಲ್ಲ. ಪರಿಣಾಮ ಮಳೆಗಾಲದಲ್ಲಿ ನೀರು ಹರಿಯಲು ಜಾಗವಿಲ್ಲದೆ ಕೃತಕ ನೆರೆ ಉಂಟಾಗಿ ಸಮಸ್ಯೆ ಉದ್ಭವವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುದ್ದಿ ತಿಳಿದ ಪ್ರಭಾರ ತಹಶೀಲ್ದಾರ್ ಸಂತೋಷ್ ಜಿ., ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ನವೀನ್ ಬೆಂಜನಪದವು, ಪುರಸಭೆಯ ಅಧ್ಯಕ್ಷ ರಾಮಕೃಷ್ಣ ಆಳ್ವ, ಪುರಸಭಾ ಸದಸ್ಯರಾದ ಜಗದೀಶ ಕುಂದರ್, ದೇವದಾಸ ಶೆಟ್ಟಿ, ಗಂಗಾದರ್ ಇಂಜಿನಿಯರ್ ಡೊಮೆನಿಕ್ ಡಿ ಮಿಲ್ಲೋ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಟೇಕಾರ್ ಸಿಬ್ಬಂದಿ ಸದಾಶಿವ ಕೈಕಂಬ, ಶಿವ ಪ್ರಸಾದ್ ಬಂಟ್ವಾಳ, ಅಗ್ನಿ ಶಾಮಕ ದಳ ಸ್ಥಳದಲ್ಲಿದ್ದು ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡರು. ಅದೇ ರೀತಿ ಬಿ.ಸಿ.ರೋಡಿನ ಪೆಟ್ರೋಲ್ ಪಂಪೊಂದರ ಬಳಿ ಚರಂಡಿ ಬ್ಲಾಕ್ ಆಗಿ ಪೆಟ್ರೋಲ್ ಪಂಪ್ ಹಾಗೂ ಅಕ್ಕಪಕ್ಕದ ಮನೆಗೆ ನೀರು ನುಗ್ಗಿತ್ತು.
7 ಕಂಬಗಳಿಗೆ ಹಾನಿ: ಕಳ್ಳಿಗೆ, ಪಚ್ಚಿನಡ್ಕ, ಅಗ್ರಾರ್ ಸೇರಿದಂತೆ ವಿವಿಧ ಭಾಗಗಳಲ್ಲಿ ಗಾಳಿ-ಮಳೆಗೆ ಮರಗಳು ಬಿದ್ದು, ವಿದ್ಯುತ್ ಕಂಬಗಳು ಕೂಡ ಧರಶಾಹಿಯಾಗಿದೆ. ಕೆಲವೆಡ ಗುಡ್ಡ ಜರಿದು ಹಾನಿಯಾಗಿದೆ. ಪುದು ಗ್ರಾಮದ ಸುಜೀರುಗುಡ್ಡೆ ಎಂಬಲ್ಲಿ ಝರೀನಾ ಎಂಬವರ ಮನೆಗೆ ಹಾನಿಯಾಗಿದ್ದು, ಸುಮಾರು 25 ಸಾವಿರ ನಷ್ಟವುಂಟಾಗಿದೆ. ಸರಪಾಡಿಯ ಉಜಿರಾಡಿ ಎಂಬಲ್ಲಿ ಐತಪ್ಪ ಪೂಜಾರಿಯವರ ಮನೆಯ ಹಿಂಭಾಗ ಗುಡ್ಡ ಜರಿದಿದ್ದು, ಇದರಲ್ಲಿರುವ ವಿದ್ಯುತ್ ಕಂಬ ಅಪಾಯದಲ್ಲಿದೆ.