ಜು.1ರಂದು ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ

ಉಡುಪಿ, ಜೂ.27: ಉಡುಪಿ, ಮಣಿಪಾಲ ಹಾಗೂ ಕುಂದಾಪುರ ಅಂಚೆ ಮನೋರಂಜನಾ ಕೂಟ ಇದರ ಸಹಯೋಗದಲ್ಲಿ ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜು.1ರಂದು ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಆಯೋಜಿಸಲಾಗಿದೆ.
ಉಡುಪಿ ಅಂಚೆ ವಿಭಾಗದಲ್ಲಿ ಸುಮಾರು 265 ಅಂಚೆ ಕಚೇರಿಗಳಿದ್ದು, ಇಲ್ಲಿ ಬಹಳಷ್ಟು ಮಂದಿ ಪ್ರತಿಭಾವಂತ ಸಾಹಿತ್ಯಾಸಕ್ತರು, ಬರಹಗಾರರು ಇದ್ದಾರೆ. ಇವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲೇ ಪ್ರಥಮ ಸಮ್ಮೇಳನ ವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಾಜಶೇಖರ್ ಭಟ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜಶೇಖರ್ ಭಟ್ ಸಮ್ಮೇಳನಾಧ್ಯಕ್ಷರಾಗಿರುವ ಈ ಸಮ್ಮೇಳನವನ್ನು ಬೆಳಗ್ಗೆ 9ಗಂಟೆಗೆ ಅಂಬಲಪಾಡಿ ದೇವಳದ ಧರ್ಮದರ್ಶಿ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ.ನಿ.ಬೀ.ವಿಜಯ ಬಲ್ಲಾಳ್ ಉದ್ಘಾಟಿಸಲಿರುವರು. 11ಗಂಟೆಯಿಂದ ಅಂಚೆ ಪತ್ರಗಳ ಭಾವಲೋಕ, ಅಂಚೆ ಹಾಸ್ಯ ಲಾಸ್ಯ, ಅಂಚೆ ಕವಿಗೋಷ್ಠಿ, ಮಧ್ಯಾಹ್ನ 12:30ರಿಂದ ಅಂಚೆ ಸಿಬ್ಬಂದಿಗಳಿಂದ ಭಾವ ಲಹರಿ, ಅಂಚೆ ಕುಟುಂಬ ಸದಸ್ಯರಿಂದ ಸಾಂಸ್ಕೃತಿಕ ಸಿಂಚನ ನಡೆಯಲಿದೆ.
ಅಪರಾಹ್ನ 3ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಂಕಣ ಕಾರ ಚಕ್ರವರ್ತಿ ಸೂಲಿಬೆಲೆ ಅಂಚೆ ಸೇವೆ- ದೇಶ ಸೇವೆ ವಿಚಾರದಲ್ಲಿ ಶಿಖ ರೋಪನ್ಯಾಸ ನೀಡಲಿರುವರು. ಈ ಸಂದರ್ಭದಲ್ಲಿ ಕು.ಗೋ, ಅಂಶುಮಾಲಿ, ಹಳ್ಳೀ ಭಟ್, ಸುಕನ್ಯಾ ಕಳಸ ಅವರಿಗೆ ಅಂಚೆ ಸಾಹಿತ್ಯ ಪುರಸ್ಕಾರ ನೀಡಲಾಗು ವುದು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಜಯರಾಮ ಶೆಟ್ಟಿ, ಶ್ರೀನಾಥ್ ಬಸ್ರೂರು, ಅಧ್ಯಕ್ಷ ಸೂರ್ಯನಾರಾಯಣ ರಾವ್, ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್, ಕೋಶಾಧಿಕಾರಿ ಸುರೇಶ್ ಕೆ., ಕಾರ್ಯದರ್ಶಿ ನರಸಿಂಹ ನಾಯಕ್ ಉಪಸ್ಥಿತರಿದ್ದರು.







