ತುಳು ಸಾಹಿತ್ಯ ಕೃತಿಗಳ ಅನುವಾದ ಆಶಾದಾಯಕ: ಡಾ.ಡಿ.ವಿರೇಂದ್ರ ಹೆಗ್ಗಡೆ
ತುಳುವಿನಿಂದ ಆಂಗ್ಲಭಾಷೆಗೆ ಅನುವಾದಗೊಂಡ ಮೂರು ಕೃತಿಗಳ ಲೋಕಾರ್ಪಣೆ

ಮಂಗಳೂರು, ಜೂ.27: ತುಳು ಸಾಹಿತ್ಯ ಕೃತಿಗಳು ಆಂಗ್ಲ ಭಾಷೆಗೆ ಅನುವಾದಗೊಳ್ಳುತ್ತಿರುವುದು ಉತ್ತಮವಾದ ಬೆಳವಣಿಗೆ. ಇದರಿಂದ ತುಳು ಬದುಕಿನ ಸತ್ವ ಮತ್ತು ಸಂಸ್ಕೃತಿ ಹೊರಜಗತ್ತಿಗೆ ವಿಸ್ತರಿಸಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಇಲ್ಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಿರಿಚಾವಡಿಯಲ್ಲಿ ಬುಧವಾರ ತುಳುವಿನಿಂದ ಆಂಗ್ಲಭಾಷೆಗೆ ಅನುವಾದಗೊಂಡ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ತುಳು ಕೃತಿಗಳು ಆಂಗ್ಲಭಾಷೆಗೆ ತರ್ಜುಮೆಗೊಳ್ಳುತ್ತಿರುವುದು ತುಳುವರು ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ. ಒಂದು ಕಾಲದಲ್ಲಿ ತುಳು ಮಾತನಾಡಲು ಹಿಂದೇಟು ಹಾಕುವವರಿದ್ದರು. ಆದರೆ ಇಂದು ಪರಿಸ್ಥಿತಿ ಭಿನ್ನವಾಗಿದೆ ಎಂದರು.
ತುಳು ಭಾಷೆಯಲ್ಲಿ ಮಾತನಾಡಲು ಹೆಮ್ಮೆ ಪಡುವ ಹಂತಕ್ಕೆ ಬಂದಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಳು ಭಾಷೆ ಬೆಳಗ ಬೇಕಾದರೆ ಅನುವಾದ ಮತ್ತು ಪ್ರಕಟಣೆಗಳು ಹೆಚ್ಚಾಗ ಬೇಕು ಎಂದು ಅವರು ಹೇಳಿದರು.
ಮುಖ್ಯಅತಿಥಿ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ತುಳು ಭಾಷಾ ಕೃತಿಗಳು ಹೆಚ್ಚಿನ ಪ್ರಮಾಣದಲ್ಲಿ ಆಂಗ್ಲಭಾಷೆಗೆ ಅನುವಾದಗೊಂಡಾಗ ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಬೇಕು ಎಂಬ ಕೂಗಿಗೆ ಇನ್ನಷ್ಟು ಬಲ ಬರುತ್ತದೆ ಎಂದು ಎಂದರು.
ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಮತ್ತು ನವದಿಲ್ಲಿಯ ಜೆಎನ್ಯು ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಪುಸ್ತಕಗಳ ಬಗ್ಗೆ ಮಾತನಾಡಿದರು.
ಡಾ.ಡಿ.ಕೆ ಚೌಟರ ತುಳು ಕಾದಂಬರಿ ‘ಮಿತ್ತಬೈಲ್ ಯಮುನಕ್ಕ’, ಕೆಲಸದ ಮತ್ತು ಕುಣಿತದ ಆಯ್ದ ತುಳು ಹಾಡುಗಳ ಅನುವಾದ ‘ವೆನ್ ಮೂನ್ಲೈಟ್ ಈಸ್ ವೇರಿ ಹಾಟ್’ ಮತ್ತು ಆಯ್ದ ತುಳು ಜನಪದ ಕತೆಗಳ ಅನುವಾದ ‘ದಿ ರೈನ್ ಬಾಯ್’ ಬಿಡುಗಡೆಗೊಂಡ ಅನುವಾದ ಕೃತಿಗಳಾಗಿವೆ.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರೊ.ಬಿ.ಸುರೇಂದ್ರ ರಾವ್ ಮತ್ತು ಪ್ರೊ.ಕೆ.ಚಿನ್ನಪ್ಪ ಗೌಡ ತುಳು ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದು, ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಡಿ.ಕೆ.ಚೌಟ, ಆಕೃತಿ ಆಶ್ರಯ ಪ್ರಕಾಶನದ ಕಲ್ಲೂರು ನಾಗೇಶ್, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಬಿ.ಚಂದ್ರಹಾಸ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.