ಗಡಿ ಭದ್ರತಾ ಪಡೆಯ 10 ಯೋಧರು ನಾಪತ್ತೆ

ಸಾಂದರ್ಭಿಕ ಚಿತ್ರ
ಮುಂಬೈ, ಜೂ. 28: ಪಶ್ಚಿಮಬಂಗಾಳದಿಂದ ಜಮ್ಮುಕಾಶ್ಮೀರಕ್ಕೆ ರೈಲಿನಲ್ಲಿ ತೆರಳುತ್ತಿದ್ದ ಗಡಿ ಭದ್ರತಾ ಪಡೆಯ 10 ಮಂದಿ ಯೋಧರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮಬಂಗಾಳದ ಬರ್ಧಮಾನ್ ಹಾಗೂ ಬಿಹಾರದ ಧನ್ಬಾದ್ ನಡುವೆ 10 ಮಂದಿ ಯೋಧರು ನಾಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅವರ ಕಮಾಂಡರ್ ದೀನ್ ದಯಾಳ್ ಉಪಾಧ್ಯಾಯ ನಗರ ರೈಲ್ವೆ ಸ್ಟೇಷನ್ನಲ್ಲಿರುವ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಜೆ ತೆಗೆದುಕೊಳ್ಳದೆ ಯೋಧರು ತೆರಳಿದ್ದಾರೆ ಎಂದು ಅವರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
‘‘ಗಡಿ ಭದ್ರತಾ ಪಡೆಯ 83 ಯೋಧರು ಜಮ್ಮು ಹಾಗೂ ಕಾಶ್ಮೀರದ ವಿಶೇಷ ರೈಲಿನಲ್ಲಿ ತೆರಳಿದ್ದರು. ಇದರಲ್ಲಿ 10 ಮಂದಿ ಯೋಧರು ತಮ್ಮ ಕಮಾಂಡರ್ಗೆ ಮಾಹಿತಿ ನೀಡದೆ ಧನ್ಬಾದ್ ಹಾಗೂ ಬರ್ಧಮಾನ್ ನಡುವೆ ನಾಪತ್ತೆಯಾಗಿದ್ದಾರೆ’’ ಎಂದು ಸಬ್ ಇನ್ಸ್ಪೆಕ್ಟರ್ ಜಿತೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ.
‘‘ನಾವು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಹಾಗೂ ತನಿಖೆ ನಡೆಸುತ್ತಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ.
ಗಡಿ ಭದ್ರತಾ ಪಡೆಯ 85 ಮಂದಿ ಯೋಧರು ಜಮ್ಮುವಿನ ಸಾಂಬಾ ವಲಯಕ್ಕೆ ತೆರಳಲು ಪಶ್ಚಿಮಬಂಗಾಳದ ರೈಲು ನಿಲ್ದಾಣದಿಂದ ರೈಲು ಹತ್ತಿದ್ದರು. ದೀನ್ ದಯಾಳ್ ಉಪಾಧ್ಯಾಯ ನಗರ್ ರೈಲ್ವೆ ನಿಲ್ದಾಣದಲ್ಲಿ ಹಾಜರು ಕರೆಯುವಾಗ 10 ಮಂದಿ ಯೋಧರು ನಾಪತ್ತೆಯಾಗಿರುವುದು ಕಮಾಂಡರ್ ಅವರ ಗಮನಕ್ಕೆ ಬಂತು.







