ಸ್ಕಾರ್ಫ್ ವಿವಾದ: ಮುಸ್ಲಿಮ್ ಸಂಘಟನೆಗಳ ಮುಖಂಡರಿಂದ ತುರ್ತು ಸಭೆ
ಮಂಗಳೂರು, ಜೂ. 29: ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಉಂಟಾದ ಸ್ಕಾರ್ಫ್ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ರಚಿಸಿದ ಮುಸ್ಲಿಂ ಮುಖಂಡರ ವೇದಿಕೆಯ ತುರ್ತು ಸಭೆಯು ಇಂದು ಸಂಜೆ ಬಂದರಿನ ಕಛೇರಿಯಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲರು ಪತ್ರಿಕಾಗೋಷ್ಟಿ ನಡೆಸಿದ ಹಿನ್ನಲೆಯಲ್ಲಿ, ಅಲ್ಲಿ ಉಲ್ಲೇಖಿಸಿದ ಕೆಲವೊಂದು ಸತ್ಯೆಕ್ಕೆ ದೂರವಾದ ವಿಚಾರದ ಆಧಾರಲ್ಲಿ ಗಂಭೀರ ಚರ್ಚೆಗಳು ನಡೆಯಿತು ಎಂದು ಮುಖಂಡರು ತಿಳಿಸಿದ್ದಾರೆ.
ಪ್ರಾಂಶುಪಾಲರು ತಮ್ಮ ಕಾಲೇಜಿನ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಹೇಳುತ್ತಿರುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ಆದುದರಿಂದ ವಿದ್ಯಾರ್ಥಿಗಳ ಬೇಡಿಕೆಯನ್ನ ಈಡೇರಿಸಿ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ತೀರ್ವ ರೀತಿಯ ಹೋರಾಟ ನಡೆಸಲಿದ್ದೇವೆ ಎಂದು ಮುಸ್ಲಿಂ ಮುಖಂಡರ ವೇದಿಕೆಯ ಸಭೆಯಲ್ಲಿ ಅಧ್ಯಕ್ಷರಾದ ಮಾಜಿ ಮೇಯರ್ ಅಶ್ರಫ್ ತಿಳಿಸಿದ್ದಾರೆ.
ಸಭೆಯಲ್ಲಿ ಮುಸ್ಲಿಂ ಮುಖಂಡರ ವೇದಿಕೆಯ ಉಪಸಂಚಾಲಕ ಸುಹೈಲ್ ಖಂದಕ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತಫ್ಸೀರ್, ಸದಸ್ಯರಾದ ಜಾಫರ್ ಸಾಧಿಕ್ ಫೈಝಿ, ನಯಾಝ್ ಉಳ್ಳಾಲ, ಅತಾವುಲ್ಲಾ ಜೋಕಟ್ಟೆ, ನಝೀರ್, ಇಮ್ರಾನ್ ಮೊದಲಾದವರು ಉಪಸ್ಥಿತರಿದ್ದರು.