‘ನವಯುಗ’ ಕಂಪೆನಿಗೆ ಆರ್ಥಿಕ ಸಂಕಷ್ಟ: ಸಚಿವರ ಮುಂದೆ ಒಪ್ಪಿಕೊಂಡ ಅಧಿಕಾರಿ

ಮಂಗಳೂರು, ಜೂ.30: ಕಂಪೆನಿಯು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಬ್ಯಾಂಕ್ನಿಂದ ಸಾಲ ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಸಾಲ ಮಂಜೂರಾದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ನವಯುಗ ಕಂಪೆನಿಯ ಅಧಿಕಾರಿ ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವ ಯು.ಟಿ.ಖಾದರ್ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸಭೆ ನಡೆಸಿದಾಗ ಅಧಿಕಾರಿ ಈ ಮಾಹಿತಿ ಬಿಚ್ಚಿಟ್ಟಿದ್ದಾರೆ.
ತೊಕ್ಕೊಟ್ಟು ಮತ್ತು ಪಂಪ್ವೆಲ್ ಫ್ಲೈಓವರ್ ಕಾಮಗಾರಿ ಇನ್ನೂ ಮುಗಿದಿಲ್ಲ. ಆಗಲೇ ಟೋಲ್ಗೇಟ್ ನಿರ್ಮಿಸಿ ವಾಹನಿಗರಿಂದ ಟೋಲ್ ಸಂಗ್ರಹಿಸುತ್ತಿದ್ದಾರೆ. ಅಲ್ಲದೆ, ಎರಡೂ ಫ್ಲೈಓವರ್ ಬಳಿ ಸಾರ್ವಜನಿಕರು, ವಾಹನಿಗರು ತೊಂದರೆ ಎದುರಿಸುತ್ತಿದ್ದಾರೆ. ಸಮಸ್ಯೆ ಬಿಗಡಾಯಿಸಿದರೂ ಕೂಡ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿಲ್ಲ. ಸಭೆ ನಡೆಸಿದಾಗಲೆಲ್ಲಾ ಒಂದೊಂದು ದಿನಾಂಕ ಹೇಳಿ ಗಡುವು ನೀಡಿ ತಪ್ಪಿಸಿಕೊಳ್ಳುತ್ತಿದ್ದೀರಿ. ಯಾಕೆ ಹೀಗೆ, ನಿಮಗೆ ಇರುವ ಸಮಸ್ಯೆಯಾದರೂ ಏನು ಎಂದು ಸಚಿವ ಖಾದರ್ ಪ್ರಶ್ನಿಸಿದರು.
ಈ ಸಂದರ್ಭ ಮಾತನಾಡಿದ ನವಯುಗ ಕಂಪೆನಿಯ ಅಧಿಕಾರಿ ಕಂಪೆನಿಯು ಹಣಕಾಸಿನ ಸಮಸ್ಯೆಗೆ ಸಿಲುಕಿದೆ. ಬ್ಯಾಂಕ್ನಿಂದ ಸಾಲ ಮಂಜೂರಾದ ತಕ್ಷಣ ಕಾಮಗಾರಿ ಆರಂಭಿಸುವುದಾಗಿ ಹೇಳಿದರು. ಈ ಉತ್ತರದಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಗುತ್ತಿಗೆ ನಿರ್ವಹಿಸಲು ಸಾಧ್ಯವಿಲ್ಲದಿದ್ದರೆ ನೇರವಾಗಿ ಹೇಳಿ ಎಂದರಲ್ಲದೆ, ಕಾಮಗಾರಿ ವಿಳಂಬಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಾ ಹೊಣೆಯಾಗಿದೆ. ಗುತ್ತಿಗೆದಾರರ ಮೇಲೆ ನಿಯಂತ್ರಣವಿಲ್ಲದ ಕಾರಣ ಇಂತಹ ಸಮಸ್ಯೆಗಳು ಎದುರಾಗುತ್ತಿದೆ. ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ಈ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಮೃತಪಟ್ಟರೆ ಸಂಬಂಧಪಟ್ಟವರ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕಾದೀತು ಎಂದು ಎಚ್ಚರಿಸಿದರು.