17 ಕೋಟಿ ರೂ. ಪ್ರಸ್ತಾವನೆ ಜಿಲ್ಲಾಧಿಕಾರಿಗೆ ಸಲ್ಲಿಕೆ: 958 ಆಸ್ತಿಗಳಿಗೆ ಹಾನಿ
ದ.ಕ.ಜಿ.ಪಂ. ಮಳೆ ಹಾನಿ
ಮಂಗಳೂರು, ಜೂ.30: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಯಿಂದಾಗಿ 958 ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದ್ದು, 17 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಮಿತಿ ಸಭೆಯಲ್ಲಿ ಈ ಮಾಹಿತಿ ನೀಡಿದರು.
ಮಳೆಯಿಂದಾಗಿ ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ 268 ರಸ್ತೆಗಳು, 101 ಚರಂಡಿಗಳು, 120 ತಡೆಗೋಡೆಗಳು ಹಾನಿಗೊಳಗಾಗಿವೆ. ಅವುಗಳ ದುರಸ್ತಿ, ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಗುರುಪುರ ಸೇತುವೆ: ಎರಡು ದಿನಗಳಲ್ಲಿ ವರದಿ
ಬಂಟ್ವಾಳದ ಮುಲ್ಲಾರಪಟ್ನ ಸೇತುವೆ ಕುಸಿತಗೊಂಡ ಹಿನ್ನೆಲೆಯಲ್ಲಿ ಗುರುಪುರದ ಸೇತುವೆ ಕೂಡಾ ದುರ್ಬಲವಾಗಿದೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ತಜ್ಞರಿಂದ ತಪಾಸಣೆ ನಡೆಸಲಾಗಿದೆ. ತಜ್ಞರು ಸೇತುವೆಯ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಿದ್ದು, 2 ದಿನಗಳಲ್ಲಿ ವರದಿ ನೀಡಲಿದ್ದಾರೆ. ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ನರೇಗಾದಡಿ ಮಾದರಿ ಕಾರ್ಯಕ್ರಮ ರೂಪಿಸಲು ಜಿಲ್ಲಾಧಿಕಾರಿ ಸಲಹೆ
ನರೇಗಾ ಯೋಜನೆಗೆ ಯಾವುದೇ ರೀತಿಯಲ್ಲಿ ಗುರಿ ಇಲ್ಲದಿರುವುದರಿಂದ ಮಾದರಿ ರೀತಿಯಲ್ಲಿ ಸಮುದಾಯದತ್ತ ಚಟುವಟಿಕೆಗಳನ್ನು ನಡೆಸಲು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಲಹೆ ನೀಡಿದರು. ಶಾಲೆಗಳಲ್ಲಿ ಕೈತೋಟ ನಿರ್ಮಿಸುವುದು, ಗ್ರಾಮದಲ್ಲೊಂದು ವಿಶೇಷ ಕಾರ್ಯಕ್ರಮ, ವಿಕಲಚೇತನರು, ಹಿರಿಯ ನಾಗರಿಕರನ್ನು ಒಳಗೊಂಡು ವಿಶೇಷ ಕಾರ್ಯಕ್ರಮಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಅಭಿಪ್ರಾಯಿಸಿದರು.
1000 ಅಕ್ಷರ ಕೈತೋಟಗಳ ನಿರ್ಮಾಣ ಗುರಿ
ಜಿ.ಪಂ. ಸಿಇಒ ಡಾ. ಎಂ.ಆರ್. ರವಿ ಪ್ರತಿಕ್ರಿಯಿಸಿ, ಪ್ರಸಕ್ತ ಸಾಲಿನಲ್ಲಿ ಜಿ.ಪಂ.ನ ಶಾಲೆಗಳಲ್ಲಿ 1000 ಅಕ್ಷರ ಕೈತೋಟಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ಕಳೆದ ವರ್ಷ 407 ಶಾಲೆಗಳಲ್ಲಿ ಎಸ್ಡಿಎಂಸಿ ಸಹಕಾರದಲ್ಲಿ ಅಕ್ಷರ ದಾಸೋಹ ಕೈತೋಟ ಮಾಡಲಾಗಿದೆ. ಈ ಬಾರಿ ನರೇಗಾ ಯೋಜನೆಯಡಿ ಈ ಕೈತೋಟಗಳನ್ನು ಮಾಡಲಾಗುವುದು. ಮುಂದೆ ಇದನ್ನು ಅಂಗನವಾಡಿಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ಸಂಸದ ನಳಿನ್ ಕುಮಾರ್ ಅವರು ಮಾತನಾಡಿ, ತಾ.ಪಂ. ಹಾಗೂ ಗ್ರಾ.ಪಂಗಳಲ್ಲಿ ನರೇಗ್ಕಾಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು
ನರೇಗಾದಡಿ ದಿನವೊಂದಕ್ಕೆ ನೀಡಲಾಗುತ್ತಿದ್ದ ವೇತನ 236 ರೂ.ನಿಂದ 249 ರೂ.ಗಳಿಗೆ ಏರಿಕೆಯಾಗಿದೆ. ಮಾತ್ರವಲ್ಲದೆ ಐದು ವರ್ಷ ಕೆಳಗಿನ ಮಕ್ಕಳನ್ನು ಹೊಂದಿರುವ ಮಹಿಳೆಯರು ಕೆಲಸದ ಅವಧಿಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ಕಾರ್ಮಿಕರನ್ನು ನೇಮಕ ಮಾಡಿದ್ದಲ್ಲಿ ಅವರಿಗೂ ಕೂಲಿ ಕೊಡಲು ಅವಕಾಶವಿದೆ. ಜಿಲ್ಲೆಯಲ್ಲಿ ಒಟ್ಟು 111456 ಮಂದಿಗೆ ಉದ್ಯೋಗ ಚೀಟಿಯನ್ನು ನೀಡಲಾಗಿದ್ದು, ಅವರಲ್ಲಿ 31734 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದರು.
ಶಿರಾಡಿ: ಸಾರ್ವಜನಿಕ ಸಂಚಾರ ಮುಕ್ತ ಮತ್ತಷ್ಟು ವಿಳಂಬ
ಈ ಹಿಂದೆ ಶಿರಾಡಿ ಘಾಟಿ ರಸ್ತೆಯನ್ನು ಜುಲೈ 5ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ತಿಳಿಸಲಾಗಿತ್ತು. ಆದರೆ, ಪ್ರಸ್ತುತ 12.30 ಕಿ.ಮೀ. ಕಾಮಗಾರಿ ಮುಗಿದಿದೆ. 380 ಮೀಟರ್ ಕಾಂಕ್ರಿಟೀಕರಣ ಪ್ರಗತಿಯಲ್ಲಿದೆ. ರಸ್ತೆಯಲ್ಲಿ ವಾಹನ ಸಂಚಾರದ ಸುರಕ್ಷತಾ ಕಾಮಗಾರಿಗಳಾಗಿ ಎರಡು ಬದಿಯಲ್ಲಿ ಶೋಲ್ಡರ್ ನಿರ್ಮಾಣ, ತಡೆಗೋಡೆ ನಿರ್ಮಾಣ ನಡೆಯುತ್ತಿದೆ. ಅದನ್ನು ಪೂರ್ಣಗೊಳಿಸಲು ಮತ್ತಷ್ಚು ಕಾಲವಕಾಶ ಅಗತ್ಯವಿರುವುದರಿಂದ ಜುಲೈ 15ಕ್ಕೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬಹುದಾಗಿದೆ ಎಂದು ಸಭೆಯಲ್ಲಿ ಜಿಲಾ್ಲಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಸೋಮವಾರ ಅಧಿಕಾರಿಗಳ ಜತೆ ಶಿರಾಡಿ ಘಾಟಿ ಕಾಮಗಾರಿಯ ಪರಿಶೀಲಿಸಿ ಸಂಚಾರಕ್ಕೆ ಮುಕ್ತಗೊಳಿಸುವ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸಂಸದ ಳಿನ್ ಕುಮಾರ್ ಕಟೀಲು ಹೇಳಿದರು.
ಮಿಶನ್ ಅಂತ್ಯೋದಯಕ್ಕೆ ಅಕ್ಟೋಬರ್ 2ರಂದು ಚಾಲನೆ
ಬಡತನ ನಿರ್ಮೂಲನೆಗೆ ಸಂಬಂಧಿಸಿ ಗ್ರಾಮ ಪಂಚಾಯತ್ಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವನಿಟ್ಟಿನಲ್ಲಿ ಕೇಂದ್ರ ಸರಕಾರದ ಮಹತ್ವದ ಯೋಜನೆಗೆ ದ.ಕ. ಜಿಲ್ಲಾ ಪಂಚಾಯತ್ನಿಂದ 97 ಗ್ರಾ.ಪಂ.ಗಳು ಆಯ್ಕೆಯಾಗಿದ್ದು, ಅಕ್ಟೋಬರ್ 2ರಿಂದ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ಜಿ.ಪಂ. ಯೋಜನಾ ನಿರ್ದೇಶಕ ಟಿ.ಎಸ್. ಲೋಕೇಶ್ ಮಾಹಿತಿ ನೀಡಿದರು.
ತಾಲೂಕುವಾರು ಮಂಗಳೂರಿನಲ್ಲಿ 38, ಬಂಟ್ವಾಳದಲ್ಲಿ 16, ಬೆಳ್ತಂಗಡಿಯಲ್ಲಿ 4, ಪುತ್ತೂರಿನಲ್ಲಿ 34 ಹಾಗೂ ಸುಳ್ಯದಲ್ಲಿ 7 ಗ್ರಾ.ಪಂ.ಗಳು ಈ ಯೋಜನೆಗೆ ಆಯ್ಕೆಯಾಗಿವೆ. ಬ್ಯಾಂಕ್ ಶಾಖೆ, ಎಟಿಎಂ, ಸಂಪರ್ಕ ರಸ್ತೆಗಳಿಲ್ಲದ ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಎರಡು ವರ್ಷಗಳಲ್ಲಿ ಈ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶವನ್ನು ಯೋಜನೆ ಹೊಂದಿದೆ ಎಂದು ಅವರು ಹೇಳಿದರು.
ಜನರ ಕರೆಗೆ ಉತ್ತರಿಸದ ಅಧಿಕಾರಿಗಳನ್ನೇ ನಾಟ್ ರೀಚೆಬಲ್ ಮಾಡಬೇಕಾಗುತ್ತದೆ: ಅಧಿಕಾರಿಗಳಿಗೆ ಸಂಸದ ನಳಿನ್ ಖಡಕ್ ಎಚ್ಚರಿಕೆ
ಮಳೆಹಾನಿಯಂತಹ ತುರ್ತು ಸಂದರ್ಭಗಳಲ್ಲಿ ತುರ್ತು ಕ್ರಮಗಳಿಗೆ ಜನರಿಗೆ ಅಥವಾ ಜನಪ್ರತಿನಿಧಿಗಳಿಗೆ ಕನಿಷ್ಠ ದೂರವಾಣಿ, ಮೊಬೈಲ್ಗೆ ಸಂಪರ್ಕಕ್ಕೆ ಸಿಗದ, ನಾಟ್ ರೀಚೆಬಲ್ ಆಗಿರುವ ಅಧಿಕಾರಿಗಳನೇ ನೀರಿಲ್ಲದ ಕಡೆಗೆ ನಾಟ್ ರೀಚೆಬಲ್ ಮಾಡಬೇಕಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಖಡಕ್ ಎಚ್ಚರಿಕೆ ನೀಡಿರು.
ಮಳೆಹಾನಿ ಕುರಿತಾದ ಚರ್ಚೆಯ ಸಂದರ್ಭ ಸಭೆಯಲ್ಲಿ ಜನರಿಂದ ಮೆಸ್ಕಾಂ ಅಧಿಕಾರಿಗಳು ಮೊಬೈಲ್ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂಬ ದೂರು ಬರುತ್ತದೆ ಎಂದು ಸಂಸದರು ಪ್ರಸ್ತಾಪಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿಯೊಬ್ಬರು, ಮಳೆಹಾನಿಗೆ ಸಂಬಂಧಿಸಿ ಸಾಕಷ್ಟು ಕರೆಗಳು ಬರುತ್ತವೆ. ಕರೆಗಳು ಜಾಸ್ತಿ ಬರುವುದರಿಂದ ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಅಸಹಾಯಕತೆ ಪ್ರದರ್ಶಿಸಿದರು.
ಇದರಿಂದ ಬೇಸರಗೊಂಡ ಸಂಸದ ನಳಿನ್, ತುರ್ತು ಸಂದರ್ಭಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಲು ಆಗದಿದ್ದರೆ ಏನು ಪ್ರಯೋಜನ. ಅಧಿಕಾರಿಗಳಿಂದ ಸ್ಪಂದನೆ ಸಿಗದಿದ್ದರೆ ಜನರು ಜನಪ್ರತಿನಿಧಿಗಳಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಕರೆ ಸ್ವೀಕರಿಸಿ, ಸಮಸ್ಯೆಗೆ ಸ್ಪಂದಿಸಿದರೆ ಜನರು ಸಮಾಧಾನ ಪಡುತ್ತಾರೆ. ಜನರ ಕೆಲಸ ಮಾಡುವುದು ಕರ್ತವ್ಯ. ಅದು ಬಿಟ್ಟು ತುರ್ತು ಸಂದರ್ಭಗಳಿಗೂ ಈರೀತಿಯ ನೆಪ ಹೇಳುವುದು ಸರಿಯಲ್ಲ. ಅಧಿಕಾರಿಗಳಿಗೆ ರವಿವಾರ, ಸರಕಾರಿ ರಜೆ ಎಂದೆಲ್ಲಾ ಇರುತ್ತದೆ. ರಾಜಕಾರಣಗಳಿಗೆ ಯಾವುದೇ ರಜೆ ಇಲ್ಲ. ಕಳೆದ ಒಂಭತ್ತು ವರ್ಷಗಳಲ್ಲಿ ನಾನು ಒಂದು ರಜೆ ಮಾಡಿಲ್ಲ. ನೆರೆ, ಮಳೆ ಸೇರಿದಂತೆ ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ನಿರ್ಲಕ್ಷ ವಹಿಸಬಾರದು. ಯಾವುದೇ ಅಧಿಕಾರಿ ಇಂತಹ ಸಂದರ್ಭಗಳಲ್ಲಿ ನಾಟ್ ರೀಚೆಬಲ್ ಆಗಿದ್ದಲ್ಲಿ ಅವರನ್ನೇ ನಾಟ್ ರೀಚೆಬಲ್ ಮಾಡಬೇಕಾಗುತ್ತೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.