‘ತಾಂತ್ರಿಕ ಕಾರಣ’ದಿಂದ ಏರ್ ಇಂಡಿಯಾ ವಿಮಾನಯಾನ ಆರು ಗಂಟೆ ವಿಳಂಬ
ಹೊಸದಿಲ್ಲಿ,ಜೂ.30: ಇಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶನಿವಾರ ನಸುಕಿನ 5:10ಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾದ ದಿಲ್ಲಿ-ಕೊಚ್ಚಿ-ದುಬೈ ವಿಮಾನದ ಸುಮಾರು 170 ಪ್ರಯಾಣಿಕರು ಸುಮಾರು ಆರು ಗಂಟೆಗಳ ಕಾಲ ನಿಲ್ದಾಣದಲ್ಲಿಯೇ ಅತಂತ್ರರಾಗಿದ್ದು,ತಾಂತ್ರಿಕ ಕಾರಣಗಳಿಂದ ಯಾನವು ವಿಳಂಬಗೊಂಡಿತ್ತು ಎಂದು ಏರ್ ಇಂಡಿಯಾ ಹೇಳಿದೆ.
ಆದರೆ ಸಿಬ್ಬಂದಿಗಳ ಅಲಭ್ಯತೆಯಿಂದಾಗಿ ವಿಮಾನ ಯಾನವು ವಿಳಂಬಗೊಂಡಿತ್ತು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಸಿಬ್ಬಂದಿ ಸಮಸ್ಯೆ ಬಗೆಹರಿದ ನಂತರ ಪೂರ್ವಾಹ್ನ 11 ಗಂಟೆಗೆ ವಿಮಾನವು ತನ್ನ ಪ್ರಯಾಣವನ್ನು ಆರಂಭಿಸಿತು ಎಂದು ಮೂಲಗಳು ತಿಳಿಸಿದವು.
ಶುಕ್ರವಾರ ರಾತ್ರಿ ಹೊರಡಬೇಕಿದ್ದ ದಿಲ್ಲಿ-ಟೋಕಿಯೊ ವಿಮಾನದ 171 ಪ್ರಯಾಣಿಕರು ಸಹ ವಿಮಾನದ ವಾತಾನುಕೂಲ ವ್ಯವಸ್ಥೆಯಲ್ಲಿನ ತೊಂದರೆಯಿಂದಾಗಿ ಸುಮಾರು ಏಳು ಗಂಟೆಗಳ ಕಾಲ ನಿಲ್ದಾಣದಲ್ಲಿಯೇ ಬಾಕಿಯಾಗಿದ್ದರು. ತೊಂದರೆಯನ್ನು ನಿವಾರಿಸಿದ ಬಳಿಕ ನಸುಕಿನ ನಾಲ್ಕು ಗಂಟೆಗೆ ವಿಮಾನವು ತನ್ನ ಯಾನವನ್ನು ಆರಂಭಿಸಿತು ಎಂದೂ ಮೂಲಗಳು ತಿಳಿಸಿದವು.
ಎರಡೂ ವಿಮಾನಗಳ ಪ್ರಯಾಣಿಕರು ಟ್ವಿಟರ್ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.