ಉಪೇಕ್ಷೆಗೊಳಗಾಗಿರುವ ಪ್ರಾಚೀನ ಸ್ಮಾರಕಗಳ ರಕ್ಷಣೆ ಇಂದಿನ ಅಗತ್ಯ: ಡಾ.ಜಗದೀಶ್ ಶೆಟ್ಟಿ

ಉಡುಪಿ, ಜೂ.30: ಉಪೇಕ್ಷೆಗೊಳಗಾಗಿರುವ ಪ್ರಾಚೀನ ಸ್ಮಾರಕಗಳನ್ನು ಕಾಳಜಿಯಿಂದ ರಕ್ಷಿಸಿಕೊಳ್ಳುವುದು ಮತ್ತು ಆ ಮೂಲಕ ಇತಿಹಾಸ ಸಂಶೋಧನೆ ಯನ್ನು ಚುರುಕುಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಇತಿಹಾಸ ಸಂಶೋಧಕ ಡಾ.ಬಿ.ಜಗದೀಶ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾ ಡೆಮಿ ಆಫ್ ಹೈಯರ್ ಎಜ್ಯುಕೇಶನ್ನ ಜಂಟಿ ಆಶ್ರಯದಲ್ಲಿ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್.ಹೆಗ್ಡೆ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಐತಿಹಾಸಿಕ ಮಹತ್ವವಿರುವ ಸ್ಥಳಗಳನ್ನು ಸಂರಕ್ಷಿಸದೆ ಇನ್ನಿತರ ಕೆಲಸಗಳಿಗೆ, ರಸ್ತೆಗಳನ್ನು ನಿರ್ಮಿಸುವುದಕ್ಕೆ ಹಾಗೂ ದಾಸ್ತಾನು ಸಂಗ್ರಹಕ್ಕೆ ಬಳಸುತ್ತಿರುವುದು ದುರದೃಷ್ಟಕರ. ಬಾರ್ಕೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐತಿಹಾಸಿಕ ಸ್ಮಾರಕ ಗಳ ದುರ್ಬಳಕೆ ಆಗುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ಕಾರ್ಯ ಪ್ರವೃತ್ತವಾಗದೇ ಹೋದರೆ ಈ ಸ್ಮಾರಕಗಳು ಶಾಶ್ವತವಾಗಿ ಕಣ್ಮರೆಯಾಗುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
‘ತುಳುವ ಇತಿಹಾಸ- ಪೊಳಲಿ ಶೀನಪ್ಪಹೆಗ್ಗಡೆಯವರ ಸೃಷ್ಟಿ, ದೃಷ್ಟಿ’ ಕುರಿತು ಮೂಡಬಿದಿರೆಯ ಇತಿಹಾಸ ಸಂಶೋಧಕ ಡಾ.ಪುಂಡಿಕಾ ಗಣಪಯ್ಯ ಭಟ್ ವಿಶೇಷ ಉಪನ್ಯಾಸ ನೀಡಿ, ತುಳುನಾಡಿನ ಆಧುನಿಕ ಇತಿಹಾಸವನ್ನು ನಾಲ್ಕು ಭಾಗಗಳಾಗಿ ವಿಂಗಡಿಸುತ್ತ ತಮ್ಮ ಸ್ವಾಧ್ಯಾಯ ಮತ್ತು ಸ್ವಂತ ಆಸಕ್ತಿಯಿಂದ ಸಂಶೋಧನೆಗೆ ತೊಡಗಿಕೊಂಡು ಮಹತ್ವದ ಕೊಡುಗೆಗಳನ್ನು ನೀಡಿದ ಪೊಳಲಿ ಶೀನಪ್ಪಹೆಗ್ಗಡೆಯವರು ಮತ್ತು ಗೋವಿಂದ ಪೈಗಳು ಎರಡನೆಯ ಭಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಸಾಹಿತ್ಯದ ಓದು ಮತ್ತು ಬರವಣಿಗೆ ಇಳಿದಾಗ ಮಾತ್ರ ಸಾರ್ಥಕ್ಯತೆ ಸಾಧ್ಯವಾಗುತ್ತದೆ ಎಂದು ಅಭಿ ಪ್ರಾಯ ಪಟ್ಟರು.
ಮುಖ್ಯ ಅತಿಥಿಯಾಗಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಮಾತನಾಡಿದರು. ತೆಂಕನಿಡಿ ಯೂರು ಸರಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಸುರೇಶ್ ರೈ ಅಭಿನಂದನಾ ಭಾಷಣ ಮಾಡಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿದರು. ಪ್ರಶಸ್ತಿ ಸಮಿತಿಯ ಡಾ.ಇಂದಿರಾ ಹೆಗ್ಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಫುಲ್ಲಾ ವಂದಿಸಿದರು. ಸುಶ್ಮಿತಾ ಎ. ಕಾರ್ಯಕ್ರಮ ನಿರೂಪಿಸಿದರು.