ಹನೂರು: ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ
ಹನೂರು,ಜೂ.30: ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಅತ್ಯಂತ ಕೆಳ ಮಟ್ಟದಲ್ಲಿರುವ ಬಡವರನ್ನು ಅಭಿವೃದ್ದಿಯತ್ತ ಕರೆದುಕೊಂಡು ಹೋಗಲು ಈ ಯೋಜನೆ ಸೂಕ್ತ ಮಾರ್ಗ ಸೂಚಿಯಾಗಿದೆ ಎಂದು ಪಿಡಿಒ ಸೋಮಶೇಖರ್ ತಿಳಿಸಿದರು
ಕ್ಷೇತ್ರ ವ್ಯಾಪ್ತಿಯ ಹುತ್ತೂರು ಗ್ರಾಮ ಪಂಚಾಯತ್ 2018-2019ಸಾಲಿನ ಮೊದಲನೇ ಹಂತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದರಲ್ಲಿ ಪ್ರತಿ ಕುಟುಂಬವೂ ಉದ್ಯೋಗ ಪಡೆಯುವುದರ ಮೂಲಕ ಕೂಲಿ ಪಡೆಯಬಹುದಾಗಿದೆ. ಈ ಯೋಜನಯಲ್ಲಿ ಕಳೆದ ಏಪ್ರಿಲ್ನಿಂದ ಒಬ್ಬ ವ್ಯಕ್ತಿಗೆ ಒಂದು ದಿನದ ಕೂಲಿಯಾಗಿ ಈ ಅವಧಿಯಿಂದ 249 ರೂಗಳನ್ನು ನಿಗದಿ ಮಾಡಿದ್ದು, ಈ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು ರಸ್ತೆ ಅಭಿವೃದ್ಧಿ ಸೇರಿದಂತೆ ಸಮುದಾಯದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಆದುದರಿಂದ ಉದ್ಯೋಗ ಪಡೆಯ ಬಯಸುವವರು ಗ್ರಾಪಂಗೆ ನಿಗದಿತ ನಮೂನೆಯ 6ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಮಸ್ಥರು ತಾವೇ ಮುಂದೆ ಬಂದು ಪಂಚಾಯತ್ ನಲ್ಲಿ ಉದ್ಯೋಗ ಕೇಳಿ ವೈಯಕ್ತಿಕ ಕಾಮಗಾರಿಗಳ ಜೊತೆಗೆ ಸಾಮಾಜಿಕ ಕಾಮಗಾರಿಗಳನ್ನು ಮಾಡಿಕೂಂಡು ಈ ಮಹತ್ತರವಾದ ಯೋಜನೆಯನ್ನು ಯಶಸ್ವಿಗೂಳಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಬಸವಣ್ಣ, ಉಪಾಧ್ಯಕ್ಷ ಎಮ್.ಶಾಂತಿ ಸೇರಿದಂತೆ ತಾಲೂಕು ಸಂಯೋಜಕ ಮನೋಹರ್, ಹಾಗೂ ವಿವಿಧ ಅಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.