ಜುಲೈ 1, 2 ರಂದು ಎಸ್ಡಿಪಿಐ ರಾಜ್ಯ ಪ್ರತಿನಿಧಿ ಸಭೆ: ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್
ಮೈಸೂರು,ಜೂ.30: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರತಿನಿಧಿ ಸಭೆ ಹಾಗೂ ಕಾರ್ಯಕಾರಿ ಸಮಿತಿ ಚುನಾವಣೆಯು ಜು.1 ಮತ್ತು 2ರಂದು ನಗರದ ಹೋಟೆಲ್ ನಲಪಾಡ್ ನಲ್ಲಿ ನಡೆಯಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮ ವಿವರ ನೀಡಿ, ಅಂದು ಬೆಳಗ್ಗೆ 10.30ಕ್ಕೆ ಧ್ವಜಾರೋಹಣ, ನಂತರ ನಡೆಯುವ ಸಭಾ ಕಾರ್ಯಕ್ರಮವನ್ನು ಎಸ್ ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಶರಫುದ್ದೀನ್ ಲಕ್ನೋ ಉದ್ಘಾಟಿಸುವರು. ನ್ಯಾಯವಾದಿ ಅಶ್ರಫ್ ಚುನಾವಣಾಧಿಕಾರಿಯಾಗಿ ಭಾಗಿಯಾಗುವರು ಎಂದು ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದಲೂ ಅತ್ಯಂತ ಸಕ್ರಿಯವಾಗಿರುವ ಪಕ್ಷದ ಕಾರ್ಯಕಾರಿಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಚುನಾವಣೆ ನಡೆಸುತ್ತಿದ್ದು, ಇದರಂಗವಾಗಿ 2018-21ರ ಚುನಾವಣೆ ನಡೆಯುತ್ತಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಪಕ್ಷದ ಕಾರ್ಯಕಾರಿ ಸಮಿತಿಗೆ 21 ಜನರನ್ನು ಆಯ್ಕೆ ಮಾಡಲಾಗುವುದು, ಸುಮಾರು 250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗುವರು ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಮಾತನಾಡಿ, ಕೋಮುವಾದ ರಾಜಕಾರಣದ ವಿರುದ್ಧವಾಗಿರುವ ಎಸ್.ಡಿಪಿಐ ಪಕ್ಷವು ಕಳೆದ ಹತ್ತು ವರ್ಷಗಳಿಂದ ದೇಶದ ಹಲವು ರಾಜ್ಯಗಳಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡು ಸುಮಾರು ಗ್ರಾ.ಪಂ, ತಾ.ಪಂ ಸೇರಿದಂತೆ 80ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿಯ ಅಬ್ರಾರ್ ಅಹಮದ್, ನಗರಾಧ್ಯಕ್ಷ ಆಝೂಂ ಪಾಶ, ಪಾಲಿಕೆ ಸದಸ್ಯ ಎಸ್.ಸ್ವಾಮಿ ಉಪಸ್ಥಿತರಿದ್ದರು.